ಸೋಂಕಿತರ ಜೇಬಿಗೆ ಕತ್ತರಿ ಹಾಕಿ ಖಜಾನೆ ತುಂಬಿಸಿಕೊಳ್ಳುತಿದ್ದ ಖಾಸಗಿ ಆಸ್ಪತ್ರೆಗೆ ಬೀಳಲಿದೆ ಬ್ರೇಕ್|ಈ ಕುರಿತು ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ ಆರೋಗ್ಯ ಇಲಾಖೆ

ಬೆಂಗಳೂರು:ಕೊರೋನ ಹೆಚ್ಚಾದಂತೆ ಖಾಸಗಿ ಆಸ್ಪತ್ರೆಗಳ ಖಜಾನೆ ಹೆಚ್ಚಾಗುವಂತೆ ಆಗಿದೆ. ಮೊದಲನೆ ಹಾಗೂ ಎರಡನೇ ಅಲೆ ಸೋಂಕಿನ ಸಂದರ್ಭದಲ್ಲಿ, ಸೋಂಕಿತರಿಂದ ಹಣ ದೋಚಿದ್ದೆ ಅಧಿಕವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅದೆಷ್ಟೋ ಮಂದಿ ದೂರು ನೀಡಿದ್ದಾರೆ. ಇದೀಗ ಇದಕ್ಕೆಲ್ಲ ಪರಿಹಾರ ಎಂಬಂತೆ ಆರೋಗ್ಯ ಇಲಾಖೆ ಸೂಕ್ತವಾದ ನಿರ್ಧಾರ ಕೈಗೊಂಡಿದೆ.

ಹೌದು.ಸೋಂಕಿತರನ್ನು ಅವಶ್ಯಕತೆಗಿಂತ ಹೆಚ್ಚು ಸಮಯ ಆಸ್ಪತ್ರೆಗಳಲ್ಲಿರಿಸಿ ವಂಚಿಸಿದ್ದ ಖಾಸಗಿ ಆಸ್ಪತ್ರೆಗಳ ಧನ ದಾಹಕ್ಕೆ ಈ ಬಾರಿ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಮುಂದಾಗಿದೆ.ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿನ ಜೊತೆಗೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಯಾವುದೆ ಸಮಯದಲ್ಲಿ ಮೂರನೆ ಅಲೆ ಕಾಣಿಸಿಕೊಳ್ಳಬಹುದು ಎಂಬ ಆತಂಕ ಹೆಚ್ಚಾಗುತ್ತಿದ್ದಂತೆ
ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರು ಸೋಂಕಿತರ ಜೇಬಿಗೆ ಕತ್ತರಿ ಹಾಕುವ ಖಾಸಗಿ ಆಸ್ಪತ್ರೆಗಳಿಗಾಗಿ ಪ್ರತ್ಯೇಕ ಮಾರ್ಗಸೂಚಿ ರಚನೆ ಮಾಡಿದ್ದಾರೆ.

ಕೊರೊನಾ ಎರಡನೆ ಅಲೆ ಸಂದರ್ಭದಲ್ಲಿ ಕೆಲ ಖಾಸಗಿ ಆಸ್ಪತ್ರೆಗಳು ಸೋಂಕಿತರನ್ನು ಒಂದು ತಿಂಗಳಿಗೂ ಹೆಚ್ಚು ಕಾಲ ಆಸ್ಪತ್ರೆಗಳಲ್ಲಿ ಉಳಿಸಿಕೊಂಡು ಲಕ್ಷ ಲಕ್ಷ ಹಣ ವಸೂಲಿ ಮಾಡಿದ್ದವು. ಇಂತಹ ಘಟನೆಗಳು ಮರುಕಳಿಸಬಾರದು ಎಂಬ ಉದ್ದೇಶದಿಂದ ಆರೋಗ್ಯ ಇಲಾಖೆ ಮೂರನೆ ಅಲೆ ಆರಂಭಕ್ಕೂ ಮುನ್ನವೆ ಈ ನಿರ್ಧಾರ ಕೈ ಗೊಂಡಿದೆ.

ಮಾರ್ಗಸೂಚಿಗಳು ಇಂತಿವೆ:

ಪಾಸಿಟಿವ್ ಕಾಣಿಸಿಕೊಂಡ 10 ದಿನಕ್ಕೆ ಸೋಂಕಿನ ಗುಣಲಕ್ಷಣವಿಲ್ಲದಿದ್ದರೆ ಸೋಂಕಿತರನ್ನು ಡಿಸ್ಚಾರ್ಜ್ ಮಾಡಬಹುದು. ಸೋಂಕಿತರಿಗೆ ರೋಗದ ಲಕ್ಷಣ ಕಡಿಮೆ ಆದ್ರೆ ಡಿಸ್ಚಾರ್ಜ್ ಮಾಡಿ ಮನೆಯಲ್ಲಿ ಹೋಂ ಕ್ವಾರಂಟೈನ್ ಮಾಡಬಹುದು. ಗುಣ ಲಕ್ಷಣ ಇಲ್ಲದ ಸೋಂಕಿತರನ್ನು ಹತ್ತಕ್ಕಿಂತ ಹೆಚ್ಚು ದಿನ ಆಸ್ಪತ್ರೆಗಳಲ್ಲಿ ಉಳಿಸಿಕೊಳ್ಳಬಾರದು. ಹಾಗೂ ಸರ್ಕಾರ ನಿಗಪಡಿಸಿರುವ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಅಲ್ಲದೆ ಆಸ್ಪತ್ರೆ ಕೊರತೆಗೂ ಕಡಿವಾಣ ಹಾಕಿದ್ದು,ಎರಡನೆ ಅಲೆ ತೀವ್ರತೆ ಕಡಿಮೆಯಾದ ನಂತರ ಬೆಂಗಳೂರಿನಲ್ಲಿ ಕೊರೊನಾ ಚಿಕಿತ್ಸೆಗೆ ಕೇವಲ ಬೌರಿಂಗ್ ಆಸ್ಪತ್ರೆಯನ್ನು ಮೀಸಲಿಡಲಾಗಿತ್ತು. ಕೆಲ ದಿನಗಳ ಹಿಂದೆ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿದ್ದಂತೆ ರಾಜೀವ್‍ಗಾಂ ಎದೆರೋಗ ಆಸ್ಪತ್ರೆಯನ್ನು ಕೊರೊನಾ ಚಿಕಿತ್ಸೆಗೆ ಮೀಸಲಿಡಲು ತೀರ್ಮಾನಿಸಲಾಗಿತ್ತು.

Leave A Reply

Your email address will not be published.