ಗುಂಡ್ಯ: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಮುರಿದು ಬಿತ್ತು ಮರ- ಏನಾಯಿತೆಂದು ನೋಡುವಷ್ಟರಲ್ಲೇ ಹಾರಿಹೋಗಿತ್ತು ಚಾಲಕನ ಪ್ರಾಣ!!

ಗುಂಡ್ಯ: ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಮೇಲೆ ಏಕಾಏಕಿ ಮರವೊಂದು ಮುರಿದುಬಿದ್ದು ಕಾರಿನೊಳಗಿದ್ದ ಚಾಲಕ ಸ್ಥಳದಲ್ಲೇ ಮೃತಪಟ್ಟರೆ,ಕಾರಿನಲ್ಲಿದ್ದ ಮಹಿಳೆ ಹಾಗೂ ಮಕ್ಕಳು ಅದೃಷ್ಟವಶಾತ್ ಪಾರಾದ ಘಟನೆ ಇಂದು ಮುಂಜಾನೆ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ನಡೆದಿದೆ.

ಘಟನೆ ವಿವರ: ಉಡುಪಿ ಮೂಲದ ಕುಟುಂಬವೊಂದರ ಮಹಿಳೆ, ಮಕ್ಕಳ ಸಹಿತ ಚಾಲಕ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಕಾರು ಅಡ್ಡಹೊಳೆ ತಲುಪುತ್ತಿದ್ದಂತೆ ಕಾರಿನಲ್ಲಿ ಶಬ್ದಬರಲಾರಾಂಭಿಸಿದೆ. ಇದನ್ನರಿತ ಚಾಲಕ ರಸ್ತೆ ಬದಿ ಕಾರು ನಿಲ್ಲಿಸಿ ಬೋನಟ್ ಎತ್ತಿ ಪರೀಕ್ಷಿಸುತ್ತಿದ್ದ ವೇಳೆ ಈ ದುರ್ಗಟನೆ ನಡೆದಿದೆ.

ರಸ್ತೆ ಬದಿಯಲ್ಲೇ ಇದ್ದ ಆಲುಮಡ್ಡಿ ಮರ ಏಕಾಏಕಿ ಕಾರು ಹಾಗೂ ಚಾಲಕನ ಮೇಲೆ ಬಿದ್ದಿದ್ದು ಆತ ಸ್ಥಳದಲ್ಲೇ ಅಸುನಿಗಿದ್ದಾನೆ.ಕಾರಿನಲ್ಲಿದ್ದ ಮಹಿಳೆ ಹಾಗೂ ಮಕ್ಕಳು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ರಸ್ತೆ ಬದಿ ಆಲುಮಡ್ಡಿ ಮರ ತೆರವಿಗೆ ಆಗ್ರಹ: ಇತ್ತೀಚಿನ ಕೆಲ ವರ್ಷಗಳಿಂದ ಆಲು ಮಡ್ಡಿ ಮರಬಿದ್ದು ಹಲವರು ಮೃತಪಟ್ಟ ಘಟನೆ ವರದಿಯಾಗುತ್ತಲೇ ಇದೆ.ಕಳೆದ ಕೆಲ ವರ್ಷಗಳ ಹಿಂದೆ ಕಡಬ ತಾಲೂಕಿನ ಸುಂಕದಕಟ್ಟೆ ಕಟ್ಟೆ ಸಮೀಪ ಬೈಕಿನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಆಲುಮಡ್ಡಿ ಮರಬಿದ್ದು ಆತ ಸ್ಥಳದಲ್ಲೇ ಅಸುನಿಗಿದ್ದ ಘಟನೆ ಇನ್ನೂ ಮಾಸಿಲ್ಲ. ಒಂದರಮೇಲೊಂದರಂತೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇದ್ದು ಹೆದ್ದಾರಿ ಬದಿಯ ಇಂತಹ ಜೀವತೆಗೆಯುವ ಮರಗಳ ತೆರವಿಗೆ ಸಂಬಂಧಪಟ್ಟ ಇಲಾಖೆ ಗಮನಹರಿಸಬೇಕಾಗಿದೆ.

Leave A Reply

Your email address will not be published.