ಹಿಟ್ ಅಂಡ್ ರನ್ ಪ್ರಕರಣ-ಹಾರಿಹೋಗಿತ್ತು ಅಮಾಯಕರಿಬ್ಬರ ಪ್ರಾಣ!! ಅಪಘಾತ ನಡೆಸಿದ ವಾಹನ ಸಮೇತ ಚಾಲಕ ಪರಾರಿ!!

ಅದೊಂದು ಹಿಟ್ ಅಂಡ್ ರನ್ ಪ್ರಕರಣ.ಅಪಘಾತ ನಡೆಸಿದ ಚಾಲಕ ತನ್ನ ವಾಹನ ಸಮೇತ ಸ್ಥಳದಿಂದ ಕಾಲ್ಕಿತ್ತು ಯಾರಿಗೂ ಅನುಮಾನ ಬರದಂತೆ ತನ್ನ ವಾಹನಕ್ಕೆ ರೀ ಪೇಂಟಿಂಗ್ ಕೂಡಾ ಮಾಡಿಸಿದ್ದ. ಆ ಅಪಘಾತದಲ್ಲಿ ಇಬ್ಬರು ಅಮಾಯಕ ಯುವಕರು ದುರ್ಮರಣ ಹೊಂದಿದ್ದು,ಯುವಕರ ಮನೆಯವರ ಪ್ರಾರ್ಥನೆ ಫಲಿಸಿ ಕೊನೆಗೂ ಆ ಸಾವಿಗೆ ನ್ಯಾಯ ದೊರಕಿದಂತಾಗಿದೆ.ಸದ್ಯ ಕಣ್ತಪ್ಪಿಸಿಕೊಂಡಿದ್ದ ಚಾಲಕ ಸಮೇತ ಅಪಘಾತ ನಡೆಸಿದ ವಾಹನವನ್ನು ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ.

ಘಟನೆ ವಿವರ: ಹಟ್ಟಿ ಚಿನ್ನದ ಗಣಿಯ ಕಾರ್ಮಿಕರಾದ ನಾಗೇಶ್ ಹಾಗೂ ದೇವರಾಜ್ ಎಂಬಿಬ್ಬರು ಯುವಕರು ಸ್ನೇಹಿತನ ಬರ್ತ್ ಡೇ ಪಾರ್ಟಿ ಗೆಂದು ಬೈಕ್ ಏರಿ ಹೊರಟಿದ್ದು, ಕಲಬುರಗಿ-ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಚಲಿಸುತ್ತಿರುವಾಗ ಎದುರಿನಿಂದ ಯಮನಂತೆ ಬಂದ ಸರ್ಕಾರಿ ಬಸ್ ಒಂದು ಡಿಕ್ಕಿಯಾಗಿದೆ.ಡಿಕ್ಕಿಯ ರಭಸಕ್ಕೆ ಯುವಕರಿಬ್ಬರು ರಸ್ತೆಯಲ್ಲಿ ಬಿದ್ದಿದ್ದರೂ ಕರುಣೆ ತೋರದ ಚಾಲಕ ಬಸ್ ನ್ನು ಮುಂದಕ್ಕೆ ಕೊಂಡುಹೋಗಿದ್ದು ಯಾರಿಗೂ ಅನುಮಾನ ಬಾರದೆ ಇರಲಿ ಎಂದು ಬಸ್ ನ ಪೈಂಟ್ ಕೂಡಾ ಚೇಂಜ್ ಮಾಡಿಸಿದ್ದ.

ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಈ ಪ್ರಕರಣವೊಂದು ಸವಾಲಾಗಿ ಕಾಡಿದ್ದು, ಸ್ಥಳದಲ್ಲಿ ಸಿಕ್ಕಿದ್ದ ಬಸ್ ನ ಅವಶೇಷಗಳನ್ನು ಕೈಗೆತ್ತಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದರು.ಇದಾದ ಬಳಿಕ ಪೊಲೀಸರು ಹಲವು ಕಡೆಗಳಲ್ಲಿ ಸಿಸಿ ಕ್ಯಾಮೆರಾ ಪರಿಶೀಲಿಸಿದ್ದು ಅಪಘಾತ ನಡೆಸಿದ ಬಸ್ ಪತ್ತೆಯಾಗಿದೆ.

ಇತ್ತ ಬಸ್ ಚಾಲಕ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಬಸ್ ನ್ನು ಬೆಂಗಳೂರಿಗೆ ತಲುಪಿಸಿದ್ದು,ಅಲ್ಲಿಯ ಖಾಸಗಿ ಗ್ಯಾರೇಜ್ ಒಂದರಲ್ಲಿ ಬಸ್ ನ ನುಜ್ಜುಗುಜ್ಜಾದ ಭಾಗಗಳಿಗೆ ರಿ-ಪೇಯಿಂಟ್ ಕೂಡಾ ಮಾಡಿಸಿದ್ದ.

ಸದ್ಯ ಅಪಘಾತ ನಡೆಸಿದ ಬಸ್ ಸಮೇತ ಚಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ. ಅಪಘಾತ ನಡೆಸಿ ಅಮಾಯಕ ಜೀವಗಳನ್ನು ಬಲಿ ಪಡೆದು ಕರುಣೆ ಇಲ್ಲದಂತಹ ಕಟು ಮನಸ್ಥಿತಿಯ ಚಾಲಕನಿಗೆ ಮೃತ ಯುವಕರ ಹೆತ್ತವರು ಹಿಡಿಶಾಪ ಹಾಕುತಿದ್ದಾರೆ. ದುಡಿದು ಮನೆ ನಿಭಾಯಿಸುತ್ತಿದ್ದ ಯುವಕರ ಸಾವಿನಿಂದಾಗಿ ಮನೆಯ ಆಧಾರ ಸ್ಥಂಭವೇ ಕಳಚಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

Leave A Reply

Your email address will not be published.