ಮತ್ತೆ ತೆರೆಯ ಮೇಲೆ ರಾರಾಜಿಸಲಿರುವ ಅಪ್ಪು| ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕನಸು ಇಂದು ನನಸು | ‘ಗಂಧದ ಗುಡಿ’ ಯ ಟೀಸರ್ ಬಿಡುಗಡೆ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಹಲೋಕ ತ್ಯಜಿಸಿದರೂ ಅವರ ನೆನಪು ಮಾತ್ರ ಅಮರ. ಅವರ ಒಂದೊಂದು ಸಿನಿಮಾಗಳ ನೀತಿ ಮಾತುಗಳು ಬದುಕಿನುದ್ದಕ್ಕೂ ಶಾಶ್ವತ. ಇದೀಗ ಅವರ ಕನಸಿನ ಪ್ರಾಜೆಕ್ಟ್ ಆಗಿರುವ ‘ಗಂಧದಗುಡಿ’ ಟೀಸರ್ ಬಿಡುಗಡೆಯಾಗಿದ್ದು,ಈ ಮೂಲಕ ಅವರ ಆತ್ಮ ಶಾಂತಿ ಕಾಣಲಿ ಎಂಬುದೇ ಆಶಯ!

ಅಪ್ಪು ಕರುನಾಡಿನ ಬಗ್ಗೆ ಡಾಕ್ಯುಮೆಂಟರಿ ಒಂದನ್ನು ಅಮೋಘವರ್ಷ ಅವರ ಜೊತೆಗೂಡಿ ಸಿದ್ಧಪಡಿಸಿದ್ದಾರೆ. ‘ಗಂಧದಗುಡಿ’ ಹೆಸರಿನ ಡಾಕ್ಯುಮೆಂಟರಿ ಕನ್ನಡ ರಾಜ್ಯೋತ್ಸವದ ದಿನ ನವೆಂಬರ್ 1 ರಂದು ಬಿಡುಗಡೆಯಾಗಬೇಕಿತ್ತು. ಅದು ಅಪ್ಪು ಕನಸು ಕೂಡ ಆಗಿತ್ತು. ಅದಕ್ಕಾಗಿ ಸಿದ್ಧತೆ ಕೂಡ ಮಾಡಿಕೊಂಡಿದ್ದರು. ಆದರೆ, ಅಕ್ಟೋಬರ್ 29 ರಂದು ಅಕಾಲಿಕವಾಗಿ ಅಪ್ಪು ಅಗಲಿದ್ದಾರೆ. ಅವರ ಕನಸನ್ನು ನನಸು ಮಾಡಲು ಅಶ್ವಿನಿ ಪುನೀತ್ ರಾಜಕುಮಾರ್ ಮುಂದಾಗಿದ್ದಾರೆ. ಅಂತೆಯೇ ಇಂದು ಟೀಸರ್ ಬಿಡುಗಡೆಯಾಗಿದೆ.

ಹಿಂದೆಂದೂ ಕಾಣದ ಸಿನಿಮಾ ಅನುಭವ ನಿಮ್ಮ ಮುಂದೆ ಪಿ.ಆರ್.ಕೆ. ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಒಂದೊಂದು ಹೆಜ್ಜೆಯು ಪುನೀತರಿಗೆ ನಮನ ಸಲ್ಲಿಸುವಂತಿದೆ.ಟೀಸರ್ ನಲ್ಲಿ ಡಾ. ರಾಜಕುಮಾರ್ ಅವರು ‘ಗಂಧದ ಗುಡಿ’ ಚಿತ್ರದಲ್ಲಿ ಹೇಳುವ ‘ನಿನ್ನ ಕೈಮುಗಿದು ಕೇಳ್ಕೋತಿನಿ ಗಂಧದಗುಡಿ ಉಳಿಸು’ ಎನ್ನುವ ಡೈಲಾಗ್ ಇದೆ. ರಾಜ್ಯದ ಅರಣ್ಯ, ಸಮುದ್ರ, ಜಲಪಾತ ಸೇರಿ ಅಪರೂಪದ ದೃಶ್ಯಗಳು ಕುತೂಹಲಕಾರಿಯಾಗಿ ಮೂಡಿಬಂದಿವೆ. 2022 ರಲ್ಲಿ ಅಪ್ಪು ಅವರನ್ನು ತೆರೆ ಮೇಲೆ ಕಣ್ತುಂಬಿಕೊಳ್ಳಬಹುದಾದ್ದ ಚಿತ್ರಣವಾಗಿದೆ.

Leave A Reply

Your email address will not be published.