ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ನಾಪತ್ತೆ ಪ್ರಕರಣಕ್ಕೆ ತಿರುವು!! ಮುಸ್ಲಿಂ ಎಂದು ಗೊತ್ತಿದ್ದರೂ ಆತನನ್ನು ಪ್ರೀತಿಸಿದ್ದೇನೆ ಎಂದವಳು ಅತ್ಯಾಚಾರ ಪ್ರಕರಣ ದಾಖಲಿಸಿದ್ದೇಕೆ!??
ಶೃಂಗೇರಿಯಲ್ಲಿ ಯುವತಿಯೊಬ್ಬಳು ನಾಪತ್ತೆಯಾಗಿರುವ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ವೊಂದು ದೊರಕಿದೆ. ನಾಪತ್ತೆಯಾಗಿರುವ ಯುವತಿ ವೀಡಿಯೋ ಮೂಲಕ ತಿರುಗೇಟು ನೀಡಿದ್ದಾಳೆ.
ತಾನು ತನ್ನಿಷ್ಟದಂತೆ ತಾನು ಪ್ರೀತಿಸುತ್ತಿರುವ ಯುವಕನ ಜೊತೆ ತೆರಳಿದ್ದು, ನಾವಿಬ್ಬರೂ ಮದುವೆಯಾಗಲಿದ್ದೇವೆ ಎಂದು ಹೇಳಿರುವ ಮಾತಿನ ವೀಡಿಯೋವೊಂದು ಈಗ ವೈರಲ್ ಆಗಿದೆ.
ಶೃಂಗೇರಿ ತಾಲೂಕಿನ ಕಿಗ್ಗಾ ಗ್ರಾಮದ ಹಿಂದೂ ಸಮುದಾಯ ಯುವತಿಗೆ ಈ ಹಿಂದೆ ಶಿವಮೊಗ್ಗದಲ್ಲಿ ಕಾಲೇಜು ಓದುತ್ತಿದ್ದ ಸಂದರ್ಭದಲ್ಲಿ ಮೂಡಿಗೆರೆ ಪಟ್ಟಣದ ಬಾಪು ಜುನೈದ್ ಎಂಬಾತನ ಪರಿಚಯವಾಗಿದೆ. ನಂತರ ಪರಿಚಯ ಪ್ರೀತಿಗೆ ತಿರುಗಿದೆ ಎನ್ನಲಾಗಿದೆ. ನಂತರ ಜುನೈದ್ ನ ವಿರುದ್ಧವೇ ಯುವತಿ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು. ಜುನೈದ್ ತನ್ನನ್ನು ಹಿಂದೂ ಸಮುದಾಯದವನೆಂದು ಹೇಳಿ ಪರಿಚಯ ಮಾಡಿಕೊಂಡಿದ್ದ. ಆಗಾಗ್ಗೆ ಭೇಟಿಯಾಗುತ್ತಿದ್ದ. ಲೈಂಗಿಕವಾಗಿ ಬಳಸಿಕೊಂಡಿದ್ದಾಗಿ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಜುನೈದ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿ, ನಂತರ ಸುಮಾರು 2 ತಿಂಗಳ ಕಾಲ ಜೈಲಿನಲ್ಲಿದ್ದು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಎನ್ನಲಾಗಿದೆ.
ಈಗ ಜುನೈದ ನೊಂದಿಗೆಯೇ ಅತ್ಯಾಚಾರ ಪ್ರಕರಣ ದಾಖಲಿಸಿದ ಯುವತಿ ನಾಪತ್ತೆಯಾಗಿದ್ದಾಳೆಂದು ಹೇಳಲಾಗುತ್ತಿದ್ದು, ಲವ್ ಜಿಹಾದ್ ಗೆ ಉಪಯೋಗಿಸಿಕೊಂಡಿದ್ದಾರೆ ಎಂದು ಆರೋಪಿಸಿ ಶೃಂಗೇರಿ ತಾಲೂಕಿನ ಬಜರಂಗದಳದ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹರಿಯ ಬಿಟ್ಟಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಈಗ ಜುನೈದ್ ನೊಂದಿಗೆ ನಾಪತ್ತೆಯಾಗಿದ್ದಾಳೆಂದು ಹೇಳಲಾಗುತ್ತಿರುವ ಯುವತಿ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾಳೆ.
ನಾನು ಜುನೈದ್ ನನ್ನು ಪ್ರೀತಿಸುತ್ತಿರುವುದಾಗಿಯೂ, ಆತ ಮುಸ್ಲಿಂ ಸಮುದಾಯದವನು ಎಂಬ ಸತ್ಯ ನನಗೆ ಮೊದಲೇ ಗೊತ್ತಿತ್ತು. ನಾನು ಮುಸ್ಲಿಂ ಸಮುದಾಯದ ಯುವಕನನ್ನು ಪ್ರೀತಿ ಮಾಡುತ್ತಿದ್ದೇನೆಂದು ಬಜರಂಗದಳದವರು ನಮ್ಮಿಬ್ಬರನ್ನು ಬೇರೆ ಮಾಡುವ ಉದ್ದೇಶಕ್ಕಾಗಿ ನನ್ನ ಮನೆಯ ಬಳಿ ಬಂದು ಗಲಾಟೆ ಮಾಡಿ ನಮ್ಮಿಬ್ಬರನ್ನು ಬೇರೆ ಮಾಡಿದ್ದರು. ಆತ ಮುಸ್ಲಿಂ ಎಂದು ನಾನು ಮೊದಲೇ ಹೇಳಿದರೆ ಜುನೈದ್ ಗೆ ಏನಾದರೂ ಮಾಡುತ್ತೇವೆ ಎಂದು ಜೀವಬೆದರಿಕೆ ಹಾಕಿದ್ದರು. ನಮ್ಮಿಬ್ಬರನ್ನು ಸಂಪರ್ಕಿಸದಂತೆ ದೂರ ಮಾಡಿದ್ದರು. ನಾನು ಜುನೈದ್ ನನ್ನು ಇಷ್ಟ ಪಟ್ಟಿದ್ದು, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೇವೆ. ನಾನು ಜುನೈದ್ ನೊಂದಿಗೆ ಹೋಗುತ್ತಿದ್ದೇನೆ. ನಾವಿಬ್ಬರೂ ಮದುವೆ ಆಗುತ್ತೇವೆ. ನನ್ನ ಮೇಲೆ ಯಾರ ಒತ್ತಡವೂ ಇಲ್ಲ, ನನ್ನ ಹಾಗೂ ಜುನೈದ್ ಕುಟುಂಬಕ್ಕೆ ಬಜರಂಗದಳದವರಿಂದ ಯಾವುದೇ ತೊಂದರೆ ಆಗಬಾರದು ‘ ಎಂದು ವೀಡಿಯೋದಲ್ಲಿ ಹೇಳಿದ್ದಾಳೆ.
ಹೀಗಾಗಿ ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದಾಳೆಂದು ಬಜರಂಗದಳದ ಮುಖಂಡರು ಆರೋಪಿಸುತ್ತಿದ್ದರೂ ಯುವತಿ ನಾಪತ್ತೆಯಾಗಿರುವ ಅಥವಾ ಆಕೆಯನ್ನು ಅಪಹರಿಸುವ ಬಗ್ಗೆ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ