ದೇಶದ ಪ್ರಧಾನಿಯನ್ನು ನಡುರಸ್ತೆಯಲ್ಲಿ ನಿಲ್ಲಿಸುವಂತೆ ಮಾಡಿದ ಪಂಜಾಬ್ ಸರ್ಕಾರದ ನಡೆಯ ಬಗ್ಗೆ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ ಲಾಯರ್ಸ್ ವಾಯ್ಸ್

ನವದೆಹಲಿ: ಪ್ರಧಾನಿ ಮೋದಿಗೆ ಪಂಜಾಬ್‍ನ ಹುಸೇನ್‍ವಾಲಾದಲ್ಲಾದ ಭದ್ರತಾ ಲೋಪವು ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ.ಈ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿದೆ.

ನಿನ್ನೆ ಫಿರೋಜ್​ಪುರದಲ್ಲಿ ರಾಜಕೀಯ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ಮೋದಿ ತೆರಳುತ್ತಿದ್ದ ವೇಳೆಯಲ್ಲಿ ಪಂಜಾಬ್​ನ ಬಟಿಂಡಾದಲ್ಲಿ ಅವರು ಸುಮಾರು 20 ನಿಮಿಷಗಳ ಕಾಲ ರೈತರಿಂದ ರಸ್ತೆ ತಡೆ ಅನುಭವಿಸಿದರು.ಪಂಜಾಬ್​​ ರಾಜ್ಯ ಪೊಲೀಸ್​ ಮುಖ್ಯಸ್ಥರಿಂದ ಭದ್ರತೆ ಬಗ್ಗೆ ಮಾಹಿತಿ ಪಡೆದ ನಂತರವೇ ಪ್ರಧಾನಿ ಮೋದಿ ಬೆಂಗಾವಲು ಪಡೆಯು ರಸ್ತೆ ಮಾರ್ಗದಲ್ಲಿ ಹೊರಟಿದ್ದರೂ ಈ ರೀತಿ ನಡೆದಿದೆ.

ಇದರ ಕುರಿತು ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಿ ಲಾಯರ್ಸ್ ವಾಯ್ಸ್ ಅಸೋಸಿಯೇಷನ್ ಸಲ್ಲಿಸಿದ ಅರ್ಜಿಯನ್ನು ಹಿರಿಯ ವಕೀಲ ಮಣಿಂದರ್ ಸಿಂಗ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್.ವಿ ರಮಣ ನೇತೃತ್ವದ ಪೀಠದ ಮುಂದೆ ಪ್ರಸ್ತಾಪಿಸಿದರು, ಪೀಠ ಈ ಬಗ್ಗೆ ನಾಳೆ ವಿಚಾರಣೆಗೆ ಒಪ್ಪಿಗೆ ಸೂಚಿಸಿದೆ.

ವಿಷಯ ಪ್ರಸ್ತಾಪದ ವೇಳೆ ಇಂತಹ ದುರ್ಘಟನೆಗಳು ಪುನಾರವರ್ತನೆಯಾಗದಂತೆ ನೋಡಿಕೊಳ್ಳಬೇಕು ಎಂದು ಮಣಿಂದರ್ ಸಿಂಗ್ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನಾವು ಅದಕ್ಕೆ ಏನು ಮಾಡಬಹುದು ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ವಕೀಲ ಮಣಿಂದರ್ ಸಿಂಗ್, ಈ ರೀತಿಯ ಘಟನೆಗಳನ್ನು ನಾವು ನಿರೀಕ್ಷಿಸುವುದಿಲ್ಲ, ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯಬಾರದು, ಈ ಹಿನ್ನಲೆ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು ಎಂದು ಮನವಿ ಮಾಡಿದರು. ಅಲ್ಲದೇ ಪಂಜಾಬ್‍ನ ಮುಖ್ಯ ಕಾರ್ಯದರ್ಶಿ ಅನಿರುದ್ಧ್ ತಿವಾರಿ ಮತ್ತು ಪೊಲೀಸ್ ಮಹಾನಿರ್ದೇಶಕ ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಅವರನ್ನು ಅಮಾನತುಗೊಳಿಸುವಂತೆಯೂ ಮನವಿಯಲ್ಲಿ ಕೋರಲಾಯಿತು.ಮನವಿ ಆಲಿಸಿದ ಪೀಠ ನಾಳೆ ಈ ಬಗ್ಗೆ ವಿಸ್ತೃತವಾಗಿ ವಿಚಾರಣೆ ನಡೆಸುತ್ತೇವೆ, ನೀವೂ ಕೇಂದ್ರ ಮತ್ತು ಪಂಜಾಬ್ ಸರ್ಕಾರಕ್ಕೆ ಅರ್ಜಿಯ ಪ್ರತಿಗಳನ್ನು ರವಾನಿಸಿ ಎಂದು ಸೂಚಿಸಿತು.

ಇದೀಗ ಪಂಜಾಬ್​ ಸರ್ಕಾರ ಹಾಗೂ ಪೊಲೀಸ್​ ಇಲಾಖೆಯ ಆಡಳಿತ ವೈಫಲ್ಯದ ಬಗ್ಗೆ ಬಿಜೆಪಿ ಕಿಡಿಕಾರಿದೆ. ಹಾಗೂ ಪಂಜಾಬ್​ನ ಗೃಹ ಸಚಿವ ಸುಖಜಿಂದರ್​ ಸಿಂಗ್​ ರಾಂಧವಾ ಹಾಗೂ ಪಂಜಾಬ್ ಪೊಲೀಸ್​ ಮುಖ್ಯಸ್ಥರನ್ನು ವಜಾಗೊಳಿಸಬೇಕು ಎಂಬ ಕೂಗು ಕೇಳಿ ಬರ್ತಿದೆ.

Leave A Reply

Your email address will not be published.