ಇಬ್ಬರು ಗಂಡು ಮಕ್ಕಳಿದ್ದರೂ ಹೆತ್ತಬ್ಬೆಯ ಹೆಣವನ್ನು 4 ಕಿ.ಮೀ ದೂರದವರೆಗೆ ಭುಜದಲ್ಲಿ ಹೊತ್ತು ಸ್ಮಶಾನಕ್ಕೆ ಸಾಗಿಸಿದ ನಾಲ್ವರು ಹೆಣ್ಣು ಮಕ್ಕಳು !! | ಸಂಸ್ಕಾರದ ತಡೆಗೋಡೆ ಮುರಿದು ಅಂತ್ಯಸಂಸ್ಕಾರ ಮಾಡಿದ ಮಗಳಂದಿರು

ಯಾವುದೇ ತಾಯಿಯೂ ತನ್ನ ಮಕ್ಕಳು ಅದೆಷ್ಟು ತಪ್ಪು ಮಾಡಿದರೂ ತನ್ನ ಹೊಟ್ಟೆಗಾಕಿಕೊಂಡು ಪ್ರೀತಿಯ ಅಪ್ಪುಗೆ ನೀಡುತ್ತಾಳೆ. ಆದರೆ ಪ್ರಪಂಚ ಎಷ್ಟು ಮುಂದುವರಿದಿದೆ ಎಂದರೆ ಅದ್ಭುತವಾದ ಜಗತ್ತನ್ನು ತೋರಿಸಿ ತನ್ನ ಕಾಲ ಮೇಲೆ ನಿಲ್ಲುವಂತಹ ಶಕ್ತಿ ನೀಡುವ ತಾಯಿ,ಮಕ್ಕಳು ಬೆಳೆಯುವವರೆಗೆ ಮಾತ್ರ ಆಕೆಯ ಪಾತ್ರ ಎಂಬಂತಾಗಿದೆ. ಬಳಿಕ ಅಮ್ಮ ಎಂಬ ಸ್ವಲ್ಪವು ಕರುಣೆ ಇಲ್ಲದೆ ಆಕೆಯನ್ನು ಒಂಟಿ ಮಾಡುತ್ತಾರೆ.

ಹೌದು. ಇಂದಿನ ಕಾಲದಲ್ಲಿ ಜನರ ಮನಸ್ಥಿತಿ ಹೇಗಿದೆ ಎಂದರೆ, ನಮಗೆ ಹೆಣ್ಣು ಮಗು ಬೇಡ ಗಂಡು ಮಗು ಬೇಕು ಎಂಬಂತಾಗಿದೆ. ಆದರೆ ತಂದೆ-ತಾಯಿಯ ಸೇವೆಯನ್ನು ಕೊನೆಯವರೆಗೆ ಮಾಡುವವರು ಹೆಣ್ಣು ಎಂದೇ ಹೇಳಬಹುದು.ಪ್ರತಿಯೊಬ್ಬ ಗಂಡು ಹೆತ್ತವರನ್ನು ನಿರ್ಲಕ್ಷ ಮಾಡುತ್ತಾರೆ ಎಂದರೆ ತಪ್ಪಾಗಬಹುದು ಕೂಡ. ಯಾಕಂದ್ರೆ ಎಲ್ಲರೂ ಒಂದೇ ಮನಸ್ಥಿತಿವುಳ್ಳವರು ಅಲ್ಲ ತಾನೇ?. ಇಷ್ಟೆಲ್ಲಾ ಈ ಕುರಿತು ಹೇಳುತ್ತಿರಲು ಕಾರಣವಿದೆ. ಹೆಣ್ಣು ಹೇಗೆ ಆಸರೆಯಾಗುವಳು ಎಂಬ ಸಾರಾಂಶವುಳ್ಳ ಘಟನೆ ಇಲ್ಲಿದೆ ನೋಡಿ.

ಪರಿಸ್ಥಿತಿ ಯಾವ ಮಟ್ಟಿಗೆ ತಲುಪಿದೆ ಎಂದರೆ ತಾಯಿಗೆ ಇಬ್ಬರು ಗಂಡು, ನಾಲ್ಕು ಹೆಣ್ಣು ಮಕ್ಕಳನ್ನು ಹಡೆದಿದ್ದಾರೆ. ಆದ್ರೆ ಈಗ ಮಾತ್ರ ಆ ಇಬ್ಬರು ಗಂಡು ಮಕ್ಕಳಿಗೂ ಆಕೆ ಬೇಡವಾದವಳು. ಎಷ್ಟರ ಮಟ್ಟಿಗೆ ಎಂದರೆ ಆಕೆಯ ಹೆಣವನ್ನು ನೋಡಲು ಬರದೇ ಇರೋವರೆಗೆ. ಹೌದು.ಒಡಿಶಾದ ಪುರಿಯಲ್ಲಿ ಈ ಘಟನೆ ನಡೆದಿದ್ದು,ಅಂತ್ಯಕ್ರಿಯೆಗೆ ಇಬ್ಬರು ಸಹೋದರರು ಬಾರದ ಹಿನ್ನೆಲೆಯಲ್ಲಿ ನಾಲ್ವರು ಮಹಿಳೆಯರು ತಮ್ಮ ತಾಯಿಯ ಮೃತದೇಹವನ್ನು 4 ಕಿಲೋಮೀಟರ್ ದೂರದ ಸ್ಮಶಾನದವರೆಗೆ ಭುಜದ ಮೇಲೆ ಹೊತ್ತುಕೊಂಡು ಅಂತಿಮ ವಿಧಿಗಳನ್ನು ನೆರವೇರಿಸಿದ ಘಟನೆ ನಡೆದಿದೆ.

ವರದಿಗಳ ಪ್ರಕಾರ, ಪುರಿಯ ಮಂಗಳಘಾಟ್‌ನ ಅಷ್ಟಮಠಾಧೀಶರಾದ ಜಾತಿ ನಾಯಕ್ ಅವರು ಭಾನುವಾರ ನಿಧನರಾದರು.ಆಕೆಯ ಇಬ್ಬರು ಪುತ್ರರಲ್ಲಿ ಯಾರೂ ಅಂತಿಮ ವಿಧಿವಿಧಾನಗಳಿಗೆ ಹಾಗೂ ಆಕೆಯ ಹೆಣ ನೋಡಲೂ ಬರಲಿಲ್ಲ ಎಂದು ನೆರೆಹೊರೆಯವರು ಹೇಳಿದ್ದಾರೆ. ಆಗ ಆಕೆಯ ನಾಲ್ಕು ಹೆಣ್ಣುಮಕ್ಕಳು ಸಂಸ್ಕಾರದ ತಡೆಗೋಡೆಯನ್ನು ಮುರಿದು ತಮ್ಮ ತಾಯಿಯ ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಿದರು.

ಹೆಣ್ಣು ಮಕ್ಕಳು ತಮ್ಮ ತಾಯಿಯ ಶವವನ್ನು ಮನೆಯ ಹೊರಗೆ ಹೊತ್ತೊಯ್ದರು ಮತ್ತು ಕೆಲವು ನೆರೆಹೊರೆಯವರ ಸಹಾಯದಿಂದ, ಅವರು ಶವವನ್ನು ಸ್ಮಶಾನಕ್ಕೆ ಸಾಗಿಸಲು ಅಗತ್ಯವಾದುದನ್ನು ಸಿದ್ಧಪಡಿಸಿದರು. ಅವರು ತಮ್ಮ ತಾಯಿಯ ಪಾರ್ಥಿವ ಶರೀರವನ್ನು ಹೆಗಲ ಮೇಲೆ ಹೊತ್ತುಕೊಂಡು 4 ಕಿ.ಮೀ ದೂರ ನಡೆದು ಸ್ಮಶಾನಕ್ಕೆ ಸಾಗಿ ಅಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.

ಜಾತಿ ನಾಯಕ್ ಅವರ ಅಳಿಯರೊಬ್ಬರು ಮಾತನಾಡಿ, ಅವರ ಅತ್ತೆ ಕೆಲವು ದಿನಗಳ ಹಿಂದೆ ಅವರ ಮನೆಗೆ ಭೇಟಿ ನೀಡಿದ್ದರು ಮತ್ತು ‘ನೀನು ನನ್ನ ಹಿರಿಯ ಮಗ, ನನ್ನ ಇಬ್ಬರು ಪುತ್ರರಲ್ಲಿ ಯಾರೂ ನನ್ನನ್ನು ನೋಡಿಕೊಳ್ಳುತ್ತಿಲ್ಲ. , ಅವರು ವರ್ಷಗಳಿಂದ ನನ್ನನ್ನು ಭೇಟಿ ಮಾಡಿಲ್ಲ. ಎಂದು ಅಲವತ್ತುಕೊಂಡಿದ್ದರು ‘ ಎಂದು ಹೇಳಿದರು.

ಪ್ರಪಂಚ ಇಷ್ಟೇ ಹಡೆದವಳನ್ನೇ ದೂರ ತಳ್ಳಿದವರು ಮುಂದೆ..? ಹೌದು. ಹೆತ್ತಬ್ಬೆಯನ್ನು ಒಮ್ಮೆ ಕಳಕೊಂಡ ಮೇಲೆ ಮತ್ತೆ ಸಿಗುವಳೇ.. ಯೋಚಿಸಿ. ಓದುಗರಾದ ನೀವು ಸುಂದರ ಬದುಕನ್ನು ಪ್ರೀತಿ ಪಾತ್ರರೊಂದಿಗೆ ಕಟ್ಟಿಕೊಳ್ಳಿ.ನಿಮ್ಮೊಂದಿಗೆ ಹೆತ್ತವರಿಗೂ ಖುಷಿಯನ್ನು ದಾನ ಮಾಡಿ…

Leave A Reply

Your email address will not be published.