ಪುತ್ತೂರು : ಅಪಾಯಕಾರಿ ಸ್ಥಿತಿಯಲ್ಲಿ ಭಕ್ತಕೋಡಿ ಸರಕಾರಿ ಶಾಲೆ | ಬಿರುಕು ಬಿಟ್ಟ ಗೋಡೆ..ಗೆದ್ದಲು ಹಿಡಿದ ಮಾಡು..ಆತಂಕದಲ್ಲಿ ವಿದ್ಯಾರ್ಥಿಗಳು

ಪುತ್ತೂರು : ಇದು ಸುವರ್ಣ ಮಹೋತ್ಸವ ಕಂಡ ಸರ್ವೆ ಗ್ರಾಮದ ಭಕ್ತಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಈ ಶಾಲೆ ಗ್ರಾಮೀಣ ಭಾಗದಲ್ಲಿದ್ದು ಸುತ್ತಮುತ್ತಲು ಖಾಸಗಿ ಶಾಲೆಗಳು ಆವರಿಸಿಕೊಂಡಿದೆ. ಆದರೂ ಈ ಶಾಲೆಯಲ್ಲಿ 130ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ಬಡ ಕೂಲಿ ಕಾರ್ಮಿಕರ ಮಕ್ಕಳು. ಈ ಶಾಲೆಯಲ್ಲಿ ಸದ್ಯಕ್ಕೆ ಶಿಕ್ಷಕರ ಕೊರತೆಯಿಲ್ಲ. ಮಕ್ಕಳು ಪಾಠ ಕೇಳಲು ಕುಳಿತುಕೊಳ್ಳುವ ತರಗತಿ ಕೋಣೆಗಳು ಬಿರುಕು ಬಿಟ್ಟಿದೆ. ಮಾಡು ಗೆದ್ದಲು ಹಿಡಿದಿದೆ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಮಾಡು ಗೋಡೆ ಬಿದ್ದರೂ ಅಚ್ಚರಿಯಿಲ್ಲ. ಶಾಲೆಯಲ್ಲಿರುವ ನಲಿ-ಕಲಿ ಕೊಠಡಿ ಹೊರತುಪಡಿಸಿ ಉಳಿದ ಎಲ್ಲಾ ತರಗತಿಗಳದ್ದು ಇದೇ ಅವಸ್ಥೆ.

ಮನವಿ ನೀಡಿದರೂ ಸ್ಪಂದನೆಯೇ ಇಲ್ಲ:
ಈ ಶಾಲೆಯ ಅವಸ್ಥೆಯ ಬಗ್ಗೆ ಶಿಕ್ಷಣ ಇಲಾಖೆಗೂ, ಜನಪ್ರತಿನಿಧಿಗಳ ಗಮನಕ್ಕೂ ತರಲಾಗಿದೆ. ಶಾಲೆ ಅಪಾಯದಲ್ಲಿದೆ. ದುರಸ್ತಿ ಮಾಡಿ ಅಥವಾ ಹೊಸ ಕಟ್ಟಡ ನಿರ್ಮಿಸಿ ಎಂದು ಪೋಷಕರು, ಶಿಕ್ಷಕರು, ಎಸ್‌ಡಿಎಂಸಿಯವರು ಇಲಾಖೆಗಳಿಗೆ, ಜನಪ್ರತಿನಿಧಿಗಳಿಗೆ ಮನವಿಯನ್ನೂ ಕೊಟ್ಟಿದ್ದಾರೆ. ಕಳೆದ ಐದು ವರ್ಷಗಳಿಂದ ಈ ಶಾಲೆ ಅಪಾಯದ ಎಚ್ಚರಿಕೆ ಕೊಡುತ್ತಲೇ ಇದೆ. ಪೋಷಕರು ನಿತ್ಯವೂ ಆತಂಕ, ದುಗುಡ, ದುಮ್ಮಾನಗಳ ನಡುವೆಯೇ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ನಮ್ಮ ಮಕ್ಕಳ ಜೀವಕ್ಕೆ ಬೆಲೆಯಿಲ್ಲದೇ ಎಂದು ಪ್ರಶ್ನಿಸುತ್ತಿರುವ ಪೋಷಕರು ಸಂಬಂಧಿಸಿದ ಇಲಾಖೆಗೆ ಅಥವಾ ಜನಪ್ರತಿನಿಧಿಗಳಿಗೆ ಈ ಶಾಲೆಯನ್ನು ಉಳಿಸಬೇಕು ಎಂಬ ಸನ್ಮನಸ್ಸು ಯಾಕೆ ಬರುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಸರಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿ ಹೋಗುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಇರುವ ಶಾಲೆಯನ್ನೂ ಉಳಿಸಿಕೊಳ್ಳಲು ಪೋಷಕರು ಅಥವಾ ಗ್ರಾಮಸ್ಥರು ಪ್ರತಿಭಟನೆಯ ಹಾದಿಯನ್ನೇ ಹಿಡಿಯಬೇಕೇ ಎಂದು ಈ ಭಾಗದ ಜನತೆ ಪ್ರಶ್ನಿಸುತ್ತಿದ್ದಾರೆ.

ಒಂದು ತರಗತಿ ಕೋಣೆ ಬಂದ್..!
ಈಗಾಗಲೇ ಅಪಾಯದ ಮುನ್ಸೂಚನೆಯ ಕಾರಣಕ್ಕೆ ಶಾಲೆಯ ಒಂದು ತರಗತಿ ಕೋಣೆಯನ್ನು ಬಂದ್ ಮಾಡಲಾಗಿದೆ. ಉಳಿದ ಕೋಣೆಗಳಲ್ಲಿ ಮಕ್ಕಳು ಪಾಠ ಕೇಳುತ್ತಿದ್ದಾರೆ. ಶಾಲೆಯ ಮಾಡು ಮಾತ್ರವಲ್ಲೇ ಕಿಟಕಿ, ಬಾಗಿಲುಗಳು ಕೂಡಾ ತುಕ್ಕು ಹಿಡಿದು ಶಿಥಿಲಾವಸ್ಥೆಯಲ್ಲಿದೆ. ಬೆಂಚ್, ಡೆಸ್ಕ್ಗಳೂ ಸಮರ್ಪಕವಾಗಿಲ್ಲ. ಇಷ್ಟೆಲ್ಲಾ ಸಮಸ್ಯೆಗಳು ಭಕ್ತಕೋಡಿಯಲ್ಲಿ ಶಾಲೆಯಲ್ಲಿ ತಾಂಡವವಾಡುತ್ತಿದ್ದರೂ ಸಂಬAಧಪಟ್ಟವರು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಸಹಜವಾಗಿ ಮೂಡಿ ಬಂದಿದೆ. ಶಾಲೆಯ ಕಟ್ಟಡವನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಅಥವಾ ಸಂಪೂರ್ಣವಾಗಿ ದುರಸ್ತಿಗೊಳಿಸಬೇಕು ಎನ್ನುವುದು ಪೋಷಕರ ಆಗ್ರಹವಾಗಿದ್ದು ಈ ಬಗ್ಗೆ ಶಾಲಾಭಿವೃದ್ಧಿ ಸಮಿತಿಯವರಿಗೂ ಪೋಷಕರು ಒತ್ತಡ ಹೇರುತ್ತಿದ್ದಾರೆ. ಈ ಶಾಲೆಯಲ್ಲಿ ತರಗತಿ ನಡೆಸಬಹುದು ಎನ್ನುವ ಬಗ್ಗೆ ಮೇಲಧಿಕಾರಿಗಳು ಲಿಖಿತವಾಗಿ ಬರೆದುಕೊಡಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಿ:
2017ರಲ್ಲಿ ಸುವರ್ಣ ಮಹೋತ್ಸವ ಆಚರಿಸಿದ್ದ ಈ ಶಾಲೆಯಲ್ಲಿ ಸುಸಜ್ಜಿತ ರಂಗ ಮಂದಿರ ನಿರ್ಮಾಣಗೊಂಡಿತ್ತು. ಅತ್ಯಾಕರ್ಷಕ ಗ್ಯಾಲರಿಯನ್ನೂ ಅದೇ ಸಮಯದಲ್ಲಿ ನಿರ್ಮಾಣ ಮಾಡಲಾಗಿತ್ತು. ಇಷ್ಟೆಲ್ಲಾ ಅಭಿವೃದ್ಧಿ ಕಂಡಿರುವ ಶಾಲೆಯ ಕೊಠಡಿ ಮಾತ್ರ ಇದೀಗ ಶಿಥಿಲಾವಸ್ಥೆಗೆ ತಲುಪಿರುವುದು ವಿಪರ್ಯಾಸವೇ ಸರಿ. ಇಲ್ಲಿನ ಪೋಷಕರ ಅಳಲನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಪುರಸ್ಕರಿಸದೇ ಇದ್ದಲ್ಲಿ ಶಾಲೆಯಲ್ಲಿ ಅಪಾಯ ಉಂಟಾಗುವುದು ನಿಶ್ಚಿತ. ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತುಕೊಳ್ಳುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

ಭಕ್ತಕೋಡಿ ಸರಕಾರಿ ಪ್ರಾಥಮಿಕ ಶಾಲಾ ಕಟ್ಟಡ ಶಿಥಿಲಗೊಂಡಿದ್ದು ಹಂಚು, ಮಾಡು ಬೀಳುವ ಸ್ಥಿತಿಯಲ್ಲಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಶಾಲೆಯ ಶಿಥಿಲಾವಸ್ಥೆ ಬಗ್ಗೆ ಸಂಬAಧಪಟ್ಟವರಿಗೆ ಮನವಿ ನೀಡಿದ್ದೇವೆ. ಇಲ್ಲಿ ಏನಾದರೂ ಅಪಾಯ ಸಂಬವಿಸಿದ್ದಲ್ಲಿ ಶಿಕ್ಷಣ ಇಲಾಖೆ ಹೊಣೆಯಾಗಬೇಕಾದೀತು. ೬ ವರ್ಷಗಳಿಂದ ಮನವಿ ಕೊಡುತ್ತಲೇ ಇದ್ದು ಯಾರೂ ಸ್ಪಂಧಿಸುವ ಕಾರ್ಯ ಮಾಡಿಲ್ಲ. ಮೇಲಧಿಕಾರಿಗಳು ಈ ಶಾಲೆ ಸುಸ್ಥಿತಿಯಲ್ಲಿದೆ ಶಾಲೆ ನಡೆಸಬಹುದು ಎಂದು ಲಿಖಿತವಾಗಿ ಬರೆದುಕೊಟ್ಟರೆ ಮಾತ್ರ ನಾವು ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ.

ವಸಂತ್ ಪೂಜಾರಿ ಕೈಪಂಗಳದೋಳ, ಎಸ್.ಡಿಎಂ.ಸಿ ಅಧ್ಯಕ್ಷರು

ಸುಮಾರು ೫೫ ವರ್ಷಗಳ ಇತಿಹಾಸ ಹೊಂದಿರುವ ಭಕ್ತಕೋಡಿ ಸರಕಾರಿ ಪ್ರಾಥಮಿಕ ಶಾಲೆ ಶಿಥಿಲಾವಸ್ಥೆ ತಲುಪಿದ್ದು ಶೀಘ್ರದಲ್ಲೇ ಶಾಲಾ ಕಟ್ಟಡ ಕುಸಿದು ಬೀಳುವ ಸಾಧ್ಯತೆ ಇದೆ. ಈ ಶಾಲೆಯನ್ನು ನೋಡಿದರೆ ಹೆತ್ತವರು ತಮ್ಮ ಮಕ್ಕಳನ್ನು ಈ ಶಾಲೆಗೆ ಕಳುಹಿಸಲಿಕ್ಕಿಲ್ಲ. ಶಾಸಕರಿಗೆ, ಶಿಕ್ಷಣ ಇಲಾಗೂ ಮನವಿ ನೀಡಿದ್ದೇವೆ. ಶಿಕ್ಷಣ ಸಚಿವರಿಗೂ ವಿಷಯ ಮುಟ್ಟಿಸಲಾಗಿದೆ. ಇನ್ನಾದರೂ ಸಂಬಂಧಪಟ್ಟ ವರು ಇದರ ಬಗ್ಗೆ ಗಮನಹರಿಸಬೇಕೆನ್ನುವುದು ನಮ್ಮ ಆಗ್ರಹವಾಗಿದೆ.

ರಾಧಾಕೃಷ್ಣ ಭಟ್ ಖಂಡಿಗ, ಪೋಷಕರು ಪೋಷಕರು

Leave A Reply

Your email address will not be published.