ದೇಶದ ಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾದ ಮಹಾಲಿಂಗ ನಾಯ್ಕ್ ಗೆ ಜಿಲ್ಲಾಡಳಿತದಿಂದ ನಡೆಯಿತೇ ಅವಮಾನ!? ಹೆಸರಿಲ್ಲದ ಸ್ಮರಣಿಕೆ ನೀಡಿ ಖುಷಿ ಆಂಡೆ ಎಂದು ಅಗೌರವ ತೋರಿದ ನಡೆಗೆ ವ್ಯಕ್ತವಾಗಿದೆ ಆಕ್ರೋಶ

ಮಂಗಳೂರು: ನೆಹರು ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ವಿಟ್ಲ ತಾಲೂಕಿನ ಅಮೈ ಮಹಾಲಿಂಗ ನಾಯ್ಕ್ ರಿಗೆ ಸನ್ಮಾನ ನಡೆಯುವ ಸಂದರ್ಭದಲ್ಲಿ ಹೆಸರಿಲ್ಲದ ಸ್ಮರಣಿಕೆಯೊಂದನ್ನು ನೀಡಿ ಗೌರವಿಸಿದ ವಿಚಾರ ಚರ್ಚೆಗೆ ಕಾರಣವಾಗಿದೆ.

ಬುದ್ಧಿವಂತರ ಜಿಲ್ಲೆಯಲ್ಲಿ ಇಂತಹ ತಪ್ಪುಗಳು, ಅದರಲ್ಲೂ ಜನಪ್ರತಿನಿಧಿಗಳಿಂದ ನಡೆಯುತ್ತಿದೆ ಎಂದರೆ ಅರ್ಥವೇನು? ಅತ್ಯಂತ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದ ಓರ್ವ ವ್ಯಕ್ತಿಯನ್ನು ಈ ರೀತಿ ಅಗೌರವ ತೋರಿ ಅವಮಾನಿಸುವ ಕೆಲಸಕ್ಕೆ ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು ಕೈಹಾಕಿದ್ದಾರೆಯೇ? ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಈ ಮಧ್ಯೆ ಸನ್ಮಾನ ಮಾಡಿದ ಜಿಲ್ಲಾ ನೂತನ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರು ಖಾಲಿ ಸ್ಮರಣಿಕೆಯನ್ನು ನೀಡಿ’ಖುಷಿ ಆಂಡ,ನನಲ ಎಡ್ಡೆ ಬೇಲೆ ಮಲ್ಪುಲೇ’ಎಂದು ಹೇಳಿದ್ದರಾದರೂ ಹೆಸರಿಲ್ಲದ ಸ್ಮರಣಿಕೆ ನೀಡಿ ಪೇಚಿಗೆ ಸಿಲುಕಿದ್ದಾರೆ.

ಓರ್ವ ಸಾಧಕನಿಗೆ ಈ ರೀತಿಯ ಗೌರವ ತೋರಿರುವುದು ಸರಿಯಲ್ಲ, ಅಚಾನಕ್ ಆಗಿ ತಪ್ಪು ನಡೆದಿದ್ದೇ ಆದರೆ ಈ ಬಗ್ಗೆ ಜನಪ್ರತಿನಿಧಿಯಾಗಲಿ, ಜಿಲ್ಲಾಡಳಿತವಾಗಲಿ ಮೌನ ಮುರಿದಿದ್ದು ಯಾಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮನೆಮಾಡಿದೆ.

Leave A Reply

Your email address will not be published.