ಪ್ರಿಯತಮನ ಕಳ್ಳತನದ ಮಹಾಕಾರ್ಯಕ್ಕೆ ಸಾಥ್ ಕೊಟ್ಟ ಪ್ರೇಯಸಿ!! | ಎಟಿಎಂನಿಂದ 16 ಲಕ್ಷ ರೂಪಾಯಿ ಎಗರಿಸಿದ ಈ ಕಳ್ಳ ಜೋಡಿ ಹಾಗೂ ಅವರ ಗ್ಯಾಂಗ್ ಇದೀಗ ಪೊಲೀಸರ ಅತಿಥಿಗಳು

ಇಂದು ಜನರು ತಮ್ಮ ಜೀವನ ಸುಖಕರವಾಗಿರಲು ಬಯಸುತ್ತಾರೆ.ಈ ನಿಟ್ಟಿನಲ್ಲಿ ಯಾವುದೇ ದಾರಿಯನ್ನು ಹಿಡಿಯಲು ಸಿದ್ದರಾಗಿರುತ್ತಾರೆ. ಅದು ಕೆಟ್ಟದ್ದೇ ಆಗಿರಲಿ ಆದ್ರೆ ಅವರಿಗೆ ಮಾತ್ರ ಸುಲಭವಾಗಿ ಹಣ ಬರಬೇಕು. ಹೀಗೆ ಅದೆಂತಹದ್ದೇ ಕಳ್ಳತನಕ್ಕೂ ಹೊಂಚು ಹಾಕುತ್ತಾರೆ. ಆದ್ರೆ ಇಲ್ಲೊಂದು ಕಡೆ ನಡೆದ ಕಳ್ಳತನ ಮಾತ್ರ ಕಳ್ಳನನ್ನು ಮೆಚ್ಚುವಂತದ್ದೇ ಹೇಳಬಹುದು. ಅಷ್ಟಕ್ಕೂ ಆತನ ಈ ಸಾಹಸಕ್ಕೆ ಆಕೆಯೇ ಕಾರಣ!

ಹೌದು.ಈ ಕಳ್ಳ ಹಣಗಳಿಸಲು ಮಾಡಿದ ಪ್ಲಾನ್ ಯೇ ಎಟಿಎಂ ಯಂತ್ರ. ಈತನ ಈ ಖತರ್ನಾಕ್ ಐಡಿಯಾಕ್ಕೆ ಸಾತ್ ಕೊಟ್ಟೋಳೆ ‘ಗರ್ಲ್ ಫ್ರೆಂಡ್ ‘.ತನ್ನ ಗೆಳೆಯನಿಗೆ ಬುದ್ಧಿ ಮಾತು ಹೇಳೋ ಗೆಳತಿಯೇ ಆತನ ಈ ಕಳ್ಳತನಕ್ಕೆ ಕೈ ಜೋಡಿಸಿದ್ದಾಳೆ. ಅಷ್ಟಕ್ಕೂ ಅಲ್ಲದಾ ಘಟನೆ ಏನೆಂದು ಮುಂದೆ ಓದಿ.

ಅದಾಗಷ್ಟೆ ಸೆಕ್ಯೂರಿಟಿ ಸಿಬ್ಬಂದಿ ಎಟಿಎಂ ಮಶೀನ್ ಗೆ ಲಕ್ಷ ಲಕ್ಷ ಹಣ ತುಂಬಿಸಿ ಹೋಗಿದ್ದ.ಸಾಕಷ್ಟು ಬಿಗಿ ಭದ್ರತೆಯಿಂದ ಲಾಕ್ ಮಾಡಿದ್ರೂ ಸಹ ನಕಲಿ ಕೀ ಬಳಸಿ, ಕೊನೆಗೆ ಎಟಿಎಂ ಮಶೀನ್ ಪಾಸವರ್ಡ್ ಬಳಸಿ ಯಾವುದೇ ಸುಳಿವು ಸಹ ಬಿಡದೇ ಅತ್ಯಂತ ಚಾಣಾಕ್ಷತೆಯಿಂದ ಈ ಕಳ್ಳ ಗ್ಯಾಂಗ್ ಕಳ್ಳತನ ಮಾಡಿದೆ.ಪಕ್ಕಾ ಪ್ಲಾನ್ ಪ್ರಕಾರ ನಡೆದ ಈ ಎಟಿಎಂ ಲೂಟಿಯ ವೇಳೆ ಬರೋಬ್ಬರಿ 16 ಲಕ್ಷ ರೂಪಾಯಿ ದೋಚಿದ್ದ ಖದೀಮರು ಇದೀಗ ಮಾತ್ರ ಖಾಕಿ ಬಲೆಗೆ ಬಿದ್ದಿದ್ದಾರೆ.

ಹೌದು ನವೆಂಬರ್ 18ರ ರಾತ್ರಿ ಮುದ್ದೇಬಿಹಾಳದ ಹುಡ್ಕೋ ಕಾಲೋನಿಯಲ್ಲಿನ ಯೂನಿಯನ್ ಬ್ಯಾಂಕ್ ಎಟಿಎಂ ಕಳ್ಳತನ ಮಾಡಲಾಗಿತ್ತು. ರಾತ್ರಿ ವೇಳೆ ಬಂದ್ ಇರುತ್ತಿದ್ದ ಎಟಿಎಂ ಮಶೀನ್ ಬೀಗ ಮುರಿದು ಪಾಸವರ್ಡ್ ಹಾಕಿ 16 ಲಕ್ಷ ರೂಪಾಯಿ ಹಣ ದೋಚಲಾಗಿತ್ತು.ಈ ಕುರಿತು ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಮುದ್ದೇಬಿಹಾಳ ಠಾಣೆಗೆ ದೂರು ನೀಡಿದ್ದರು.ಸಿಸಿಟಿವಿ ವಿಡಿಯೋ ಆಗಲಿ ಅಥವಾ ಯಾವುದೇ ಸಾಕ್ಷಿ ಇಲ್ಲದಿದ್ರೂ ಪ್ರಕರಣದ ಹಿಂದೆ ಬಿದ್ದ ಪೊಲೀಸರು ಚುರುಕಿನ ತನಿಖೆ ನಡೆಸಿ ಏಳು ಆರೋಪಿಗಳನ್ನು ಬಂಧಿಸಿದ್ದಾರೆ.ಇಡೀ ಮುದ್ದೇಬಿಹಾಳದಲ್ಲಿನ ಸಿಸಿಟಿವಿಗಳನ್ನು ಪರಿಶೀಲಿಸಿದ ಪೊಲೀಸರಿಗೆ ಅಂದು ರಾತ್ರಿ ಒಂದು ಸ್ವಿಫ್ಟ್ ಕಾರು ಹಾಗೂ ಕೆಲವು ವ್ಯಕ್ತಿಗಳು ಅನುಮಾನಾಸ್ಪದವಾಗಿ ತಿರುಗಾಡಿರುವುದು ಕೆಲವು ಸಿಸಿ ಕ್ಯಾಮೆರಾಗಳಲ್ಲಿ ಕಂಡು ಬಂದಿತ್ತು.

ಬಳಿಕ ಪೊಲೀಸರ ತನಿಖೆಯಲ್ಲಿ ಯೂನಿಯನ್ ಬ್ಯಾಂಕ್ ಕ್ಯಾಶಿಯರ್ ಮಿಸ್ಮಿತಾ ಶರಾಭಿ ಹಾಗೂ ಸಿಪಾಯಿ ವಿಠ್ಠಲ್ ಮಂಗಳೂರ ಭಾಗಿಯಾಗಿರುವುದು ಗೊತ್ತಾಗಿತ್ತು.ಅವರನ್ನು ಹಿಡಿದು ವಿಚಾರಿಸಿದ ಪೊಲೀಸರಿಗೆ ಭಯಾನಕ ಸತ್ಯ ಗೊತ್ತಾಗಿತ್ತು. ಕ್ಯಾಶಿಯರ್ ಆಗಿದ್ದ ಮಿಸ್ಮಿತಾ ತನ್ನ ಬಾಯ್ ಫ್ರೆಂಡ್ ಮಂಜುನಾಥ್ ಬಿನ್ನಾಳಮಠ ಎಂಬಾತನಿಗೆ ಎಟಿಎಂ ಮಶೀನ್ ಪಾಸವರ್ಡ್ ನೀಡಿದ್ದಳು.ಇತ್ತ ಸಿಪಾಯಿ ವಿಠ್ಠಲ್ ಎಟಿಎಂ ಮಶೀನ್ ನ ನಕಲಿ ಕೀ ಕೊಟ್ಟಿದ್ದ. ಇವರಿಬ್ಬರ ಸಹಾಯ ಪಡೆದು ಮಂಜುನಾಥ್ ತನ್ನ ನಾಲ್ವರು ಸಹಚರರೊಂದಿಗೆ ಕಾರಿನಲ್ಲಿ ಬಂದು ಎಟಿಎಂ ಲೂಟಿ ಮಾಡಿದ್ದ.

ಕ್ಯಾಶಿಯರ್ ಮಿಸ್ಮಿತಾಳ ಬಾಯ್ ಫ್ರೇಂಡ್ ಆಗಿದ್ದ ಮುದ್ದೇಬಿಹಾಳದ ಮಂಜುನಾಥ್ ಬಿನ್ನಾಳಮಠ ಸುಲಭವಾಗಿ ಹಣ ಮಾಡುವ ಯೋಚನೆ ಮಾಡಿದ್ದ. ಇದಕ್ಕೆ ಸಾಥ್ ನೀಡಿದ ಮಿಸ್ಮಿತಾ ತಮ್ಮದೇ ಬ್ಯಾಂಕ್ ಎಟಿಎಂ ಮಶೀನ್ ಲೂಟಿ ಮಾಡುವ ಪ್ಲಾನ್ ಕೊಟ್ಟಿದ್ದಳು. ಅದರಂತೆ ಯಶಸ್ವಿಯಾಗಿ ಎಟಿಎಂ ಲೂಟಿ ಮಾಡಿದ್ದ ಮಂಜುನಾಥ್, ಬಸವರಾಜ್, ಸುರೇಶ್, ಮುತ್ತು, ನಾಗರಾಜ್, ವಿಠ್ಠಲ್, ಮಿಸ್ಮಿತಾ ಈ ಏಳು ಆರೋಪಿಗಳು ಇದೀಗ ಅಂದರ್ ಆಗಿದ್ದಾರೆ.

ಬಂಧಿತರಿಂದ 13 ಲಕ್ಷ ರೂ.ಎಟಿಎಂ ಮಶೀನ್ ನಿಂದ ದೋಚಲಾಗಿದ್ದ ಹಣ,ಯಂತ್ರದ ಸಲಕರಣೆಗಳು, ಒಂದು ಸ್ವಿಫ್ಟ್ ಕಾರು, 5ಸ್ಮಾರ್ಟ್ ಫೋನ್ ಗಳು ಸೇರಿ ಒಟ್ಟು 18ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.ಕ್ಯಾಶಿಯರ್ ಮಿಸ್ಮಿತಾ ಕ್ರಿಮಿನಲ್ ಪ್ಲಾನ್ ಮಾಡಿ ತನ್ನ ಪ್ರಿಯಕರನಿಂದಲೇ ಇಷ್ಟೆಲ್ಲ ಸಹಾಯ ಮಾಡಿಸಿದ್ದು, ಬ್ಯಾಂಕ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಸಾಕ್ಷಿಗಳು ಇಲ್ಲದಿದ್ರೂ ತ್ವರಿತಗತಿಯಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ, ಕಳವಾಗಿದ್ದ ಸಾರ್ವಜನಿಕರ ಹಣವನ್ನು ವಶಕ್ಕೆ ಪಡೆದ ಮುದ್ದೇಬಿಹಾಳ ಠಾಣೆ ಪೊಲೀಸರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

ಅಂತೂ ಗರ್ಲ್ ಫ್ರೆಂಡ್ ಸಹಾಯ ಪಡೆಯೋ ಪ್ಲಾನ್ ಮಾತ್ರ ಸಕ್ಸಸ್. ಆದ್ರೆ ಪೊಲೀಸ್ ಮುಖ ದರ್ಶನವಾಗುವುದಂತೂ ತಪ್ಪಿಲ್ಲ!.ಒಟ್ಟಾಗಿ ಆಕೆಯ ಸಹಾಯ ಹಸ್ತ ಎಲ್ಲರ ಬಾಯಲ್ಲೂ ಉಗಿಸುವಂತೆ ಮಾಡಿದೆ.

Leave A Reply

Your email address will not be published.