ನ್ಯಾಯ ದೇಗುಲದಲ್ಲಿ ನಡೆಯಿತೊಂದು ವಿಶೇಷ ಘಟನೆ | ಮೊದಲ ಬಾರಿಗೆ ಹಲವು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಗೊಳಿಸಿದ ನ್ಯಾಯಾಲಯ !!|ಪರಸ್ಪರ ಒಂದಾದ ಪತಿ-ಪತ್ನಿ, ಅತ್ತಿಗೆ -ನಾದಿನಿಯರು

ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚೇ ಇರುತ್ತದೆ.ಪತಿ-ಪತ್ನಿ, ಅಣ್ಣ -ತಮ್ಮ, ಹೀಗೆ ಅನೇಕ ಜಗಳಗಳು ನಡೆಯುತ್ತಲೇ ಇರುತ್ತದೆ. ಕೆಲವೊಂದು ಪ್ರಕರಣ ಅಂತ್ಯ ಕಂಡಿರುವುದೇ ಇಲ್ಲ. ಹೀಗೆ ಪ್ರತ್ಯೇಕ ಎರಡು ಪ್ರಕರಣಗಳ ಪೈಕಿ ನಾನೊಂದು ತೀರಾ, ನೀನೊಂದು ತೀರಾ ಎಂದು ಪರಸ್ಪರ ದೂರವಿದ್ದ ಪತಿ ಪತ್ನಿ, ಪರಿಹಾರ ಹಣದ ವಿಚಾರವಾಗಿ ವೈಮನಸ್ಸು ಉಂಟಾಗಿದ್ದ ಅತ್ತಿಗೆ-ನಾದಿನಿಯರನ್ನು ಒಗ್ಗೂಡಿಸಿ ಸುಖಾಂತ್ಯ ಕಾಣಿಸುವಲ್ಲಿ ನ್ಯಾಯಾಧೀಶರು ಸಫಲರಾದರು.

ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶನಿವಾರ ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಆಯೋಜಿಸಿದ್ದ ಮೆಗಾಲೋಕ ಅದಾಲತ್‌ನಲ್ಲಿ ಹಲವು ಪ್ರಕರಣಗಳು ರಾಜಿ-ಸಂಧಾನದ ಮೂಲಕ ಇತ್ಯರ್ಥವಾಗಿದ್ದು,ನ್ಯಾಯಾಲಯದ ಮೆಟ್ಟಿಲೇರಿದ್ದ
ಅನೇಕರು ಪರಸ್ಪರ ರಾಜಿಯಾಗಲು ಸಹಿ ಹಾಕಿದರು.

ಘಟನೆ ಹಿನ್ನೆಲೆ:

ಚಿತ್ರದುರ್ಗ ಜಿಲ್ಲೆಯ ಕೊಂಡ್ಲಹಳ್ಳಿ ಗ್ರಾಮದ ನಿವಾಸಿ, ಸರ್ಕಾರಿ ಶಾಲಾ ಶಿಕ್ಷಕ ಗಂಗಾಧರ್ ಅದೇ ಗ್ರಾಮದ ಶಿವಲಕ್ಷ್ಮಿ ಎಂಬುವರನ್ನು 2013 ಆಗಸ್ಟ್ 28ರಂದು ಹಿರಿಯರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಆದರೆ, ಚಿಕ್ಕಪುಟ್ಟ ಕೌಟುಂಬಿಕ ಜಗಳ ಇಬ್ಬರ ಸಂಸಾರದಲ್ಲಿ ಬಿರುಕು ಮೂಡಿಸಿ ದೂರವಾಗುವಂತೆ ಮಾಡಿತು.ವರ್ಗಾವಣೆ ನಂತರ ಪತ್ನಿಯನ್ನು ಹಾಸನಕ್ಕೆ ಕರೆದುಕೊಂಡು ಹೋಗಿದ್ದ ಗಂಗಾಧರ್ ಸಂಸಾರ ನಡೆಸಿದ್ದರು. ಈ ಮಧ್ಯೆ ಶಿವಲಕ್ಷ್ಮಿ ತಂದೆ ನಿಧನರಾದರು. ತಾಯಿ ನಾಗರತ್ನಮ್ಮ ಒಬ್ಬರೇ ಹೇಗಿರುತ್ತಾರೆ ಎಂದು ಹಾಸನದಿಂದ ಕೊಂಡ್ಲಹಳ್ಳಿಗೆ ಹಿಂದಿರುಗಿ ತಾಯಿಯ ಜೊತೆ ವಾಸಿಸಲು ಮುಂದಾದರು.

ಪತ್ನಿಯ ಸಂಬಂಧಿಕರು ಸಂಸಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬುದು ಗಂಗಾಧರ್ ಆರೋಪ. ಹೀಗೆ ಚಿಕ್ಕಪುಟ್ಟ ವಿಷಯಗಳಲ್ಲಿ ಉಂಟಾದ ಮನಸ್ತಾಪ ಜಗಳದ ಸ್ವರೂಪ ಪಡೆದುಕೊಂಡಿತು.ಇದರಿಂದ ಬೇಸರಗೊಂಡ ಶಿವಲಕ್ಷ್ಮಿ ಪತಿ ಮನೆಗೆ ಹೋಗಲು
ನಿರಾಕರಿಸಿದರು.ಪತಿಯಿಂದ ದೂರವಾದ ಕಾರಣ ಜೀವನ ನಿರ್ವಹಣೆಗೆ ಪರಿಹಾರ ಕೊಡಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು.

ವಿಚಾರಣೆ ನಂತರ ಪತ್ನಿಗೆ ಮಾಸಿಕ 1 6ಸಾವಿರ ನೀಡುವಂತೆ ಗಂಗಾಧರ್ ಅವರಿಗೆ ಆದೇಶ ಮಾಡಿತ್ತು. ಇದಾದ ನಂತರ ಗಂಗಾಧರ್ ಕೂಡ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಹೀಗೆ ಕೆಲ ವರ್ಷಗಳಿಂದ ವಿಚಾರಣೆ ಹಂತದಲ್ಲಿದ್ದ ಪ್ರಕರಣಕ್ಕೆ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರು ಜೊತೆಯಾಗಿ ಸಂಸಾರ ನಡೆಸುವಂತೆ ಮನವೊಲಿಸಿದ್ದು,ನ್ಯಾಯಾಧೀಶರ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿದೆ. ಪತಿ-ಪತ್ನಿ ಪರಸ್ಪರ ಒಮ್ಮತದಿಂದ ಜೀವನ ಸಾಗಿಸುವುದಾಗಿ ನ್ಯಾಯಾಲಯದ ಮುಂದೆ ಒಪ್ಪಿಗೆ ನೀಡಿದ್ದಾರೆ. ಪರಸ್ಪರ ಹಾರ ಬದಲಾಯಿಸಿದ ಜೋಡಿ ನೆರೆದಿದ್ದವರಿಗೆ ಸಿಹಿಹಂಚಿ ಖುಷಿಪಟ್ಟರು.

ಅಪಘಾತ:

ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆ ಮುಂಭಾಗ 2021ರ ಮೇ 20ರಂದು ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಾಲ್ಲೂಕಿನ ಸೊಲ್ಲಾಪುರ ಸಿದ್ದೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ಇದರಿಂದ ಕುಟುಂಬ ಕಷ್ಟಕ್ಕೆ ಸಿಲುಕಿತ್ತು. ಈ ಪ್ರಕರಣದಲ್ಲಿ ನೊಂದಿದ್ದ ಸಿದ್ದೇಶ್ ಪತ್ನಿಗೆ 17.5 ಲಕ್ಷ ಪರಿಹಾರ ಅದಾಲತ್ ಮೂಲಕ ದೊರೆಯಿತು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಪ್ರೇಮಾವತಿ ಮನಗೊಳಿ, ನ್ಯಾಯಾಧೀಶರಾದ ಸಿ.ಎಸ್. ಜಿತೇಂದ್ರನಾಥ್,ದೇವರಾಜ್, ಬಿ.ಕೆ. ಗಿರೀಶ್, ಬನ್ನಿಕಟ್ಟಿ ಹನುಮಂತಪ್ಪ,ಎಸ್.ಎನ್. ಕಲ್ಕಣಿ, ಪ್ಯಾನಲ್ ವಕೀಲ ವಿಜಯಕುಮಾರ್ ಇದ್ದರು.

ಒಮ್ಮತ ಮೂಡಿದ ಪ್ರಕರಣ:

ಕೆಲ ವರ್ಷಗಳಿಂದ ನ್ಯಾಯಾಲಯದಲ್ಲಿ ಇತ್ಯರ್ಥವಾಗದೆ
ಅಲೆದಾಡುತ್ತಿದ್ದ ಅತ್ತಿಗೆ-ನಾದಿನಿಯರ ಪ್ರಕರಣ ಕೂಡ ರಾಜಿ ಮೂಲಕ ಅದಾಲತ್‌ನಲ್ಲಿ ಅಂತ್ಯಗೊಂಡಿತು.ಹೊಸದುರ್ಗ ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ್ ಅವರಿಗೆ ಅನುಕಂಪದ ಆಧಾರದ ಮೇಲೆ ತಂದೆ ನಿಧನದ ನಂತರ ಕೆಲಸ ದೊರೆಯಿತು. ನಂತರ ತಾಯಿಯೂ
ನಿಧನರಾದರು. ಮದುವೆಯಾದ ನಾಲ್ಕು ತಿಂಗಳಲ್ಲೇ
ಮಂಜುನಾಥ್ ಕೂಡ ಮೃತಪಟ್ಟರು.

ಹೀಗೆ ಪಿಂಚಣಿ, ಉದ್ಯೋಗ, ಮೃತರ ಪರಿಹಾರ ನನಗೆ ಸಿಗಬೇಕು ಎಂದು ಪತ್ನಿ ಮಂಜುಳಾ ಹಾಗೂ ಮಂಜುನಾಥ್ ಅವರ ನಾಲ್ವರು ಸಹೋದರಿಯರಾದ ಪದ್ಮನಿ, ರಾಜೇಶ್ವರಿ, ಮಂಜುವಾಣಿ,ದೇವಿಕಾ ಅವಿವಾಹಿತರು. ಜೀವನ ನಿರ್ವಹಣೆಗಾಗಿ
ಪರಿಹಾರವಾದರೂ ಸಿಗಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ಇದಕ್ಕಾಗಿ ಮೂರು ವರ್ಷ ಅಲೆದಾಡಿದರೂ ಬಗೆಹರಿದಿರಲಿಲ್ಲ.

ಕೊನೆಗೆ ಪಿಂಚಣಿ-ಉದ್ಯೋಗ ಪತ್ನಿಗೆ, ಪರಿಹಾರ
ಸಹೋದರಿಯರಿಗೆ ಎಂಬ ನ್ಯಾಯಾಧೀಶರ ಮನವೊಲಿಕೆಗೆ ಎಲ್ಲರಲ್ಲೂ ಒಮ್ಮತ ಮೂಡಿ ರಾಜಿ ಮಾಡಿಕೊಂಡರು.

Leave A Reply

Your email address will not be published.