ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕ ವಿಕಾಸ ಸಪ್ತಾಹ ಸಮಾರೋಪ ಕಾರ್ಯಕ್ರಮ

ಪುತ್ತೂರು.ಜ.೨೧: ವಿವೇಕಾನಂದರ ಹೆಸರು ಕೇಳಿದರಷ್ಟೇ ಸಾಕು ಎಲ್ಲರಲ್ಲೂ ಅಗಾಧವಾದ ಒಂದು ಶಕ್ತಿ ಜಾಗೃತವಾಗುವುದು. ಅಲ್ಲದೇ ನಾವು ಭಾರತದ ಬಗ್ಗೆ ತಿಳಿಯಬೇಕಾದರೆ ವಿವೇಕಾನಂದರ ಜೀವನವನ್ನು ತಿಳಿದರೆ ಸಾಕು ಎಂದು ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮೀಜಿ ರಘುರಾಮನಂದಜಿ ಹೇಳಿದರು .

ಇವರು ಇಲ್ಲಿನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ವಿವೇಕ ವಿಕಾಸ ಸಪ್ತಾಹ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ನಾವು ವಿವೇಕಾನಂದರ ವ್ಯಕ್ತಿತ್ವವನ್ನು ಬೇರೆ ಬೇರೆ ರೀತಿಯಲ್ಲಿ ಕಾಣುತ್ತೇವೆ. ಸಂತನ ರೂಪದಲ್ಲಿ, ಯೋಧನ ರೂಪದಲ್ಲಿ ದರ್ಶನವಾಗುತ್ತದೆ ಅಲ್ಲದೇ ವಿವೇಕಾನಂದರ ಗುರು ರಾಮಕೃಷ್ಣ ಪರಮಹಂಸರಿಗೆ ಜಗತ್ತಿನ ಕಲ್ಯಾಣಕ್ಕಾಗಿ ನರರೂಪಿ ನಾರಾಯಣ ವಿವೇಕಾನಂದರಾಗಿ ಜನಿಸಿದ್ದಾರೆ ಎಂದರು. ಶಕ್ತಿಯೆ ಜೀವನ, ದೌರ್ಬಲ್ಯವೇ ಮರಣ, ದೌರ್ಬಲ್ಯರಿಗೆ ನರಕದಲ್ಲಿ ಜಾಗ ಇಲ್ಲ ಯಾರು ಬಲಹೀನರಾಗಿರುತ್ತಾರೆ ಅವರಿಗೆ ಆತ್ಮಸಾಕ್ಷಾತ್ಕಾರ ಅಸಾಧ್ಯ . ವಿವೇಕಾನಂದರಲ್ಲಿ ಇಚ್ಛಾಶಕ್ತಿ , ಜ್ಞಾನಶಕ್ತಿ, ಕ್ರಿಯಾಶಕ್ತಿ, ಇತ್ತು . ಯಾವುದೇ ಕೆಲಸ ಆಗುವುದಿಲ್ಲ ಎನ್ನುವ ಮಾತು ಅವರಲ್ಲಿರಲಿಲ್ಲ . ವಿವೇಕಾನಂದರ ಜೀವನ ಆದರ್ಶಮಯವಾದದ್ದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ರವೀಂದ್ರ .ಪಿ ಮಾತನಾಡಿ ಶಿಕ್ಷಣದ ಮೂಲ ಉದ್ದೇಶವೇ ವಿವೇಕವನ್ನು ವಿಕಾಸ ಮಾಡುವುದು .ಯುವಕರನ್ನು ಬಡಿದೆಬ್ಬಿಸಿದರೆ ಭಾರತವನ್ನು ಬಡಿದೆಬ್ಬಿಸಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಮ್ . ಕೃಷ್ಣ ಭಟ್ ಮಾತನಾಡಿ ವಿವೇಕ ವಿಕಾಸ ಸಪ್ತಾಹದಲ್ಲಿ ಆಗುವಂತಹ ವಿಷಯ ಅಲ್ಲ ಅದು ಒಂದು ನಿರಂತರ ಪ್ರಕ್ರಿಯೆ ಅದಕ್ಕೆ ಸಪ್ತಾಹ ಒಂದು ಕಾರಣವಷ್ಟೇ ವಿವೇಕದಿಂದ ನಾವು ವಿಕಾಸ ಆಗುತ್ತೇವೆ ಹಾಗೆಯೇ ಅವಿವೇಕತನವು ವಿನಾಶಕ್ಕೆ ಕಾರಣವಾಗುವುದು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾರತ ಸೇನೆಯ ನಿವೃತ ಯೋಧ ಬೆಳ್ಳಾರೆ ಗೋಪಿನಾಥ್ ರಾವ್ ಮಾತನಾಡಿ ನಮ್ಮೆಲ್ಲರ ಮನದಾಳದಲ್ಲಿ ವಿವೇಕಾನಂದರ ಹೆಸರು ಎಂದಿಗೂ ಚಿರಸ್ಮರಣೀಯ . ಪ್ರಪಂಚದಾದ್ಯಂತ ಭಾರತದ ಕೀರ್ತಿಯನ್ನು ಆಕಾಶದ ಎತ್ತರಕ್ಕೆ ಕೊಂಡುಹೋದವರು ಪರಮ ಸಂತ ವಿವೇಕಾನಂದರು ಎಂದರು.

ಈ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ 25 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ, ಕಾರ್ಗಿಲ್ ಕದನದಲ್ಲಿ ಭಾಗವಹಿಸಿದ ನಿವೃತ್ತಿ ನಂತರವೂ ರಾಮಕೃಷ್ಣ ಮಿಷನ್ ಜೊತೆ, ಸ್ವಚ್ಛ ಭಾರತ ಅಭಿಯಾನದ ಜೊತೆ ಸಕ್ರಿಯವಾಗಿ ಕೈಜೋಡಿಸಿಕೊಂಡು ಹಲವಾರು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಮಾಜ, ಪ್ರಕೃತಿ , ಪರಿಸರದ ಸ್ವಚ್ಛತೆಯ ಬಗೆಗಿನ ಅರಿವು ಮೂಡಿಸುತ್ತಿರುವ ಹೆಮ್ಮೆಯ ಭಾರತೀಯ ಸೇನೆಯ ನಿವೃತ್ತ ಯೋಧ ಬೆಳ್ಳಾಲ ಗೋಪಿನಾಥ ರಾವ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರಿಗೆ ಯಕ್ಷ ಕವನ ಹಾಗೂ ವಿವೇಕ ನಮನ ಎನ್ನುವ ವಿಶೇಷ ನಮನ ಕಾರ್ಯಕ್ರಮವು ನಡೆಯಿತು.

ವಿವೇಕಾನಂದ ಜಯಂತಿ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪದವಿಪೂರ್ವ ವಿದ್ಯಾಲಯದ ಸಂಚಾಲಕ ಕೃಷ್ಣಪ್ರಸಾದ್ ನಡ್ಸಾರ್ ಮತ್ತು ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು .

ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಸ್ವಾಗತಿಸಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ದಯಾಮಣಿ ವಂದಿಸಿದರು. ದ್ವಿತೀಯ ವಿಜ್ಞಾನ ವಿಭಾಗ ವಿದ್ಯಾರ್ಥಿನಿ ಸಿಂಚನ ಟಿ ಕಾರ್ಯಕ್ರಮವನ್ನು ನಿರೂಪಿಸಿದರು.

Leave A Reply

Your email address will not be published.