ಕಡಬ : ಜಾತಿನಿಂದನೆಗೈದು ಹಲ್ಲೆ ಪ್ರಕರಣ ಐವರು ಆರೋಪಿಗಳ ಖುಲಾಸೆ

ಕಡಬ: ಆರು ವರ್ಷಗಳ ಹಿಂದೆ ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದಲ್ಲಿ ತಂಡವೊಂದಕ್ಕೆ ಜಾತಿನಿಂದನೆಗೈದು ಹಲ್ಲೆ ಮಾಡಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.

ಕುಟ್ರುಪ್ಪಾಡಿ ಗ್ರಾಮದ ಕದ್ದೋಟೆ ಬಳಿ ಉರುಂಬಿ ಎಂಬಲ್ಲಿ ಕುಮಾರಧಾರಾ ನದಿಯಲ್ಲಿ ನೂಜಿಬಾಳ್ತಿಲ ಗ್ರಾಮದ ಕುಬುಲಾಡಿ ನಿವಾಸಿ ಜೋಗಿ ಎಂಬವರು ಮೀನು ಹಿಡಿಯಲು ತೆರಳಿದ್ದ ವೇಳೆ ರಾಧಾಕೃಷ್ಣ ಗೌಡ, ಭುವನೇಶ್, ರಾಧಾಕೃಷ್ಣ ಯಾನೆ ಜನಾರ್ದನ ಕೆ., ವಿಶ್ವನಾಥ್ ಗೌಡ ಮತ್ತು ಬಾಲಚಂದ್ರ ಎಂಬವರು ಜಾತಿನಿಂದನೆಗೈದು ಹಲ್ಲೆ ನಡೆಸಿ, ಜೀವಬೆದರಿಕೆಯೊಡ್ಡಿದ್ದರು ಎಂದು ಆರೋಪಿಸಲಾಗಿತ್ತು.
2015ರ ಜನವರಿ 17ರಂದು ಘಟನೆ ನಡೆದಿತ್ತು.

ಮೀನುಗಾರಿಕೆ ನಿಷೇಧಿತ ಪ್ರದೇಶವಾದ ಉರುಂಬಿ ಎಂಬಲ್ಲಿ ಕುಮಾರಧಾರಾ ನದಿಯಲ್ಲಿ ಜೋಗಿಯವರು ಮೀನು ಹಿಡಿಯುತ್ತಿರುವ ಸಮಯ ಆರೋಪಿಗಳು ಆಕ್ರಮಕೂಟ ಸೇರಿಕೊಂಡು ಅಲ್ಲಿಗೆ ಹೋಗಿ, ಜೋಗಿ ಮತ್ತು ಇತರ 16 ಮಂದಿಗೆ ಅವಾಚ್ಯ ಶಬ್ದಗಳಿಂದ ಬೈದು, ಜಾತಿನಿಂದನೆ ಮಾಡಿ, ಹಲ್ಲೆ ನಡೆಸಿ, ನಿಮ್ಮೆಲ್ಲರನ್ನೂ ತಲವಾರಿನಿಂದ ಕಡಿದು ಕೊಂದು ಹಾಕಿ ನದಿಗೆ ಬಿಸಾಡುತ್ತೇವೆ ಎಂದು ಜೀವಬೆದರಿಕೆವೊಡ್ಡಿದ್ದರು ಎಂದು ಆರೋಪಿಸಿ, ಜೋಗಿ ಎಂಬವರು ಕಡಬ ಠಾಣೆಗೆ ದೂರನ್ನು ನೀಡಿದ್ದರು.

ಅವರು ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವಂಗಡ ದೌರ್ಜನ್ಯ ತಡೆಕಾಯ್ದೆಯನ್ವಯ ಕಡಬ ಪೊಲೀಸರು ಪ್ರಕರಣ ದಾಖಲಿಸಿದ್ದರು

.ನಂತರ ಪೊಲೀಸರು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.ಈ ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ ಐದನೇ ಹೆಚ್ಚುವ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ಅಭಿಯೋಜನ ಪರ ಸುಮಾರು 25 ಸಾಕ್ಷಿಗಳ ಪೈಕಿ 21 ಸಾಕ್ಷಿಗಳನ್ನು ತನಿಖೆ ನಡೆಸಿ, 23 ದಾಖಲೆಗಳನ್ನು ಪರಿಶೀಲಿಸಿ ಪ್ರಾಸಿಕ್ಯೂಷನ್ ಈ ಪ್ರಕರಣವನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ವಿಫಲವಾಗಿದೆ ಎಂದು ತೀರ್ಮಾನಿಸಿ, ಆರೋಪಿಗಳನ್ನು ನಿರಪರಾಧಿಗಳೆಂದು ಬಿಡುಗಡೆಗೊಳಿಸಲು ಆದೇಶಿಸಿದೆ.ಆರೋಪಿಗಳ ಪರವಾಗಿ ನ್ಯಾಯವಾದಿ ಮಹೇಶ್ ಕಜೆಯವರು ವಾದಿಸಿದ್ದರು.

Leave A Reply

Your email address will not be published.