ಪ್ರಿಯತಮೆಗೆ ಗಿಫ್ಟ್ ನೀಡಲು ಚಿನ್ನದಂಗಡಿಯಿಂದ ಉಂಗುರ ಕದ್ದ ಪಾಗಲ್ ಪ್ರೇಮಿ | ಈ ಕಳ್ಳ ಪ್ರೇಮಿ ಎಂಬಿಬಿಎಸ್ ವಿದ್ಯಾರ್ಥಿಯಂತೆ !!

ಪ್ರೇಯಸಿಗೋಸ್ಕರ ಹುಡುಗರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಅದರಲ್ಲೂ ಗಿಫ್ಟ್ ಕೊಡುವುದೆಂದರೆ ಸಾಕು ಎಷ್ಟು ಖರ್ಚು ಬೇಕಾದರೂ ಮಾಡುತ್ತಾರಂತೆ. ಆದರೆ ಇಲ್ಲೊಬ್ಬ ಪಾಗಲ್ ಪ್ರೇಮಿ ಪ್ರಿಯತಮೆಗೆ ಗಿಫ್ಟ್ ನೀಡಲು ಚಿನ್ನದ ಅಂಗಡಿಯಲ್ಲಿ ಕನ್ನ ಹಾಕಿ ಸಿಕ್ಕಿಬಿದ್ದಿದ್ದಾನೆ.

ಈ ಘಟನೆ ಪುಣೆಯಲ್ಲಿ ನಡೆದಿದೆ. ಎರಡು ಚಿನ್ನದಂಗಡಿಯಲ್ಲಿ ಚಿನ್ನದ ಉಂಗುರು ಕಳ್ಳತನ ಮಾಡಿದ ಈತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪ್ರತಿಷ್ಠಿತ ಕಾಲೇಜಿನಲ್ಲಿ ಎಂಬಿಬಿಎಸ್ 3ನೇ ವರ್ಷ ವ್ಯಾಸಂಗ ಮಾಡುತ್ತಿರುವ ಹನುಮಂತ ರೋಖಡೆ ಇಂಥದ್ದೊಂದು ಕೃತ್ಯಕ್ಕೆ ಇಳಿದವ.

ತನ್ನ ಗೆಳೆಯ ವೈಭವ್ ಸಂಜಯ್ ಜೊತೆಗೆ ಈತ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಪ್ರೇಮದಲ್ಲಿ ಸಿಲುಕಿದ ಹನುಮಂತ ಗೆಳತಿಯನ್ನು ಓಲೈಸಿಕೊಳ್ಳಲು ದುಬಾರಿ ಗಿಫ್ಟ್ ಕೊಡಲು ಮುಂದಾಗಿದ್ದ. ಆದರೆ ಚಿನ್ನದ ರೇಟ್ ಗೊತ್ತಲ್ಲ! ಅಷ್ಟು ಹಣ ಈತನ ಬಳಿ ಇರಲಿಲ್ಲ. ಅದಕ್ಕಾಗಿ ಕದಿಯುವ ಪ್ಲಾನ್ ಮಾಡಿದ್ದಾನೆ. ಈ ಬಗ್ಗೆ ತನ್ನ ಸ್ನೇಹಿತ ವೈಭವ್ ಜೊತೆ ಚರ್ಚೆ ಮಾಡಿದ್ದು, ಅದಕ್ಕೆ ಅವನೂ ಒಪ್ಪಿಕೊಂಡಿದ್ದಾನೆ.

ಯೋಜನೆಯಂತೆ ಇಬ್ಬರೂ ಚಿನ್ನದ ಅಂಗಡಿಗೆ ಬಂದು ಉಂಗುರ ತೋರಿಸಲು ಹೇಳಿದ್ದಾರೆ. ಉಂಗುರಗಳನ್ನು ಅಂಗಡಿಯಾತ ಮುಂದಿಟ್ಟಿದ್ದಾನೆ. ಅವುಗಳನ್ನು ಹಾಕಿ ನೋಡುವಂತೆ ಮಾಡುತ್ತಿರುವಾಗ ಮೊದಲೇ ಮಾಡಿಕೊಂಡಿರುವ ಪ್ಲಾನ್ ನಂತೆ ಹೊರಗಡೆಯಿಂದ ಅವನ ಸ್ನೇಹಿತ ಬೈಕ್‌ನಲ್ಲಿ ಬಂದು ಕರೆದಿದ್ದಾನೆ. ಹಾಕಿಕೊಂಡಿದ್ದ ಉಂಗುರದ ಜೊತೆ ಪರಾರಿಯಾಗಿದ್ದಾನೆ ಹನುಮಂತ.

ಈ ಬಗ್ಗೆ ಚಿನ್ನದ ಅಂಗಡಿ ಮಾಲೀಕ ಪೊಲೀಸರಿಗೆ ದೂರು ನೀಡಿದ್ದರು. ಅದಾಗಲೇ ಸಿಸಿಟಿವಿಯಲ್ಲಿ ಆತನ ಬಯಲಾಟ ಎಲ್ಲವೂ ಸೆರೆಯಾಗಿತ್ತು. ನಂತರ ಅದನ್ನು ಆಧರಿಸಿ ತನಿಖೆ ಕೈಗೊಂಡಾಗ ಇಬ್ಬರೂ ಸಿಕ್ಕಿಬಿದ್ದಿದ್ದಾರೆ. ಎರಡೂವರೆ ಲಕ್ಷ ಮೌಲ್ಯದ ಚಿನ್ನದ ಉಂಗುರ ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ತನ್ನ ಸ್ನೇಹಿತೆಯ ವಿಷಯವನ್ನು ಬಾಯಿಬಿಟ್ಟಿದ್ದಾನಂತೆ ಈ ಹನುಮಂತ.

Leave A Reply

Your email address will not be published.