ವೈಯಕ್ತಿಕ ಬದ್ಧತೆ, ಸಾಮಾಜಿಕ ಕಾಳಜಿಯಿರಲಿ: ಲೋಕೇಶ್ ಕಾಯರ್ಗ | ಪತ್ರಕರ್ತರ ಸಮ್ಮೇಳನದಲ್ಲಿ ಮಾಧ್ಯಮ ವಿಚಾರಗೋಷ್ಠಿ

ಮಂಗಳೂರು, ಡಿ. ೨೮: ವೈಯಕ್ತಿಕ ಬದ್ಧತೆ ಹಾಗೂ ಸಾಮಾಜಿಕ ಕಾಳಜಿ ಹೊಂದಿರುವ ಪತ್ರಕರ್ತ ಸಾಮಾಜಿಕ ಹೊಣೆಗಾರಿಕೆಯನ್ನು ಸುಲಭವಾಗಿ ನಿರ್ವಹಿಸಬಹುದು ಎಂದು ಪ್ರಜಾನುಡಿ ಮೈಸೂರಿನ ಸಂಪಾದಕರಾದ ಲೋಕೇಶ್ ಕಾಯರ್ಗ ಹೇಳಿದರು.
ಮಂಗಳೂರು ಪುರಭವನದಲ್ಲಿ ಮಂಗಳವಾರ ನಡೆದ ಪತ್ರಕರ್ತರ ಜಿಲ್ಲಾ ಸಮ್ಮೇಳನದಲ್ಲಿ ‘ಮಾಧ್ಯಮ-ಸಾಮಾಜಿಕ ಹೊಣೆಗಾರಿಕೆ’ ಎಂಬ ವಿಷಯದಲ್ಲಿ ನಡೆದ ಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಿಂದೆ ಪತ್ರಿಕೋದ್ಯಮದಲ್ಲಿ ಸೈದ್ಧಾಂತಿಕ ನೆಲೆಗಟ್ಟು ಜಾಗೃತವಾಗಿತ್ತು. ಅದರ ಮೂಖೇನವೇ ಸುದ್ದಿಗಳು ಸಿದ್ಧವಾಗುತ್ತಿತ್ತು. ಆದರೆ ಈಗ ಜನಪ್ರಿಯತೆಯ ಬೆನ್ನು ಬಿದ್ದು ಅದರ ಹಾದಿಯಲ್ಲಿ ಮಾಧ್ಯಮಗಳು ಸಾಗುವ ಕಾರಣದಿಂದ ಸೈದ್ಧಾಂತಿಕ ನೆಲೆಗಟ್ಟು ಎಂಬುದು ಶಿಥಿಲವಾಗುತ್ತಿದೆ. ಇದರ ಬಗ್ಗೆ ಅವಲೋಕಿಸಬೇಕಾಗಿದೆ. ಹಿಂದಿನ ಮಾಧ್ಯಮ ಯುಗ ಹಾಗೂ ಈಗಿನ ಮಾಧ್ಯಮ ಸನ್ನಿವೇಶ ಬೇರೆ ಬೇರೆಯಾಗಿರುವ ಕಾರಣದಿಂದ ಒಂದಿಷ್ಟು ಸರಿ ತಪ್ಪುಗಳ ಚರ್ಚೆ ಸಾಮಾನ್ಯವಾಗಿದೆ ಎಂದರು.

ಹಿರಿಯ ಪತ್ರಕರ್ತರಾದ ಕೋಡಿಬೆಟ್ಟು ರಾಜಲಕ್ಷ್ಮೀ ಮಾತನಾಡಿ, ಲಭ್ಯ ಇರುವ ಅವಕಾಶವನ್ನು ಪತ್ರಕರ್ತ ಬದ್ಧತೆಯಿಂದ ಹಾಗೂ ಸಾಮಾಜಿಕ ಹೊಣೆಗಾರಿಕೆಯಿಂದ ನಿರ್ವಹಿಸಿದರೆ ಸಮಾಜದ ಶ್ರೇಯಸ್ಸಿಗೆ ಅನುಕೂಲವಾಗಬಹುದು. ಮಾಧ್ಯಮದ ಸುದ್ದಿಯ ಓಟಕ್ಕೆ ಲಗಾಮು ಹಾಕುವವರು ಯಾರು ಎಂಬ ಚರ್ಚೆಗಿಂತ ಮತ್ತೊಮ್ಮೆ ಸ್ವಯಂ ನಿಯಂತ್ರಣ ಎಂಬ ಸೂತ್ರಕ್ಕೆ ಬದ್ಧರಾದರೆ ಉತ್ತಮ ಎಂದರು.
ಮನೋಹರ್ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಸುದ್ದಿ ಬಿಡುಗಡೆಯ ಡಾ.ಯು.ಪಿ ಶಿವಾನಂದ, ಹೊಸದಿಗಂತದ ಪ್ರಕಾಶ್ ಇಳಂತಿಲ, ಕನ್ನಡಪ್ರಭದ ರಾಘವೇಂದ್ರ ಅಗ್ನಿಹೋತ್ರಿ, ಉದಯವಾಣಿಯ ಸುರೇಶ್ ಪುದುವೆಟ್ಟು, ವಾರ್ತಾಭಾರತಿಯ ಪುಷ್ಪರಾಜ್ ಬಿ.ಎನ್., ವಿಶ್ವವಾಣಿಯ ಜಿತೇಂದ್ರ ಕುಂದೇಶ್ವರ, ಡೆಕ್ಕನ್ ಹೆರಾಲ್ಡ್‌ನ ಹರ್ಷ, ನಮ್ಮಕುಡ್ಲದ ಲೀಲಾಕ್ಷ ಕರ್ಕೇರ ಮುಂತಾದವರು ಸಂವಾದದಲ್ಲಿ ಭಾಗವಹಿಸಿದರು. ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Leave A Reply

Your email address will not be published.