ಚೀನಾದಲ್ಲಿ ನಡೆಯಲಿರುವ ಒಲಿಂಪಿಕ್ಸ್ ನ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭವನ್ನು ಬಹಿಷ್ಕರಿಸಿದ ಭಾರತ !!

ಭಾರತ ಚೀನಾದ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಂತೆಯೇ ಈ ಬಾರಿ ಚೀನಾದಲ್ಲಿ ನಡೆಯಲಿರುವ ಬೀಜಿಂಗ್ ಒಲಿಂಪಿಕ್ಸ್‌ನ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭವನ್ನು ಬಹಿಷ್ಕರಿಸಲು ಭಾರತ ಮುಂದಾಗಿದೆ.

ಗಲ್ವಾನ್ ಘರ್ಷಣೆಯಲ್ಲಿ ಬಾಗಿಯಾಗಿದ್ದ ಚೀನಾ ಸೇನೆಯ ಅಧಿಕಾರಿಯೊಬ್ಬರು ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ ಸಾಂಪ್ರದಾಯಿಕ ಜ್ಯೋತಿ ಹಿಡಿದ ಬೆನ್ನಲ್ಲೇ ಭಾರತ ಒಲಿಂಪಿಕ್ಸ್‌ಗೆ ಬಹಿಷ್ಕಾರ ಹಾಕಿದೆ. ಈ ಬಗ್ಗೆ ಭಾರತೀಯ ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ಅಸಮಾಧಾನ ಹೊರಹಾಕಿದ್ದು,  ಕ್ರೀಡೆಯಲ್ಲಿ ಚೀನಾ ರಾಜಕಾರಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಭಾರತ ರಾಜತಾಂತ್ರಿಕ ಬಹಿಷ್ಕಾರಕ್ಕೆ ಮುಂದಾಗಿದೆ. ಬೀಜಿಂಗ್‍ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾರತೀಯರು ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಕ್ಕೆ ಭಾಗವಹಿಸದಿರಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಇದಲ್ಲದೆ ಒಲಿಂಪಿಕ್ಸ್‌ನ ನೇರ ಪ್ರಸಾರ ನೀಡುವ ಡಿಡಿ ಸ್ಫೋರ್ಟ್ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭದ ಪ್ರಸಾರವನ್ನು ಮಾಡದಿರಲು ತೀರ್ಮಾನಿಸಿದೆ ಎಂದು ಪ್ರಸಾರ ಭಾರತೀಯ ಸಿಇಒ ಶಶಿ ಶೇಖರ್ ವೆಂಪಾಟಿ ತಿಳಿಸಿದ್ದಾರೆ.

ಬೀಜಿಂಗ್ ಚಳಿಗಾಳದ ಒಲಿಂಪಿಕ್ಸ್ ಇಂದು ಆರಂಭವಾಗುತ್ತಿದೆ. ಇದೀಗ ಒಲಿಂಪಿಕ್ಸ್‌ನ ಭಾಗವಾಗಿ ಪೀಪಲ್ಸ್ ಲಿಬರೇಶನ್ ಆರ್ಮಿ ರೆಜಿಮೆಂಟ್ ಕಮಾಂಡರ್ ಕೀ ಫಾಬಾವೊ ಚಳಿಗಾಲದ ಒಲಿಂಪಿಕ್ಸ್‌ ಜ್ಯೋತಿ ಹಿಡಿದಿದ್ದಾರೆ. 2020ರ ಗಾಲ್ವಾನ್ ಕಣಿವೆ ಘರ್ಷಣೆಯಲ್ಲಿ ಭಾಗಿಯಾಗಿದ್ದ ಕೀ ಫಾಬಾವೋ ತಲೆಗೆ ಗಂಭೀರ ಗಾಯವಾಗಿತ್ತು. ಜ್ಯೋತಿ ಹಿಡಿದ ಕ್ವಿ ಫಾಬಾವೊರನ್ನು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್‌ ಟೈಮ್ಸ್‌ ಹೀರೋ ಎಂದು ಬಣ್ಣಿಸಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಭಾರತ ದಿಟ್ಟ ನಿರ್ಧಾರ ಕೈಗೊಂಡಿದೆ.

ಭಾರತೀಯ ಸೈನಿಕರು 2020 ಜೂನ್ 15ರ ರಾತ್ರಿ ಗಾಲ್ವಾನ್ ಕಣಿವೆಯ ಎಲ್‌ಎಸಿ(ವಾಸ್ತವಿಕ ಗಡಿ ರೇಖೆ) ಜಾಗಕ್ಕೆ ತೆರಳಿ ಚೀನಾ ಅಕ್ರಮವಾಗಿ ನಿರ್ಮಿಸಿದ್ದ ಟೆಂಟ್‌ ಕಿತ್ತು ಎಸೆದಿದ್ದಾರೆ. ಈ ವೇಳೆ ಚೀನಾದ ಕರ್ನಲ್ ಕಿ ಫಾಬಾವೊ ಮತ್ತು 150 ಚೀನೀ ಸೈನಿಕರು ಭಾರತೀಯ ಸೈನಿಕರೊಂದಿಗೆ ಸಮಸ್ಯೆಯನ್ನು ಚರ್ಚಿಸುವ ಬದಲು ಘರ್ಷಣೆಗೆ ಇಳಿದಿದ್ದರು ಎಂದು ಇತ್ತೀಚೆಗೆ ವರದಿಯಾಗಿದೆ.

Leave A Reply

Your email address will not be published.