ಶುರುವಾಗಿದೆ ಸೆಲೆಬ್ರಿಟಿಗಳ ವಿಚ್ಛೇದನ ಪರ್ವ !! | ಜನಪ್ರಿಯ ಮಹಾಭಾರತ ಧಾರಾವಾಹಿಯ “ಕೃಷ್ಣ” ಪಾತ್ರಧಾರಿಯಿಂದ ಪತ್ನಿಗೆ ಡಿವೋರ್ಸ್

ಇತ್ತೀಚೆಗೆ ಸಿನಿಮಾ ತಾರೆಯರ ವಿಚ್ಛೇದನ ಪರ್ವವೇ ಶುರುವಾದಂತಿದೆ. ಇದೀಗ ಜನಪ್ರಿಯ ಧಾರವಾಹಿ ಮಹಾಭಾರತದಲ್ಲಿ ಕೃಷ್ಣನ ಪಾತ್ರದ ಮೂಲಕ ಜನಪ್ರಿಯರಾಗಿದ್ದ ನಿತೀಶ್ ಭಾರದ್ವಾಜ್ ಅವರು 12 ವರ್ಷಗಳ ದಾಂಪತ್ಯದ ನಂತರ ತಮ್ಮ ಪತ್ನಿಯಿಂದ ಬೇರ್ಪಟ್ಟಿರುವುದಾಗಿ ಘೋಷಿಸಿದ್ದಾರೆ.

ನಟ ಧನುಷ್ ಮತ್ತು ರಜನಿಕಾಂತ್ ಅವರ ಮಗಳು ಐಶ್ವರ್ಯಾ ತಮ್ಮ 18 ವರ್ಷಗಳ ದಾಂಪತ್ಯಕ್ಕೆ ತೆರೆ ಎಳೆಯುವ ಘೋಷಣೆ ಮಾಡಿದ ಕೆಲವೇ ಗಂಟೆಗಳ ನಂತರ ಈ ಸುದ್ದಿ ಬಂದಿದೆ.

‘ನಾನು ಕಾನೂನಿನ ಬಗ್ಗೆ ದೃಢ ನಂಬಿಕೆ ಹೊಂದಿದ್ದೇನೆ. ಆದರೆ, ನಾನು ದುರಾದೃಷ್ಟವಂತನಾಗಿದ್ದೇನೆ. ದಾಂಪತ್ಯದ ವಿಘಟನೆಗೆ ಕಾರಣಗಳು ಅನಂತವಾಗಿರಬಹುದು, ಕೆಲವೊಮ್ಮೆ ಇದು ರಾಜಿಯಾಗದ ವರ್ತನೆ ಅಥವಾ ಸಹಾನುಭೂತಿಯ ಕೊರತೆ, ಅಹಂಕಾರದ ಪರಿಣಾಮವಾಗಿರಬಹುದು. ಆದರೆ, ಕುಟುಂಬ ಒಡೆದು ಹೋದಾಗ ಹೆಚ್ಚು ತೊಂದರೆ ಅನುಭವಿಸುವುದು ಮಕ್ಕಳು. ಆದ್ದರಿಂದ, ಮಕ್ಕಳಿಗೆ ಆಗುವ ಹಾನಿಯನ್ನು ತಗ್ಗಿಸಲು ಪೋಷಕರು ಪ್ರಯತ್ನಪಡಬೇಕು’ ಎಂದು ನಿತೀಶ್ ಹೇಳಿದ್ದಾರೆ.

ನಿತೀಶ್ ಭಾರದ್ವಾಜ್ ಅವರು 2019ರಲ್ಲಿ ಪತ್ನಿ, ಐಎಎಸ್ ಅಧಿಕಾರಿಯಾಗಿರುವ ಸ್ಮಿತಾ ಗೇಟ್ ಅವರೊಂದಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚ್ಛೇದನದ ಕಾರಣಗಳನ್ನು ಮೆಲುಕು ಹಾಕಲು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ. ನಿತೀಶ್ ಅವರ ವಿಚ್ಛೇದಿತ ಪತ್ನಿ ತಮ್ಮ ಅವಳಿ ಹೆಣ್ಣುಮಕ್ಕಳೊಂದಿಗೆ ಇಂದೋರ್‌ನಲ್ಲಿ ವಾಸಿಸುತ್ತಿದ್ದಾರೆ.

Leave A Reply

Your email address will not be published.