ವಿಧಿಯ ಕ್ರೂರ ಆಟಕ್ಕೆ ಬಲಿಯಾದಳು ಈ ಪುಟ್ಟ ಕಂದಮ್ಮ | ಕುಟುಂಬದ ಏಳು ಸದಸ್ಯರನ್ನು ಕಳೆದುಕೊಂಡ ದುಃಖದ ನಡುವೆಯೇ ಮಗಳ ಅಂಗಾಂಗ ದಾನಮಾಡಿ ಒಂಬತ್ತು ಜನರಿಗೆ ಬದುಕುಕೊಟ್ಟ ಬಾಲಕಿಯ ತಂದೆ !!

ಕೆಲವೊಬ್ಬರ ಜೀವನದಲ್ಲಿ ವಿಧಿ ಎಂತಹ ಕ್ರೂರಿ. ಏನೂ ಅರಿಯದ ಈ ಪುಟ್ಟ ಕಂದನ ಜೀವನದಲ್ಲಿ ವಿಧಿ ಬಹುದೊಡ್ಡ ಆಟವಾಡಿದೆ. ಆದರೂ ಅಪಘಾತದಲ್ಲಿ ಮೃತಪಟ್ಟ ಈ ಎರಡೂವರೆ ವರ್ಷದ ಬಾಲಕಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ.

ಇವಳ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ. ಈ ಸಾವು ನ್ಯಾಯವೇ ಎಂದು ವಿಧಿಯನ್ನೊಮ್ಮೆ ಮನದಲ್ಲೇ ಶಪಿಸಿಬಿಡ್ತೀವಿ. ಅಷ್ಟೇ ಅಲ್ಲ, ಪತ್ನಿ, ಮಗ, ಮಗಳು ಸೇರಿ ಕುಟುಂಬದ 7 ಸದಸ್ಯರನ್ನು ಕಳೆದುಕೊಂಡು ನೋವಿನಲ್ಲಿದ್ದರೂ ಮಗಳ ಅಂಗಾಗದಾನ ಮಾಡಿ 9 ಜನರಿಗೆ ಬದುಕು ಕೊಟ್ಟ ಬಾಲಕಿಯ ತಂದೆಗೂ ನಮಿಸದೆ ಇರಲಾರೆವು.

ಸಾವಿನಲ್ಲೂ ಸಾರ್ಥಕತೆ ಮೆರೆದ ಬಾಲೆ ಹೆಸರು ಅನಿಕಾ. ಬೆಂಗಳೂರು ಮೂಲದ ಉದ್ಯಮಿ ಅಮಿತ್ ಗುಪ್ತಾ ಮತ್ತು ಕೀರ್ತಿ ಗುಪ್ತಾ ದಂಪತಿಯ ಪುತ್ರಿ. ಈ ದಂಪತಿಗೆ 6 ವರ್ಷ ಮಗ ಕೂಡ ಇದ್ದ. ಡಿ.12ರಂದು ಚಂಡಿಗಢದ ಮೊಹಾಲಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕೀರ್ತಿ ಗುಪ್ತಾ ಮತ್ತು ಇವರ ಮಗ ನುವಂಶ್ ಸೇರಿ ಕುಟುಂಬದ 6 ಮಂದಿ ದುರಂತ ಅಂತ್ಯ ಕಂಡಿದ್ದರು. ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕಿ ಅನಿಕಾಳನ್ನು ಚಂಡೀಗಢ ಪಿಜಿಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪತ್ನಿ-ಮಗ ಸೇರಿ ಕುಟುಂಬ 6 ಮಂದಿಯನ್ನು ಕಳೆದುಕೊಂಡು ಕಂಗಾಲಾಗಿದ್ದ ಅಮಿತ್, ಮಗಳನ್ನು ಉಳಿಸಿಕೊಡುವಂತೆ ವೈದ್ಯರು ಮತ್ತು ದೇವರಿಗೆ ಪರಿಪರಿಯಾಗಿ ಬೇಡಿಕೊಂಡರು. ವೈದ್ಯರು ಎಷ್ಟೇ ಪ್ರಯತ್ನಿಸಿದರೂ ವಿಧಿಯಾಟ ಬೇರೆಯೇ ಇತ್ತು.

ಡಿ.22ರಂದು ಬಾಲಕಿ ಅನಿಕಾಳ ಮಿದುಳು ನಿಷ್ಕ್ರಿಯಗೊಂಡಿತ್ತು. ಇನ್ನು ಅನಿಕಾ ಬದುಕುವ ಚಾನ್ಸ್ ಇಲ್ಲ ಎಂದು ಗೊತ್ತಾಗುತ್ತಿದ್ದಂತೆ ತಂದೆ ಅಮಿತ್‌ರ ಆಕ್ರಂದನ ಮುಗಿಲು ಮುಟ್ಟಿತ್ತು. ನೋವಿನಲ್ಲೂ ಮಹತ್ವದ ನಿರ್ಧಾರ ತೆಗೆದುಕೊಂಡ ಅಮಿತ್, ಮಗಳ ಅಂಗಾಂಗ ದಾನಕ್ಕೆ ನಿರ್ಧರಿಸಿದ್ದರು. ಕಿಡ್ನಿ, ಲಿವರ್, ಕಾರ್ನಿಯಾವನ್ನು ದಾನ ಮಾಡಿದ್ದಾರೆ. ಅನಿಕಾಳ ಅಂಗಾಂಗಗಳನ್ನು 9 ಜನರಿಗೆ ಅಳವಡಿಸಲಾಗಿದ್ದು, ಆ ಮೂಲಕ 9 ಜನರಿಗೆ ಬದುಕು ಸಿಕ್ಕಂತಾಗಿದೆ.

ಇಡೀ ಕುಟುಂಬವೇ ಹೋಯ್ತು. ಮಗಳಾದರೂ ಬದುಕುತ್ತಾಳೆ ಎಂದು ಕಾದೆ. ಆಕೆಯೂ ಬದುಕಲಿಲ್ಲ. ಅವಳ ಅಂಗಾಂಗ ದಾನದ ಮೂಲಕ ನನ್ನ ಮಗಳು ಜೀವಂತವಾಗಿದ್ದಾಳೆ ಎಂದೇ ಭಾವಿಸಿರುವೆ ಎನ್ನುತ್ತಲೇ ಅಮಿತ್ ಗುಪ್ತಾ ಕಣ್ಣೀರಿಟ್ಟ ದೃಶ್ಯ ಮತ್ತು ಅಂಗಾಂಗ ದಾನ ಪ್ರಕ್ರಿಯೆ ಮುಗಿದ ಬಳಿಕ ಆಸ್ಪತ್ರೆಯ ವೈದ್ಯ ತಂಡ ಅನಿಕ ಮೃತದೇಹಕ್ಕೆ ನಮಿಸಿ ಹೂಗುಚ್ಛ ಇಟ್ಟು ಶ್ರದ್ಧಾಂಜಲಿ ಸಲ್ಲಿಸಿದ ದೃಶ್ಯ ಮನಕಲಕುವಂತಿತ್ತು.

ಪ್ರೀತಿಯ ಪತ್ನಿ-ಮಕ್ಕಳನ್ನು ಕಳೆದುಕೊಂಡ ಅಮಿತ್‌ ಬಾಳಲ್ಲಿ ನೋವಿನ ಕಟ್ಟೆಯೇ ತುಂಬಿದೆ. ಇಂತಹ ಸಂಕಷ್ಟ ಸಮಯದಲ್ಲೂ ಮಗಳ ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮೆರೆದ ಅಮಿತ್‌ರ ವ್ಯಕ್ತಿತ್ವ ಎಲ್ಲರಿಗೂ ಮಾದರಿ.

Leave A Reply

Your email address will not be published.