ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಹಲವು ಸರ್ಕಾರಿ ನಿಯಂತ್ರಣದ ದೇವಸ್ಥಾನಗಳಿಗೆ ಶೀಘ್ರ ಸ್ವಾತಂತ್ರ್ಯ, ದೇವಾಲಯಗಳ ಆದಾಯ ಅವುಗಳ ಅಭಿವೃದ್ಧಿಗೆ ಮಾತ್ರ ಮೀಸಲು |  ಹಿಂದುತ್ವದ ಬ್ರಹ್ಮಾಸ್ತ್ರ ಪ್ರಯೋಗಿಸಿದ ಸಿಎಂ ಬೊಮ್ಮಾಯಿ !

ಹುಬ್ಬಳ್ಳಿ: ಮತ್ತೆ ಹಿಂದುತ್ವದ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ರಾಜ್ಯ ಬಿಜೆಪಿ ಸಿದ್ಧಗೊಂಡಿದೆ. ಇತ್ತೀಚಿಗೆ ವಿಧಾನಸಭೆಯಲ್ಲಿ ಮತಾಂತರ ತಡೆ ವಿಧೇಯಕ ಅನುಮೋದನೆ ವೇಳೆ ಸಚಿವ ಈಶ್ವರಪ್ಪ ಒಂದು ಮಾತು ಹೇಳಿದ್ದರು. ಹಿಂದೂ ಧರ್ಮದ ಉದ್ಧಾರಕ್ಕಾಗಿ, ಹಿತಕ್ಕಾಗಿ ಇನ್ನೂ ಮೂರು ಕಾಯ್ದೆ ತರ್ತೀವಿ ಎಂದು ಘೋಷಿಸಿದ್ರು. ಇದಕ್ಕೆ ಪೂರಕವಾದ ಬೆಳವಣಿಗೆಗಳು, ತಯಾರಿಗಳು ಪಕ್ಷದ ಒಳಗಿಂದೊಳಗೆ ಅತ್ಯಂತ ಪ್ಲಾನ್ಡ್ ಆಗಿ ನಡೀತಿದೆ.

ಇಂದು ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿಯ ಸಮಾರೋಪ ಭಾಷಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿಂದುತ್ವದ ದೊಡ್ಡ ಅಸ್ತ್ರ ಪ್ರಯೋಗಿಸಿದ್ದಾರೆ. ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ದೇವಾಲಯಗಳನ್ನು ಶೀಘ್ರವೇ ಮುಕ್ತ ಮಾಡುವುದಾಗಿ ಘೋಷಿಸಿದ್ದಾರೆ. ಆ ಮೂಲಕ ಹಿಂದೂ ಮತ ಗಟ್ಟೆಗಳನ್ನು ಪೂರಾ ವಶ ಮಾಡಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಸಿದ್ಧಗೊಂಡಿದೆ. ಬಿಜೆಪಿ ಪ್ರಯೋಗಿಸಲು ಇರುವ ಈ ಬ್ರಹ್ಮಾಸ್ತ್ರದಿಂದಾಗಿ ಮತ್ತೆ ಬಹುಮತದಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಸುಲಭವಾಗಲಿದೆ.

ಇತರೆ ಧರ್ಮಗಳ ಪ್ರಾರ್ಥನಾ ಮಂದಿರಗಳು ಸ್ವಾತಂತ್ರ್ಯವಾಗಿವೆ. ಆದರೆ ನಮ್ಮ ಹಿಂದೂ ದೇವಾಲಯಗಳು ಮಾತ್ರ ಹಲವು ನಿಯಂತ್ರಣಕ್ಕೆ ಒಳಪಟ್ಟಿವೆ. ಹಲವು ಕಟ್ಟುಪಾಡುಗಳಿಗೆ ಒಳಪಟ್ಟು ಕಿರುಕುಳ ಅನುಭವಿಸ್ತಿವೆ. ದೇವಸ್ಥಾನದ ಆದಾಯ ಬೇರೆ ಕಡೆ ಹರಿದುಹೋಗದಂತೆ, ದೇವಸ್ಥಾನಗಳ ಆದಾಯವನ್ನು ದೇವಸ್ಥಾನಗಳಿಗೆ ಬಳಸುವ ಕಾರ್ಯವನ್ನು ನಮ್ಮ ಸರ್ಕಾರ ಜಾರಿಗೆ ತರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಬಜೆಟ್ ಅಧಿವೇಶನಕ್ಕೆ ಮುನ್ನವೇ ಇದಕ್ಕೆ ಸಂಬಂಧಿಸಿದ ಕಾನೂನು ಜಾರಿ ಮಾಡುವ ಸುಳಿವನ್ನು ಮುಖ್ಯಮಂತ್ರಿ ಬೊಮ್ಮಾಯಿ ನೀಡಿದ್ದಾರೆ. ಹಿಂದೂ ನಾಯಕರುಗಳು ಇದರಿಂದ ಖುಷ್ ಆಗಿದ್ದಾರೆ.

ಇದೇ ವೇಳೆ ನಮ್ಮ ಅಜೆಂಡಾ ಕ್ಲಿಯರ್ ಆಗಿದ್ದು, ಕೊಪ್ಪಳದ ಅಂಜನಾದ್ರಿ ಕ್ಷೇತ್ರವನ್ನು ಅಯೋಧ್ಯೆಯ ಶ್ರೀರಾಮಚಂದ್ರನ ಮಂದಿರದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸಿ ಪ್ರಧಾನಿ ಮೋದಿಯಿಂದಲೇ ಉದ್ಘಾಟನೆ ಮಾಡಿಸೋದಾಗಿ ಹೇಳಿದ್ದಾರೆ. ಇನ್ನು ಮತಾಂತರ ನಿಗ್ರಹ ಕಾಯ್ದೆ ಜಾರಿಗಾಗಿ ವಿಶೇಷ ಟಾಸ್ಕ್ ಫೋರ್ಸ್ ರಚಿಸುವುದಾಗಿ ಸಿಎಂ ಬೊಮ್ಮಾಯಿ ಪ್ರಕಟಿಸಿದ್ದಾರೆ.
ಇನ್ನು ಹೊಸ ಕಾನೂನು ಜಾರಿಗೆ ಬಂದ್ರೇ ರಾಜ್ಯದ 34,558 ದೇಗುಲಗಳು ಮುಕ್ತಗೊಳ್ಳಲಿವೆ. ಇದರಲ್ಲಿ ಎ ಗ್ರೇಡ್ ದೇಗುಲಗಳೇ 132 ಇದೆ. ಇವು 25 ಲಕ್ಷ ಮೇಲ್ಪಟ್ಟು ಅಧಿಕ ಆದಾಯ ತಂದುಕೊಡುವ ದೇಗುಲಗಳಾಗಿವೆ. ಐದರಿಂದ 25 ಲಕ್ಷದ ಒಳಗೆ ವಾರ್ಷಿಕ ಆದಾಯ ತಂದುಕೊಡುವ ಬಿ ಶ್ರೇಣಿಯ ದೇಗುಲಗಳ ಸಂಖ್ಯೆಯೇ 180 ಇದೆ. 5 ಲಕ್ಷದ ಒಳಗೆ ಸರ್ಕಾರಕ್ಕೆ ಆದಾಯ ತಂದುಕೊಡುವ ದೇಗುಲಗಳ ಸಂಖ್ಯೆ 34,246.

ಈ ಎಲ್ಲಾ ದೇಗುಲಗಳಿಗೆ ಶೀಘ್ರ ಸ್ವಾತಂತ್ರ್ಯ?!

  • ಚಾಮುಂಡಿ ದೇಗುಲ, ಚಾಮುಂಡಿ ಬೆಟ್ಟ, ಮೈಸೂರು
  • ಶ್ರೀಕಂಠೇಶ್ವರ ದೇಗುಲ, ನಂಜನಗೂಡು
  • ಕುಕ್ಕೆ ಸುಬ್ರಹ್ಮಣ್ಯ ದೇವಳ
  • ಘಾಟಿ ಸುಬ್ರಹ್ಮಣ್ಯ ದೇಗುಲ
  • ಕೊಲ್ಲೂರು ಮೂಕಾಂಬಿಕೆ ದೇಗುಲ
  • ಸವದತ್ತಿ ಯಲ್ಲಮ್ಮ ದೇಗುಲ
  • ಬಾದಾಮಿ ಬನಶಂಕರಿ ದೇಗುಲ
  • ಬೆಂಗಳೂರು ಬನಶಂಕರಿ ದೇಗುಲ
  • ಹಾಸನಾಂಬೆ ದೇವಾಲಯ, ಹಾಸನ
  • ನಿಮಿಷಾಂಬ ದೇವಾಲಯ, ಶ್ರೀರಂಗಪಟ್ಟಣ

ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿಯವರ ಘೋಷಣೆಗೆ ಪ್ರೇರಣೆ ಆಗಿದ್ದು ಬಹುಷಃ ಇತ್ತೀಚಿಗೆ ಉತ್ತರಾಖಂಡ್ ಸರ್ಕಾರ ತೆಗೆದುಕೊಂಡ ಖಡಕ್ ತೀರ್ಮಾನ. ಡಿಸೆಂಬರ್ ಮೂರರಂದು ವಿವಾದಾತ್ಮಕ ಚಾರ್‍ಧಾಮ್ ದೇವಸ್ಥಾನಗಳ ನಿರ್ವಹಣಾ ಮಂಡಳಿ ಕಾಯ್ದೆಯನ್ನು ಅಲ್ಲಿನ ಸಿಎಂ ಪುಷ್ಕರ್ ಸಿಂಗ್ ಧಾಮಿ ರದ್ದು ಮಾಡಿದ್ದರು. ಈ ಮೂಲಕ ಚಾರ್‍ಧಾಮ್ ಕ್ಷೇತ್ರಗಳಾದ ಗಂಗೋತ್ರಿ, ಯಮುನೋತ್ರಿ, ಕೇದಾರ್‍ನಾಥ್, ಬದರಿನಾಥ್ ಸೇರಿ 53 ದೇಗುಲಗಳಿಗೆ ಸ್ವಾತಂತ್ರ್ಯ ನೀಡಿದ್ದರು. ವಿಧಾನಸಭೆ ಚುನಾವಣೆ ಸನಿಹದಲ್ಲಿರುವುದರಿಂದ ಉತ್ತರಾಖಂಡ್ ಬಿಜೆಪಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂಬ ಟೀಕೆಗಳು ಕೇಳಿಬಂದಿದ್ದವು.

ದ್ರಾವಿಡ ನಾಡು ತಮಿಳುನಾಡಿನಲ್ಲೂ ಇದಕ್ಕೆ ಸಂಬಂಧಿಸಿದ ಹೋರಾಟ ತೀವ್ರಗೊಂಡಿದೆ. ದೇಗುಲಗಳನ್ನು ಸರ್ಕಾರದ ವಶಕ್ಕೆ ಪಡೆಯುವ ಕೆಲಸ ಆರಂಭ ಮಾಡಿದ್ದು ಬ್ರಿಟೀಷರು. 1863ರಲ್ಲಿಯೇ ಧಾರ್ಮಿಕ ದತ್ತಿ ಕಾಯ್ದೆಯನ್ನು ಈಸ್ಟ್ ಇಂಡಿಯಾ ಕಂಪನಿ ಜಾರಿಗೊಳಿಸಿತ್ತು. ಇದನ್ನೇ ಈವರೆಗೂ ಸರ್ಕಾರಗಳು ಅನುಸರಿಸಿಕೊಂಡು ಬರುತ್ತಿದ್ದವು. ಆದರೆ ದೇಗುಲಗಳು ಸರ್ಕಾರದ ಹಿಡಿತದಲ್ಲಿ ಇರಬಾರದು ಎಂದು ಬಿಜೆಪಿ ಹೋರಾಟ ಆರಂಭಿಸಿತ್ತು. ಕಳೆದ ಅಕ್ಟೋಬರ್ ತಿಂಗಳಲ್ಲಷ್ಟೇ ವಿಹೆಚ್‍ಪಿ ದೇಶಾವ್ಯಾಪಿ ಆಂದೋಲನ ನಡೆಸಿತ್ತು. ಅಧಿಕಾರಕ್ಕೆ ಬಂದ ರಾಜ್ಯಗಳಲ್ಲಿ ದೇಗುಲಗಳಿಗೆ ಮುಕ್ತಿ ಕೊಡುವ ಕೆಲಸದಲ್ಲಿ ಬಿಜೆಪಿ ನಿರತವಾಗಿದೆ.

Leave A Reply

Your email address will not be published.