ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಗುರಿ ನಿರ್ಧಾರ ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮ

ದೃಢ ನಿರ್ಧಾರ ಮತ್ತು ಸ್ವಪ್ರೇರಣೆಯಿಂದ ಯೋಜಿತ ಗುರಿ ಸಾಧಿಸಲು ಸಾಧ್ಯ- ಡಾ. ಶೋಭಿತಾ ಸತೀಶ್

ಪುತ್ತೂರು: ಆತ್ಮ ವಿಶ್ವಾಸ ಮತ್ತು ದೃಢವಾದ ನಿರ್ಧಾರ ಕೈಗೊಳ್ಳುವುದು ಒಂದಕ್ಕೊದು ಪೂರಕವಾಗಿರುತ್ತದೆ. ಯಾರಲ್ಲಿ ಹೆಚ್ಚು ಆತ್ಮವಿಶ್ವಾಸ ಇರುತ್ತದೆಯೋ ಅವರಲ್ಲಿ ದೃಢ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಮನೋಭಾವ ಇರುತ್ತದೆ. ಅಂತವರು ತಮ್ಮ ಗುರಿಗಳನ್ನು ಬೇಗ ಮುಟ್ಟುತ್ತಾರೆ ಎಂದು ವಿದ್ಯಾಭಾರತಿ ಉಚ್ಚ ಶಿಕ್ಷಾ ಸಂಸ್ಥಾನದ ಸಂಯೋಜಕಿ ಡಾ. ಶೋಭಿತಾ ಸತೀಶ್ ಹೇಳಿದರು.

ವಿದ್ಯಾಭಾರತಿ ಉಚ್ಚ ಶಿಕ್ಷಾ ಸಂಸ್ಥಾನ, ಪುತ್ತೂರಿನ ವಿವೇಕಾನಂದ ಬಿ.ಎಡ್ ಕಾಲೇಜು ಮತ್ತು ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ಗುರಿ ನಿರ್ಧಾರ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸವನ್ನು ನೀಡುತ್ತಾ ಅವರು ಮಾತನಾಡಿದರು.

ಮನುಜನ ಪ್ರತಿಯೊಂದು ಕ್ರಿಯೆಗೂ ಒಂದು ನಿರ್ದಿಷ್ಟವಾದ ಗುರಿ ಇದ್ದೇ ಇರುತ್ತದೆ.ಒಂದು ವೇಳೆ ಗುರಿಯೇ ಇಲ್ಲದಿದ್ದರೆ ಆ ಕ್ರಿಯೆ ಪರಿಪೂರ್ಣ ಕ್ರಿಯೆ ಆಗುವುದಿಲ್ಲ. ಇದು ದಿನ ನಿತ್ಯದ ಜೀವನ ಆಗಿರಲಿ ಅಥವಾ ಒಟ್ಟಾರೆ ಬದುಕಿನ ಎಲ್ಲಾ ದಿನಗಳಾಗಿರಲಿ ಅವುಗಳಲ್ಲಿ ಗುರಿ ಎನ್ನುವುದು ಪ್ರತಿಯೊಂದು ಕ್ರಿಯೆಗೂ ಇದ್ದೇ ಇರುತ್ತದೆ. ಗುರಿ ನಿರ್ಣಯದಲ್ಲಿ ಮತ್ತು ನಿರ್ಣಯಿಸಿದ ಗುರಿ ತಲುಪುವುದರಲ್ಲಿ ಪ್ರಮುಖ ಅಸ್ತ್ರವೇ ಸ್ವಪ್ರೇರಣೆ. ಇದು ಅತ್ಯಂತ ಅವಶ್ಯಕ. ನಮ್ಮ ಗುರಿ ನಮಗೆ ಸದಾ ಪ್ರೇರಣೆ ನೀಡುತ್ತಿರಬೇಕು. ಬಾಹ್ಯ ಪ್ರೇರಣೆಯ ಸಹಾಯವೇ ಇಲ್ಲದೇ ಬೇಕಾದರೆ ಗುರಿ ತಲುಪಬಹುದು. ಆದರೆ ಸ್ವಪ್ರೇರಣೆ ಇಲ್ಲದಿದ್ದರೆ ಒಂದೇ ಒಂದು ಹೆಜ್ಜೆ ಕೂಡ ಆ ನಿಟ್ಟಿನಲ್ಲಿ ಮುಂದೆ ಸಾಗಲು ಸಾಧ್ಯವಾಗುವುದಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಕೃಷ್ಣಪ್ರಸಾದ್ ನಡ್ಸಾರ್ ಮಾತನಾಡಿ ದ್ಯೇಯ ಎಂಬುದನ್ನು ಹಿಡಿಯುವುದು ಮುಖ್ಯವಲ್ಲ. ಹಿಡಿದ ಗುರಿ ಫಲಿಸಿದೆಯೋ ಎಂಬುದು ಮುಖ್ಯ. ಆದ್ಧರಿಂದ ತಮ್ಮ ಯೋಚನೆಗೆ ತಕ್ಕಂತೆ, ಬುದ್ದಿವಂತಿಕೆಗೆ ಅನುಗುಣವಾಗಿ ಕೆಲಸವನ್ನು ಹಿಡಿಯುವಲ್ಲಿ ಕಾರ್ಯನಿರತರಾಗುವುದು ಉತ್ತಮ. ಹಾಗೆಯೇ ದೊಡ್ಡವರಾದ ನಂತರ ತಮಗೆ ಬೇಕಾದ ವಸ್ತುಗಳನ್ನು ತಾವೇ ನಿರ್ಧರಿಸಿ ಸರಿಯಾದ ದಾರಿಯಲ್ಲಿ ಹೋಗುವುದು ಪ್ರತಿಯೊಬ್ಬನ ಕರ್ತವ್ಯ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವರ್ಷಾ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಚೈತನ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕಿ ದಯಾಮಣಿ ಸ್ವಾಗತಿಸಿ ವಿದ್ಯಾರ್ಥಿನಿ ದೇವಯಾನಿ ವಂದಿಸಿದರು.

Leave A Reply

Your email address will not be published.