ಡಿಕೆ ದಾಟಲಿಲ್ಲ, ಮೇಕೆಯಾದರೂ ದಾಟಲಿ | ನದಿಗೆ ಜಾರಿಬಿದ್ದ ಡಿಕೆ ಯನ್ನು ಟ್ರೊಲ್ ಮಾಡಿ ಬಿಜೆಪಿ ಹಾಕಿತು ಕೇಕೆ !!

ಕರ್ಫ್ಯೂ ನಡುವೆಯೇ ಕಾಂಗ್ರೆಸ್ ಉದ್ದೇಶಿತ ಮೇಕೆದಾಟು ಪಾದಯಾತ್ರೆ ಆರಂಭಿಸಿದೆ. ಈ ಪಾದಯಾತ್ರೆಯನ್ನು ಮೊದಲಿನಿಂದಲೂ ವಿರೋಧಿಸುತ್ತಿದ್ದ ಬಿಜೆಪಿ ಸರ್ಕಾರ, ಈಗ ಡಿ.ಕೆ.ಶಿವಕುಮಾರ್ ಅವರು ನದಿ ಸಂಗಮದಲ್ಲಿ ಜಾರಿ ಬಿದ್ದ ಒಂದು  ವೀಡಿಯೋವನ್ನು ಹಂಚಿಕೊಂಡು ವ್ಯಂಗ್ಯವಾಡಿದೆ.

ಮೇಕೆದಾಟು ಪಾದಯಾತ್ರೆ ಯಶಸ್ವಿಗಾಗಿ ಉದ್ಘಾಟನೆಗೂ ಮುನ್ನ ಡಿ.ಕೆ.ಶಿವಕುಮಾರ್ ಅವರು ಸಂಗಮದಲ್ಲಿ ವಿಶೇಷ ಪೂಜೆ ಮಾಡುವ ವೇಳೆ ಅವರ ಕಾಲು ಜಾರಿತ್ತು.

ಈ ವೀಡಿಯೋ ವೈರಲ್ ಆಗಿದೆ. ವೀಡಿಯೋವನ್ನು ಬಿಜೆಪಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ʻಡಿಕೆ ದಾಟಲಿಲ್ಲ, ಮೇಕೆಯಾದರೂ ದಾಟಲಿʼ ಎಂದು ವ್ಯಂಗ್ಯವಾಡಿದೆ.

ಕಾಂಗ್ರೆಸ್ ಪಾದಯಾತ್ರೆ ವಿರುದ್ಧ ಸಚಿವ ಸುನೀಲ್ ಕುಮಾರ್ ಟ್ವೀಟ್ ಮೂಲಕವಾಗಿ ವಾಗ್ದಾಳಿ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಮೇಕೆದಾಟು ಯೋಜನೆ ನೆನಪಾಗಲಿಲ್ಲವೇ? ಈಗ ಪಾದಯಾತ್ರೆ ಮಾಡುವ ಬದಲು ಅಂದೇ ಯೋಜನೆಗೆ ಸಂಬಂಧಪಟ್ಟ ಕೆಲಸಗಳನ್ನು ಮಾಡಿಸಬಹುದಿತ್ತಲ್ಲವೇ? ಎಂದು ಟ್ವೀಟ್ ಮಾಡಿದ್ದಾರೆ.

ಸಚಿವ ಡಾ.ಕೆ. ಸುಧಾಕರ್ ಅವರು ಟ್ವೀಟ್ ಮಾಡಿ,ಅಧಿಕಾರವಿದ್ದಾಗ ಮೇಕೆದಾಟು ಯೋಜನೆ ಬಗ್ಗೆ ಕಾಂಗ್ರೆಸ್ ನಿರ್ಲಕ್ಷ್ಯ ತೋರಿಸಿತ್ತು. ಈಗ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಬೀದಿನಾಟಕ ಮಾಡುತ್ತಿದೆ. ಅಧಿಕಾರದಲ್ಲಿದ್ದಾಗ ಇಲ್ಲದ ಇಚ್ಛಾಶಕ್ತಿ, ಚುನಾವಣೆಗಾಗಿ ಬಂದಿರುವ ಹಠಾತ್ ರಾಜಕೀಯ ಆಸಕ್ತಿ ಎಲ್ಲವನ್ನೂ ಜನ ಗಮನಿಸುತ್ತಿದ್ದಾರೆ. ಮೇಕೆದಾಟು ಯೋಜನೆ ಜಾರಿ ಮಾಡುವ ನೈಜ ಬದ್ಧತೆ ಇರುವುದು ಬಿಜೆಪಿಗೆ ಮಾತ್ರ ಎಂದು ಟ್ವೀಟ್ ಮಾಡಿದ್ದಾರೆ.

Leave A Reply

Your email address will not be published.