ಬಾವಿಗೆ ಬಿದ್ದು ಮೂರು ವರ್ಷದ ಬಾಲಕ ದಾರುಣ ಸಾವು

ಬಾವಿಗೆ ಬಿದ್ದು ಮೂರು ವರ್ಷದ ಬಾಲಕ ದಾರುಣವಾಗಿ ಮೃತಪಟ್ಟ ಘಟನೆ ನಿನ್ನೆ ಸಂಜೆ ಕಾಸರಗೋಡಿನ ಅಜನೂರು ಸಮೀಪದ ಮಡಿಯಾನದಲ್ಲಿ ನಡೆದಿದೆ.

ಮಡಿಯಾನದ ಅಬ್ದುಲ್ಲಾರವರ 3 ವರ್ಷದ ಪುತ್ರ ಸಲ್ಮಾನ್ ಮೃತಪಟ್ಟ ಬಾಲಕ.

ಮನೆಯಂಗಳದಲ್ಲಿ ಆಟವಾಡುತ್ತಿದ್ದ ಬಾಲಕ ಬಾವಿಯ ಸಮೀಪ ಬಿದ್ದಿದ್ದ ಚೆಂಡು ತೆಗೆಯಲೆತ್ನಿಸಿದಾಗ ಆಯತಪ್ಪಿ ಬಾವಿಗೆ ಬಿದ್ದು ಈ ದುರ್ಘಟನೆ ನಡೆದಿದೆ. ಬಾವಿಗೆ ಅರ್ಧ ಭಾಗಕ್ಕೆ ಆವರಣ ಗೋಡೆ ಕಟ್ಟಲಾಗಿದ್ದು, ಅದರ ಮೇಲೆ ಪ್ಲಾಸ್ಟಿಕ್ ನೆಟ್ ಹಾಕಲಾಗಿದೆ. ಈ ನೆಟ್ ನಲ್ಲಿ ಚೆಂಡು ಸಿಲುಕಿ ಕೊಂಡಿತ್ತು. ಈ ಚೆಂಡನ್ನು ತೆಗೆಯಲೆತ್ನಿಸಿದಾಗ ಘಟನೆ ನಡೆದಿದೆ ಎನ್ನಲಾಗಿದೆ. ಬಾಲಕ ನಾಪತ್ತೆಯಾದುದರಿಂದ ಗಾಬರಿಗೊಂಡ ಮನೆಯವರು ಹುಡುಕಾಟ ನಡೆಸಿದ್ದು, ಬಾವಿಗೆ ಹಾಕಲಾಗಿದ್ದ ಬಲೆಯ ಒಂದು ಭಾಗ ಬೇರ್ಪಟ್ಟ ಹಿನ್ನಲೆಯಲ್ಲಿ ಗಮನಿಸಿದಾಗ ಬಾವಿಗೆ ಬಿದ್ದಿರುವುದು ಪತ್ತೆಯಾಗಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬಾಲಕನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಬಾಲಕ ಆಗಲೇ ಮೃತ ಪಟ್ಟಿದ್ದ. ಹೊಸದುರ್ಗ ಠಾಣಾ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.