ಸವಣೂರು : ಅಮರ ಸಂಘಟನೆಯಿಂದ ಅಶಕ್ತ ಕುಟುಂಬಕ್ಕೆ ಮನೆ ನಿರ್ಮಾಣ

ಯುವ ಸಮುದಾಯದ ಸೇವಾ ಕಾರ್ಯ ಶ್ಲಾಘನೀಯ : ದಿನೇಶ್ ಮೆದು

ಸವಣೂರು :ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಸುಳ್ಯ ತಾಲೂಕಿನ ಅಮರಮುಡ್ನೂರು-ಪಡ್ನೂರು ಗ್ರಾಮದ ಅಮರ ಸಂಘಟನಾ ಸಮಿತಿ ವತಿಯಿಂದ ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲದಲ್ಲಿ ಶ್ಯಾಮಲಾ ಕುಟುಂಬಕ್ಕೆ ನಿರ್ಮಿಸಲು ಉದ್ದೇಶಿಸಿರುವ ಮನೆ ನಿರ್ಮಾಣ ಕಾರ್ಯಕ್ಕೆ ಜ.9 ರಂದು ಭೂಮಿ ಪೂಜೆ ನಡೆಯಿತು.

ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಮಾತನಾಡಿ, ರವೀಂದ್ರ ಆಚಾರ್ಯ ಅವರು ಅಸೌಖ್ಯದಿಂದ ನಿಧನ ಹೊಂದಿದ್ದು ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳ ಕುಟುಂಬಕ್ಕೆ ಸೂರಿನ ಅಗತ್ಯ ಇತ್ತು. ಈ ಹಿಂದೆ ಅವರ ಚಿಕಿತ್ಸಾ ವೆಚ್ಚವನ್ನು ಸರಕಾರ ಮತ್ತು ದಾನಿಗಳ ಮೂಲಕ ಭರಿಸಿದ್ದೇವೆ. ಮನೆ ಕಟ್ಟಿಕೊಡುವ ಬಗ್ಗೆಯು ಯೋಜನೆ ರೂಪಿಸುತ್ತಿದ್ದ ಸಂದರ್ಭದಲ್ಲಿ ಅಮರ ಸಂಘಟನಾ ಸಮಿತಿಯು ಆ ಕಾರ್ಯಕ್ಕೆ ಮುಂದಡಿ ಇಟ್ಟಿರುವುದು ಶ್ಲಾಘನೀಯ ಸಂಗತಿ. ಈಗಾಗಲೇ ಸ್ಥಳೀಯವಾಗಿ ಅನೇಕ ಅಶಕ್ತ ಕುಟುಂಬಕ್ಕೆ ಮನೆ ನಿರ್ಮಾಣ ಕಾರ್ಯ ನಡೆಸಲಾಗಿದ್ದು ಈ ಕಾರ್ಯಕ್ಕೂ ನಾವು ಸಂಪೂರ್ಣ ಸಹಕಾರ ನೀಡಲಿದ್ದೇವೆ ಎಂದರು.

ಸುಳ್ಯ ತಾಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ ಮಾತನಾಡಿ, ಈ ಹಿಂದಿನ ಪಂಚಾಯತ್ ಆಡಳಿತದ ಅವ„ಯಲ್ಲಿ ರವೀಂದ್ರ ಆಚಾರ್ಯ ಅವರಿಗೆ ನಿವೇಶನ ನೀಡಿ ಹಕ್ಕುಪತ್ರ ನೀಡಲಾಯಿತು. ಒಂದು ತಿಂಗಳ ಹಿಂದೆ ಅವರು ಅಸೌಖ್ಯಕ್ಕೆ ಈಡಾದ ಸಂದರ್ಭದಲ್ಲಿ ಅವರಿಗೆ ಎಲ್ಲ ನೆರವು ನೀಡಲಾಗಿದೆ. ಇದೀಗ ಯುವ ಸಮುದಾಯದವರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಅಮರ ಸಂಘಟನೆ ಮನೆ ನಿರ್ಮಾಣಕ್ಕೆ ಹೆಜ್ಜೆ ಇಟ್ಟಿದ್ದು ಸಂಘಟನೆಯ ಕಾರ್ಯದ ಜತೆಗೆ, ಅಶಕ್ತ ಕುಟುಂಬದ ಜತೆಗೆ ನಾವೆಲ್ಲರೂ ಕೈ ಜೋಡಿಸಲಿದ್ದೇವೆ ಎಂದರು.

ಗ್ರಾ.ಪಂ.ಸದಸ್ಯ ಗಿರಿಶಂಕರ ಸುಲಾಯ ಮಾತನಾಡಿ, ಸೇವಾ ಕಾರ್ಯದಲ್ಲಿ ತೊಡಗುವ ಸಂದರ್ಭದಲ್ಲಿ ಟೀಕೆ-ಟಿಪ್ಪಣಿಗಳು ಎದುರಾಗುವುದು ಸಹಜ. ಅವೆಲ್ಲವನ್ನು ಪಕ್ಕಕ್ಕಿಟ್ಟು ಧನಾತ್ಮಕ ನೆಲೆಯಲ್ಲಿ ಯೋಚನೆ ಮಾಡಿದರೆ ಇಂತಹ ಸ್ಪಂದನಾ ಕಾರ್ಯ ಮಾಡಲು ಸಾಧ್ಯವಿದೆ. ಅಮರ ಸಂಘಟನೆಯ ಈ ಕಾರ್ಯ ಪ್ರತಿಯೋರ್ವರಿಗೆ ಸ್ಪೂರ್ತಿ ತರಲಿ ಎಂದರು.

ಅಮರ ಸಂಘಟನಾ ಸಮಿತಿ ಅಧ್ಯಕ್ಷ ರಜನಿಕಾಂತ್ ಉಮ್ಮಡ್ಕ ಮಾತನಾಡಿ, ಸಂಘಟನೆಯಲ್ಲಿ 103 ಮಂದಿ ಸದಸ್ಯರಿದ್ದಾರೆ. ಬೇರೆ-ಬೇರೆ ಪ್ರದೇಶದವರು ಇದ್ದಾರೆ. ನಾಲ್ಕು ವರ್ಷದ ಹಿಂದೆ ಊರಲ್ಲಿ ಸ್ನೇಹಿತ ಮತ್ತು ಆತನ ತಂದೆ ಮೃತಪಟ್ಟ ಸಂದರ್ಭದಲ್ಲಿ ಆ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ಹುಟ್ಟಿಕೊಂಡ ಈ ಸಂಘಟನೆ ಅನಂತರ ತನ್ನ ಸಾಮಾಜಿಕ ಕಾರ್ಯವನ್ನು ವಿಸ್ತರಿಸಿತು. ಅಶಕ್ತರಿಗೆ ಮನೆ ನಿರ್ಮಾಣವು ಈ ಕಾರ್ಯ ಒಂದು ಭಾಗ. ಇದಕ್ಕೆ ಹತ್ತಾರು ದಾನಿಗಳು ಕೈ ಜೋಡಿಸಿದ್ದಾರೆ. ಶ್ಯಾಮಲಾ ಅವರಿಗೆ 2.5 ಲಕ್ಷ ರೂ.ಅಧಿಕ ವೆಚ್ಚದ ಮನೆ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

ಅರ್ಚಕ ರಾಘವೇಂದ್ರ ಬೈಪಡಿತ್ತಾಯ ನೇತೃತ್ವದಲ್ಲಿ ಭೂಮಿ ಪೂಜೆ ನೆರವೇರಿತು. ಪ್ರಗತಿಪರ ಕೃಷಿಕ ನಾಗರಾಜ ನಿಡ್ವಣ್ಣಾಯ ಗುದ್ಧಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೀವಿ ವಿ.ಶೆಟ್ಟಿ, ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ಕರಾಜೆ, ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ., ನ್ಯಾಯವಾದಿ ಮಹೇಶ್ ಕೆ ಸವಣೂರು, ತಾರಾನಾಥ ಕಾಯರ್ಗ, ಚೆನ್ನಪ್ಪ ಪರಣೆ, ಸವಣೂರು ಗ್ರಾ.ಪಂ.ಸಿಬಂದಿ ದಯಾನಂದ ಮಾಲೆತ್ತೂರು, ಅಮರ ಸಂಘಟನಾ ಸಮಿತಿಯ ನಿರ್ದೇಶಕರಾದ ಹರ್ಷಿತ್, ಪ್ರವೀಣ್ ಕುಲಾಲ್, ಕುಸುಮಾಧರ ಮುಕ್ಕೂರು, ಕೇಶವ ಪ್ರಸನ್ನ, ರಕ್ಷಿತ್ ಉಬರಡ್ಕ, ಸಾತ್ವಿಕ್ ಮಡಪ್ಪಾಡಿ, ಮಿಥುನ್ ಕೆರೆಗದ್ದೆ, ರಾಜೀವಿ ಗೊಳ್ಯಾಡಿ, ಶ್ವೇತಾ ಕೇರ್ಪಳ ಮೊದಲಾದವರು ಉಪಸ್ಥಿತರಿದ್ದರು. ಸ್ಥಾಪಕ ಅಧ್ಯಕ್ಷ ಪ್ರದೀಪ್ ಬೊಳ್ಳೂರು ಪ್ರಸ್ತಾವನೆಗೈದು ನಿರೂಪಿಸಿದರು.

Leave A Reply

Your email address will not be published.