ಪುಣ್ಚಪ್ಪಾಡಿ : ಆಕಸ್ಮಿಕವಾಗಿ ಕೆರೆಗೆ ಬಿದ್ದು ವ್ಯಕ್ತಿ ಸಾವು

ಸವಣೂರು : ಕಡಬ ಠಾಣಾ ಹೆಡ್ ಕಾನ್‌ಸ್ಟೇಬಲ್ ಹರೀಶ್ ಅವರ ತಂದೆ ಬಾಬು ಗೌಡ (72) ಅವರು ಶುಕ್ರವಾರ ಹುಲ್ಲು ತರಲೆಂದು ತೋಟಕ್ಕೆ ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.

ಕಡಬ ತಾಲೂಕಿನ ಪುಣ್ಚಪ್ಪಾಡಿ ಗ್ರಾಮದ ತೋಟದಡ್ಕ ನಿವಾಸಿಯಾಗಿರುವ ಬಾಬು ಗೌಡರು ಕೃಷಿಕರಾಗಿದ್ದು ಎಂದಿನಂತೆ ಶುಕ್ರವಾರ ಬೆಳಿಗ್ಗೆ ತೋಟಕ್ಕೆ ಹುಲ್ಲು ತರಲೆಂದು ಹೋಗಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ತೋಟದ ಮಧ್ಯೆ ಇರುವ ಕೆರೆಗೆ ಬಿದ್ದಿದ್ದಾರೆ.

ಪೋಲೀಸ್ ಹರೀಶ್ ಅವರು ಬೆಳಿಗ್ಗೆ ಕರ್ತವ್ಯಕ್ಕೆ ಕಡಬ ಠಾಣೆಗೆ ಆಗಮಿಸಿದ ಬಳಿಕ ಈ ಘಟನೆ ನಡೆದಿದ್ದು, ಮನೆಯವರು ನೋಡುವಷ್ಟರಲ್ಲಿ ಬಾಬು ಗೌಡರು ಕೆರೆಯಲ್ಲಿ ಮುಳುಗಿ ಹೋಗಿದ್ದರು. ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.

ಸ್ಥಳಕ್ಕೆ ಬೆಳ್ಳಾರೆ ಠಾಣಾ ಸಬ್‌ಇನ್‌ಸ್ಪೆಕ್ಟರ್ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹರೀಶ್ ನೀಡಿದ ದೂರಿನಂತೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.