ಜಾತ್ರೆಗೆ ಹೋಗುವಾಗ ಎತ್ತಿನಗಾಡಿ ಡಿಕ್ಕಿಯಾಗಿ ವ್ಯಕ್ತಿ ಸಾವು

ಚಿಕ್ಕಮಗಳೂರು: ಜಾತ್ರೆಗೆ ಎತ್ತಿನ ಗಾಡಿ ಹೊಡೆದುಕೊಂಡು ಬರುವಾಗ ವ್ಯಕ್ತಿಗೆ ಡಿಕ್ಕಿಯಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮೀಪ ನಡೆದಿದೆ.

ಮೃತರನ್ನು ಅಜ್ಜಂಪುರ ತಾಲೂಕಿನ ಅಬ್ಬಿನಹೊಳಲು ಗ್ರಾಮದ, ಗೌರಪುರ ಗ್ರಾಮ ಪಂಚಾಯತಿಯಲ್ಲಿ ವಾಟರ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಜಕಣಚಾರಿ(48) ಎಂದು ಗುರುತಿಸಲಾಗಿದೆ.

ಫೆ.12 ಅದ್ದೂರಿ ಅಂತರಗಟ್ಟೆ ಜಾತ್ರೆ ನಡೆದಿದ್ದು,
ರಥೋತ್ಸವದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.
ಜಾತ್ರೆಗೆ ಸುತ್ತಮುತ್ತಲಿನ ನೂರಾರು ಹಳ್ಳಿಗಳಿಂದ
ಎತ್ತಿನಗಾಡಿಯನ್ನ ಹೊಡೆದುಕೊಂಡು ಬರುವುದು
ಹಿಂದಿನಿಂದಲೂ ಬಂದಿರುವ ರೂಢಿ. ಇದೇ ರೀತಿ ಮೊನ್ನೆ ಸಂಜೆ ಭಕ್ತರು ಎತ್ತಿನಗಾಡಿಯನ್ನ ಜೋಶ್‌ನಲ್ಲಿ ಹೊಡೆದುಕೊಂಡು ಬರುವ ಸಂದರ್ಭದಲ್ಲಿ ಬೆದರಿದ ಎತ್ತುಗಳು ಬೈಕ್‌ನಲ್ಲಿ ಹೋಗುತ್ತಿದ್ದ ಜಕಣಾಚಾರಿ ಬೆನ್ನಿಗೆ ಗುದ್ದಿದೆ.

ಎತ್ತುಗಳು ಗುದ್ದಿದ ಪರಿಣಾಮ ಜಕಣಾಚಾರಿ ಹಾರಿ ರಸ್ತೆ ಪಕ್ಕಕ್ಕೆ ಬಿದ್ದಿದ್ದಾರೆ. ಕೂಡಲೇ ವಿಚಾರ ತಿಳಿದ ಅಜ್ಜಂಪುರ ಪೊಲೀಸರು ಸ್ಥಳಕ್ಕೆ ಧಾವಿಸಿ, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಈ ವೇಳೆ ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಶಿವಮೊಗ್ಗ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.