ಹಿಜಾಬ್, ಕೇಸರಿ ಶಾಲ್ ನಡುವೆ ತಲೆಯೆತ್ತಿದೆ ನೀಲಿ ಶಾಲು!! | ‘ಜೈ ಶ್ರೀ ರಾಮ್ ‘ಹಾಗೂ ‘ಜೈ ಭೀಮ್’ ಘೋಷಣೆಗಳ ನಡುವೆ ಪೈ ಪೋಟಿ|ನೀಲಿ ಶಾಲು ಹಿಂದಿರುವ ಸ್ಟೋರಿ ಏನು??

ಚಿಕ್ಕಮಗಳೂರು: ಇಷ್ಟರವರೆಗೆ ನಡೆಯುತ್ತಿದ್ದ ‘ಹಿಜಾಬ್ ‘ ಮತ್ತು ‘ಕೇಸರಿ ಶಾಲ್ ‘ನ ಕದನದ ನಡುವೆ ಮತ್ತೊಂದು ನೀಲಿ ಶಾಲಿನ ತಂಡ ತಲೆಯೆತ್ತಿದೆ.ರಾಜ್ಯದ ನಾನಾ ಜಿಲ್ಲೆಗಳಲ್ಲಿ ಹಿಜಾಬ್​ ವಿರುದ್ಧ ವಿದ್ಯಾರ್ಥಿಗಳು ಕೇಸರಿ ಶಾಲುಗಳನ್ನು ಪ್ರದರ್ಶಿಸಿ ತಮ್ಮ ಹೋರಾಟವನ್ನು ನಡೆಸುತ್ತಿದ್ದರು. ಈಗ ಕೇಸರಿ ವಿರುದ್ಧ ನೀಲಿ ಶಾಲಿನ ವಿದ್ಯಾರ್ಥಿಗಳು ಹಿಜಾಬ್​ಗೆ ಬೆಂಬಲ ಸೂಚಿಸಿ ಹೋರಾಟ ನಡೆಸುತ್ತಿರುವ ಘಟನೆ ಚಿಕ್ಕಮಗಳುರು ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಐಡಿಎಸ್ ಜಿ ಕಾಲೇಜಿನ ವಿದ್ಯಾರ್ಥಿಗಳು, ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದನ್ನು ಬೆಂಬಲಿಸಿ ನೀಲಿ ಶಾಲುಧರಿಸಿ ಬರುವುದರೊಂದಿಗೆ ಕರ್ನಾಟಕ ಹಿಜಾಬ್ ವಿವಾದ ಹೊಸ ತಿರುವು ಪಡೆಯುವಂತೆ ಆಗಿದೆ.ಕಾಲೇಜ್​ನಲ್ಲಿ ಹಿಜಾಬ್​ ತೆಗೆಸಬಾರದು ಎಂದು ನೀಲಿ ಶಾಲು ಧರಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಜೈ ಭೀಮ್ ಘೋಷಣೆ ಕೂಗುತ್ತಾ ಕೆಲ ನೀಲಿ ಶಾಲು ಧರಿಸಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಪ್ರತಿಯಾಗಿ ಕೇಸರಿ ಶಾಲು ಧರಿಸಿರುವ ವಿದ್ಯಾರ್ಥಿಗಳಿಂದ ಜೈ ಶ್ರೀರಾಮ್ ಘೋಷಣೆಯಾಗುತ್ತಿದೆ.ಮೊದಲಿನಿಂದಲೂ ಕಾಲೇಜ್​ನಲ್ಲಿ ಹಿಜಾಬ್​ ಸಂಸ್ಕೃತಿ ನಡೆಯುತ್ತಲೇ ಬಂದಿದೆ. ಈಗ ಏಕೆ ಹಿಜಾಬ್​ ತಿರಸ್ಕರಿಸಬೇಕು. ಅವರಿಂದ ನಮಗೇನು ನಷ್ಟವಾಗಿದೆ ಎಂದು ನೀಲಿ ಶಾಲಿನ ವಿದ್ಯಾರ್ಥಿಗಳ ವಾದವಾಗಿದೆ.

ಪ್ರಸ್ತುತ ನವದೆಹಲಿಯಲ್ಲಿರುವ ಬೊಮ್ಮಾಯಿ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಹೊರಡಿಸಲಾದ ರಾಜ್ಯ ಸರ್ಕಾರದ ಆದೇಶವನ್ನು ಎಲ್ಲಾ ವಿದ್ಯಾರ್ಥಿಗಳು ಅನುಸರಿಸಬೇಕು ಎಂದು ಹೇಳಿದರು.ವಿದ್ಯಾರ್ಥಿಗಳು ಶಾಂತಿಯನ್ನು ಕದಡುವ ಯಾವುದೇ ಪ್ರಯತ್ನಗಳನ್ನು ಮಾಡಬಾರದು ಎಂದು ಅವರು ಹೇಳಿದರು.’ನ್ಯಾಯಾಲಯದ ಆದೇಶ ನಾಳೆ ಬರಲಿದ್ದು,ಆದೇಶ ಬಂದ ನಂತರ ರಾಜ್ಯ ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ. ಪ್ರಕರಣವು ನ್ಯಾಯಾಲಯದ ಮುಂದೆ ಇರುವಂತೆ ನಾನು ಅದರ ಬಗ್ಗೆ ಮಾತನಾಡಲು ಬಯಸುವುದಿಲ್ಲ’ಎಂದು ಹೇಳಿದ್ದಾರೆ.

ಹಿಜಾಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ಆದೇಶದ ಬಗ್ಗೆ ತಾವು ತಲೆಕೆಡಿಸಿಕೊಂಡಿಲ್ಲ ಮತ್ತು ಈ ಬಗ್ಗೆ ಕರ್ನಾಟಕದ ಹೈಕೋರ್ಟ್ ನ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.ಹಿಜಾಬ್ ಗೆ ಅನುಮತಿ ನೀಡುವವರೆಗೂ ಕೇಸರಿ ಶಾಲು ಧರಿಸಿ ಬರುವುದಾಗಿ ಹಿಂದೂ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ದಿನದಿಂದ ದಿನಕ್ಕೆ ಕಾಲೇಜಿನಲ್ಲಿ ವಿವಾದ ನಾನಾ ತಿರುವುಗಳನ್ನು ಪಡೆಯುತ್ತಿದ್ದು,ಮುಂದಿನ ದಿನಗಳಲ್ಲಿ ಇನ್ನೂ ಯಾವ ಮಟ್ಟಕ್ಕೆ ಪ್ರಕರಣ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.

Leave A Reply

Your email address will not be published.