ಬೆಳಗಾವಿ : ಗುರುವಾರ ವಿಧಾನಸಭೆಯಲ್ಲಿ ಆಡಿದ ಮಾತು ವಿವಾದ ಸೃಷ್ಟಿಸಿ, ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಶುಕ್ರವಾರ ಸದನದಲ್ಲಿ ಕ್ಷಮೆ ಯಾಚಿಸಿದ್ದಾರೆ.
”ಲಘುವಾಗಿ ವರ್ತಿಸಬೇಕೆಂಬ ಉದ್ದೇಶ ನನಗಿರಲಿಲ್ಲ.ಮಹಿಳೆಯರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದರೆ ಕ್ಷಮೆ ಕೇಳಲು ನನಗೆ ಯಾವುದೇ ತೊಂದರೆ ಇಲ್ಲ. ನನ್ನ ಹೃದಯಾಳದಿಂದ ನಾನು ಕ್ಷಮೆಯಾಚಿಸುತ್ತೇನೆ” ಎಂದು ಕಲಾಪ ಆರಂಭಕ್ಕೂ ಮುನ್ನ ರಮೇಶ್ ಕುಮಾರ್ ಕ್ಷಮೆ ಯಾಚಿಸಿದ್ದಾರೆ.
”ಇದನ್ನು ಬೆಳೆಸುವುದು ಬೇಡ ಇಲ್ಲಿಗೆ ಮುಗಿಸಿ” ಎಂದು ಸ್ಪೀಕರ್ ವಿಶೇಶ್ವರ ಹೆಗಡೆ ಕಾಗೇರಿ ಅವರು ಸದನದಲ್ಲಿ ಮನವಿ ಮಾಡಿದರು.
ಮಳೆಯಿಂದ ಬೆಳೆ ನಷ್ಟ, ಪ್ರವಾಹದಿಂದ ಸಮಸ್ಯೆ ಕುರಿತ ಚರ್ಚೆ ಸಂದರ್ಭದಲ್ಲಿ ಸದಸ್ಯರು ತಾವು ಮಾತಾಡಬೇಕು ಎಂದು ಒತ್ತಾಯಿಸಿದಾಗ ಸ್ಪೀಕರ್ ವಿಶೇಶ್ವರ ಹೆಗಡೆ ಕಾಗೇರಿ, “ಹೀಗೆ ಎಲ್ಲರೂ ಬೇಡಿಕೆ ಇಟ್ಟರೆನನಗೆ ಸದನ ನಡೆಸುವುದು ಕಷ್ಟವಾಗುತ್ತದೆ’ಎಂದರು. ಆಗ ಮಧ್ಯಪ್ರವೇಶ ಮಾಡಿದ ರಮೇಶ್ಕುಮಾರ್ ಮಾತಿನ ಭರದಲ್ಲಿ,”ವೆನ್ರೇಪ್ ಈಸ್ ಇನ್ವಿಟೇಬಲ್ ಲೇ ಬ್ಯಾಕ್ ಅಂಡ್ ಎಂಜಾಯ್’ (ಅತ್ಯಾಚಾರ ಅನಿವಾರ್ಯ ಆದಾಗ ಮಲಗಿ ಆನಂದಿಸಿ) ಎಂದು ಹೇಳಿದರು. ಸ್ಪೀಕರ್ ಕಾಗೇರಿ ಅವರು, “ಈಗ ಪರಿಸ್ಥಿತಿ ಎಂಜಾಯ್ ಮಾಡಬೇಕು ಅನ್ನುವ ಹಾಗಾಗಿದೆ ನನ್ನ ಸ್ಥಿತಿ’ ಎಂದು ಹೇಳಿದರು. ಆದರೆ, ರಮೇಶ್ ಕುಮಾರ್ ಮಾತು ವಿವಾದಕ್ಕೆ ಗುರಿಯಾಗಿ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿ ಮಹಿಳಾ ಸಂಘಟನೆಗಳಿಂದ ಅಕ್ರೋಶ ವ್ಯಕ್ತವಾಗಿತ್ತು.