ನೀರುಮಾರ್ಗ : ರಿಯಾಝ್ ವೇಶ್ಯಾವಾಟಿಕೆ ದಂಧೆಕೋರ,ಇದೇ ಕಾರಣಕ್ಕಾಗಿ ಆತನ ಮೇಲೆ ಹಲ್ಲೆ ,ಆರೋಪಿಗಳ ಬಂಧನ | ರಿಯಾಝ್ ವಿರುದ್ದ ಅನೈತಿಕ ಮಾನವ ಸಾಗಾಣಿಕೆ ಪ್ರಕರಣ ದಾಖಲು

ಮಂಗಳೂರು, ಡಿ.14: ನೀರುಮಾರ್ಗ ಸಮೀಪದ ಪಡು ಅಂಚೆ ಕಚೇರಿ ಬಳಿ ಕಾರನ್ನು ಅಡ್ಡಗಟ್ಟಿ ರಿಯಾಝ್ ಅಹ್ಮದ್ ಎಂಬ ವ್ಯಕ್ತಿಯ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳು ರಿಯಾಝ್‌ಗೆ ಪರಿಚಯಸ್ಥರೇ ಆಗಿದ್ದು, ಈ ಹಿಂದೆಯೂ ಅವರ ನಡುವೆ ವಾಗ್ವಾದ, ಬೈದಾಟ, ಜಗಳ ಆಗಿದೆ. ಡಿ.10ರಂದು ರಿಯಾಝ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ರಿಯಾಝ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದು,ಇದಕ್ಕೆ ಪೂರಕವಾಗಿ ಹಲವು ವಿಡಿಯೋ,ಆಡಿಯೋ,ಮಹಿಳೆಯರೊಂದಿಗಿನ ಅರೆಬೆತ್ತಲೆ ಫೊಟೊಗಳು ದೊರಕಿದೆ.ಇದೇ ಕಾರಣಕ್ಕಾಗಿ ಆತನ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.

ರಿಯಾಝ್ ಬಗ್ಗೆ ಈ ಹಿಂದೆಯೂ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲೇ ಐದು ಠಾಣೆಗಳಲ್ಲಿ ವಿವಿಧ ಕಲಂಗಳಡಿ ಪ್ರಕರಣಗಳು ದಾಖಲಾಗಿವೆ. ಈತ ನಡೆಸುತ್ತಿದ್ದ ವೇಶ್ಯಾವಾಟಿಕೆಯಂತಹ ಅಕ್ರಮ ಚಟುವಟಿಕೆಗಳ ಹಿನ್ನೆಲೆಯಲ್ಲಿ ಈ ಹಿಂದೆಯೂ ಸ್ಥಳೀಯ ಯುವಕರಿಗೂ ಈತನ ನಡುವೆ ಸಂಘರ್ಷಗಳಾಗಿವೆ. ಅದೇ ಹಿನ್ನೆಲೆಯಲ್ಲಿ ಈ ಘಟನೆಯೂ ನಡೆದಿದೆ. ಈ ಘಟನೆ ನಡೆದ ಬಳಿಕ ರಿಯಾಝ್ ಅಹ್ಮದ್ ಮೇಲೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಅನೈತಿಕ ಮಾನವ ಸಾಗಾಟದ ಬಗ್ಗೆ ದೂರು ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಕೆಲವು ಆರೋಪಿಗಳನ್ನು ಪೊಲೀಸ್ ತಂಡ ಶೀಘ್ರವೇ ಪತ್ತೆ ಹಚ್ಚಲಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

Leave A Reply

Your email address will not be published.