ಪುತ್ತೂರು: ಉದ್ಯಮಿಗೆ ಜೀವ ಬೆದರಿಕೆ ಒಡ್ಡಿ ಹಣ ವಸೂಲಿಗೆ ಯತ್ನ : ಇಬ್ಬರ ಬಂಧನ

ಪುತ್ತೂರು: ಉದ್ಯಮಿಗೆ ಜೀವ ಬೆದರಿಕೆ ಒಡ್ಡಿ ಹಣ ವಸೂಲಿಗೆ ಯತ್ನಿಸಿದ ಇಬ್ಬರನ್ನು ಸಂಪ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಉದ್ಯಮಿಯೊಬ್ಬರಿಗೆ ಅಪರಿಚಿತ ವ್ಯಕ್ತಿಯು ವಿವಿದ ಮೊಬೈಲ್ ಗಳಿಂದ ಕರೆ ಮಾಡಿ ಯಾರೋ ಒಬ್ಬ ವ್ಯಕ್ತಿ ಜೈಲಿನಲ್ಲಿದ್ದಾನೆ, ಅವನನ್ನು ಬಿಡಿಸಲು ಹಣ ಬೇಕು, ಅವನನ್ನು ಬಿಡಿಸಲು ರೂ.13 ಲಕ್ಷ ತಗಲುತ್ತದೆ. ಅವನನ್ನು ಬಿಡಿಸಲು ನೀನು ಹಣ ಕೊಡಬೇಕು, ನೀನು 2 ದಿನದ ಒಳಗೆ 3,50,000 ಹಣ ರೆಡಿ ಮಾಡಬೇಕು, ಇಲ್ಲದಿದ್ದರೆ ನಿನ್ನನ್ನು ಮತ್ತು ನಿನ್ನ ಮಕ್ಕಳನ್ನು ಜೀವ ಸಹಿತ ಬಿಡುವುದಿಲ್ಲ. ನಿನ್ನ ಮಕ್ಕಳ ಜೀವನ ಹಾಳು ಮಾಡುತ್ತೇನೆ. ಈ ವಿಚಾರವನ್ನು ಇತರರಲ್ಲಿ ತಿಳಿಸಿದರ ನಿನ್ನ ಹೆಣ ಖಂಡಿತ ಬೀಳುತ್ತದೆ, ನೀನು ಜೀವಂತ ಬದುಕಲು ಸಾಧ್ಯವಿಲ್ಲ ಎಂದು ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ 504,506,507,387 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ತನಿಖೆ ಕೈಗೊಂಡ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಜ.14 ರಂದು ಉದ್ಯಮಿಯಿಂದ ಹಣ ಪಡೆದುಕೊಂಡು ಹೋಗುವ ಸಮಯ ತೀವ್ರ ಕಾರ್ಯಚರಣೆ ನಡೆಸಿ ಕಲ್ಲಡ್ಕದ ಕಲಂದರ್ ಶರೀಫ್ ಶಾಫಿ ಹಾಗೂ ಮಂಗಳೂರಿನ ಮಂಜನಾಡಿ ಕುಚ್ಚಿಗುಡ್ಡ ನಿವಾಸಿ ಹಸನಬ್ಬ ಹಸನ್ ಎಂಬವರನ್ನು ಬಂಧಿಸಿದ್ದಾರೆ.

ಉದ್ಯಮಿಯಿಂದ ವಸೂಲಿ ಮಾಡಿದ ರೂ. 50,000 ಹಣ ಹಾಗೂ ಕೃತ್ಯಕ್ಕೆ ಬಳಸಿದ ಕಾರು ಮತ್ತು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿತರ ಪೈಕಿ ಕಲಂದರ್ ಶರೀಫ್ ಶಾಫಿ ಈತನು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು, ಹಸನಬ್ಬ ಹಸನ್ ಅಚ್ಚು ಅಚುನ್ ಈತನು ಮಂಗಳೂರು ನಗರದ ಕೋಣಾಜೆ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ಅಲ್ಲದೆ ಕಂಕನಾಡಿ ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿರುತ್ತದೆ.

ಈ ಕಾರ್ಯಾಚರಣೆ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಸೋನಾವಾಣೆ ಮತ್ತು ಪುತ್ತೂರು ಉಪ ವಿಭಾಗ ಪೊಲೀಸ್ ಉಪಾಧೀಕ್ಷಕರಾದ ಡಾ| ಗಾನ ಪಿ ಕುಮಾರ್ ರವರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿಗೆ ರವರ ನೇತೃತ್ವದಲ್ಲಿ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕರುಗಳಾದ ಉದಯರವಿ ಎಂ.ವಿ, ಅಮೀನ್ ಸಾಬ್ ಎಂ ಅಖ್ತಾರ್, ಹಾಗೂ ಸಿಬ್ಬಂದಿಗಳಾದ ಕೃಷ್ಣಪ್ಪ, ದೇವರಾಜ್, ಅದ್ರಾಮ, ಪ್ರವೀಣ್ ರೈ ಹರ್ಷಿತ್, ಗಾಯತ್ರಿ, ವಿನೋದ್, ರವರು ಭಾಗವಹಿಸಿರುತ್ತಾರೆ. ಜಿಲ್ಲಾ ಗಣಕಯಂತ್ರ ವಿಭಾಗದ ಸಂಪತ್, ದಿವಾಕರ್ ರವರು ಸಹಕರಿಸಿದ್ದಾರೆ.

Leave A Reply

Your email address will not be published.