ಕುಣಿಗಲ್ :ಮಂಗಳೂರು ಮೂಲದವರಿದ್ದ ಕಾರು ಹಾಗೂ ಟ್ರಾಕ್ಟರ್ ನಡುವೆ ಭೀಕರ ರಸ್ತೆ ಅಪಘಾತ!! ಓರ್ವ ಯುವಕ ಮೃತ್ಯು-ನಾಲ್ವರಿಗೆ ಗಾಯ

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯ ಕುಣಿಗಲ್ ಸಮೀಪ ಕಾರು ಮತ್ತು ಮರ ಸಾಗಿಸುತಿದ್ದ ಟ್ರಾಕ್ಟರ್ ನಡುವೆ ಡಿಕ್ಕಿ ಸಂಭವಿಸಿ ಮಂಗಳೂರು ಮೂಲದ ಯುವಕನೊಬ್ಬ ಮೃತಪಟ್ಟ ಘಟನೆ ಜನವರಿ 22ರ ರಾತ್ರಿ ನಡೆದಿದೆ.

ಮೃತ ಯುವಕನನ್ನು ಜೋಯಲ್ ಟೆರೆನ್ಸ್ ಫೆರ್ನಾಂಡಿಸ್ (28) ಎಂದು ಗುರುತಿಸಲಾಗಿದ್ದು, ಸಹ ಪ್ರಯಾಣಿಕರಾದ ರಾಯನ್ ಡಿಕೋಸ್ಟ, ಡೆಂಜಿಲ್ ಪೈಸ್, ಪ್ರವೀಣ್ ಮೊರಾಸ್, ಫ್ರಾನ್ಸಿಸ್ ಮೊರಾಸ್ ಎಂಬ ನಾಲ್ವರ ಪೈಕಿ ಓರ್ವ ಗಾಯಗೊಂಡಿದ್ದು ಇತರರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತ ನಡೆದ ಸಂದರ್ಭ ಅದೇ ರಸ್ತೆಯಲ್ಲಿ ಬೆಂಗಳೂರಿನಿಂದ ಉಪ್ಪಿನಂಗಡಿಗೆ ಬರುತ್ತಿದ್ದ ಶರೀಫ್ ಕರ್ವೆಲ್ ಹಾಗೂ ರಿಫಾಯಿ ಎಂಬವರು ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು. ಅಪಘಾತ ನಡೆದ ಕೂಡಲೇ ಮಂಗಳೂರು ನೋಂದಣಿಯ ವಾಹನವೊಂದು ಅಪಘಾತವಾಗಿದೆ, ಓರ್ವ ಯುವಕ ಮೃತಪಟ್ಟಿದ್ದಾನೆ ಎಂಬ ಸುದ್ದಿಯು ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿತ್ತು.

ರಕ್ಷಿಸಲ್ಪಟ್ಟ ಗಾಯಳು ಮಹಿಳೆಯೊಬ್ಬರು ಮಾನವೀಯತೆ ಮೆರೆದ ಶರೀಫ್ ಹಾಗೂ ರಿಫಾಯಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಗಾಯಳುಗಳನ್ನು ರಕ್ಷಿಸುವುದರೊಂದಿಗೆ ವಾಹನದಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಹಿಂದಿರುಗಿಸಿದ ಶರೀಫ್ ಹಾಗೂ ರಿಫಾಯಿ ಅವರ ಕಾರ್ಯಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

Leave A Reply

Your email address will not be published.