ನಕಲಿ ಆಭರಣ ಮಾರಾಟ ಮಾಡುತ್ತಿದ್ದ ಇಬ್ಬರು ಮಹಿಳೆಯರ ಬಂಧನ

ಬಾಗಲಕೋಟೆ: ಚಿನ್ನದ ವ್ಯಾಪಾರಿಗೆ ನಕಲಿ ಆಭರಣಗಳನ್ನು ಮಾರಾಟ ಮಾಡಿ ಹಣ, ಆಭರಣ ಪಡೆದು ವಂಚಿಸುತ್ತಿದ್ದ,ಬೆಂಗಳೂರು ಮೂಲದ ಇಬ್ಬರು ಮಹಿಳೆಯರನ್ನು ಬಂಧಿಸಿರುವ ಘಟನೆ ಜಿಲ್ಲೆಯ ಇಲಕಲ್ಲ ಪಟ್ಟಣದಲ್ಲಿ ನಡೆದಿದೆ.

ಬೆಂಗಳೂರಿನ ಕನಕ ನಗರ ನಿವಾಸಿ ರೆಹಾನಾ ಬೇಗಂ ಸೈಯದ್ ಅಪ್ಸರ್ ಹಾಗೂ ವಿಮಾನಪುರ ನಿವಾಸಿ ಮೆಹರಾಜನ್ ಸೈಯದ್ ಅಪ್ಸರ್ ಬಂಧಿತ ಆರೋಪಿಗಳು.

ಇಲಕಲ್ಲ ಪಟ್ಟಣದ ಚಿನ್ನದ ವ್ಯಾಪಾರಿಗೆ ನಕಲಿ ಚಿನ್ನದ ಆಭರಣ ಕೊಟ್ಟು 1,86, 000 ಮೌಲ್ಯದ ಆಭರಣ ಹಾಗೂ 13 ಸಾವಿರ ಹಣ ಪಡೆದಿದ್ದರು ಎನ್ನಲಾಗಿದೆ. ನಕಲಿ ಚಿನ್ನ ಎಂಬುದು ಅರಿವಿಗೆ ಬಾರದೆ ಅಸಲಿ ಎಂದು ನಂಬಿದ್ದ ವ್ಯಾಪಾರಿ ಮೋಸ ಹೋಗಿದ್ದು, ಅರಿವಿಗೆ ಬಂದ ನಂತರ ದೂರು ದಾಖಲಿಸಿದ್ದರು.

ಈ ಬಗ್ಗೆ ನಗರದ ಇಲಕಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚಿಸಿದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ.ಆರೋಪಿಗಳು ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಇನ್ನಷ್ಟು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.