ಓಮಿಕ್ರಾನ್ ಆತಂಕ : ಅಂತರಾಜ್ಯ ಗಡಿ ಬಂದ್ ಮಾಡುವುದಿಲ್ಲ- ಅಶ್ವತ್ಥ ನಾರಾಯಣ

ಕೊರೊನ ಮತ್ತು ಒಮಿಕ್ರಾನ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದು ನಿಜವಾದರೂ ಬೆಳಗಾವಿ ಸೇರಿದಂತೆ ರಾಜ್ಯದ ಯಾವ ಕಡೆಗಳಲ್ಲೂ ಅಂತರರಾಜ್ಯ ಗಡಿಗಳನ್ನು ಬಂದ್ ಮಾಡುವ ಆಲೋಚನೆ ಸರಕಾರದ ಮುಂದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಬೆಳಗಾವಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಂತರರಾಜ್ಯ ಗಡಿಗಳಲ್ಲಿ ರಾಜ್ಯದೊಳಕ್ಕೆ ಬರುವವರನ್ನು ಪರೀಕ್ಷೆಗೆ ಒಳಪಡಿಸಿ, ಹೆಚ್ಚಿನ ನಿಗಾ ವಹಿಸಲಾಗುವುದು. ಸೋಂಕಿತರು ಕಂಡುಬಂದರೆ ಅಂಥವರನ್ನು ಮಾತ್ರ ನಿಯಂತ್ರಿಸಲಾಗುವುದು. ಉಳಿದಂತೆ ಅಂತರರಾಜ್ಯ ಚಟುವಟಿಕೆ ಮತ್ತು ಓಡಾಟಗಳಿಗೆ ಮುಕ್ತ ಅವಕಾಶ ಮುಂದುವರಿಯಲಿದೆ’ ಎಂದು ಸ್ಪಷ್ಟಪಡಿಸಿದರು.

ಪರಿಸ್ಥಿತಿ ಕೈಮೀರಿ ಹೋಗಬಾರದೆಂದು 15 ದಿನಗಳ ಮಟ್ಟಿಗೆ ಸರಕಾರವು ವಾರಾಂತ್ಯದ ಕರ್ಫ್ಯೂ ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಸಂಪೂರ್ಣ ಲಾಕ್ ಡೌನನ್ನು ತಡೆಯುವುದೇ ಇದರ ಹಿಂದಿನ ಸದುದ್ದೇಶವಾಗಿದೆ. ಕಚೇರಿಗಳು ಸೇರಿದಂತೆ ಪಬ್, ಬಾರ್, ಚಿತ್ರಮಂದಿರ ಇತ್ಯಾದಿಗಳಲ್ಲಿ ಸಾಮರ್ಥ್ಯದ ಶೇ.50ರಷ್ಟು ಮಾತ್ರ ಜನ ಸೇರುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಮುಂಜಾಗ್ರತಾ ಕ್ರಮಗಳ ಹಿಂದೆ ಮುಖ್ಯವಾಗಿ ಬೆಂಗಳೂರಿನಲ್ಲಿ ಪರಿಸ್ಥಿತಿಯನ್ನು ತಹಬಂದಿಗೆ ತರುವ ಚಿಂತನೆ ಇದೆ. ಹೀಗಾಗಿಯೇ ಅಲ್ಲಿ ಎರಡು ವಾರಗಳ ಮಟ್ಟಿಗೆ ಶಾಲಾಕಾಲೇಜುಗಳನ್ನು ಮುಚ್ಚಲಾಗಿದೆ. ಇದರ ಜತೆಯಲ್ಲೇ 15ರಿಂದ 18 ವರ್ಷದ ಯುವಜನರಿಗೂ ಕೊರೋನಾ ಲಸಿಕೆ ಹಾಕಲು ಆರಂಭಿಸಲಾಗಿದೆ. ಆದ್ದರಿಂದ ಯಾರೂ ಆತಂಕಕ್ಕೆ ಒಳಪಡಬೇಕಾಗಿಲ್ಲ ಎಂದು ಅವರು ಭರವಸೆಯ ನೀಡಿದರು

Leave A Reply

Your email address will not be published.