ಮಸೀದಿಗಳಲ್ಲಿ ಅಳವಡಿಸಲಾಗಿರುವ ಮೈಕ್ ಗಳನ್ನು ಕೂಡಲೇ ತೆರವುಗೊಳಿಸಿ, ಇಲ್ಲದಿದ್ದರೆ ನಾವೇ ಕಿತ್ತು ಹಾಕುತ್ತೇವೆ ಎಂದು ಗುಡುಗಿದ ಪ್ರಮೋದ್ ಮುತಾಲಿಕ್

ಈ ಕೂಡಲೇ ಮಸೀದಿಗಳಲ್ಲಿ ಅಳವಡಿಸಲಾಗಿರುವ ಮೈಕ್‌ಗಳನ್ನು ತೆರವುಗೊಳಿಸಿ, ಇಲ್ಲದಿದ್ದರೆ ನಾವೇ ಕಿತ್ತುಹಾಕುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಮಸೀದಿಗಳ ಮೇಲೆ ಅಳವಡಿಸಲಾಗಿರುವ ಮೈಕ್ ನಿಷೇಧ ಮಾಡಿ ಆದೇಶ ಹೊರಡಿಸಿ ಹಲವು ದಿನಗಳು ಕಳೆದಿವೆ. ಆದರೆ, ಸುಪ್ರೀಂ ಕೋರ್ಟ್ ಆದೇಶ ಇದುವರೆಗೆ ಪಾಲನೆ ಆಗುತ್ತಿಲ್ಲ. ಬೆಳ್ಳಂಬೆಳಗ್ಗೆ ಮಸೀದಿಗಳ ಮೇಲೆ ಮೈಕ್ ಶಬ್ದ ಶುರುವಾಗುತ್ತದೆ. ಇದು ನ್ಯಾಯಾಲಯ ಆದೇಶ ಉಲ್ಲಂಘನೆಯಾಗುತ್ತದೆ. ದಿನದ ಐದು ಬಾರಿ ಮಸೀದಿಗಳಲ್ಲಿನ ಪ್ರಾರ್ಥನೆ ಶಬ್ಧ ಕಿರಿಕಿರಿಯುಂಟಾಗುತ್ತಿದೆ ಎಂದು ಗುಡುಗಿದ್ದಾರೆ.

ಈ ಬಗ್ಗೆ ಶ್ರೀರಾಮಸೇನೆ ಹೋರಾಟ ಶುರು ಮಾಡಲು ಅಣಿಯಾಗುತ್ತಿದೆ‌. ನಮಗೆ ಪ್ರಾರ್ಥನೆ ಮಾಡಲು ಅಭ್ಯಂತರವಿಲ್ಲ. ಆದರೆ, ಶಬ್ದಕ್ಕೆ ನಮ್ಮ ತಕರಾರು ಇದೆ. ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ನಾವೇ ಮಸೀದಿಗಳ ಮೇಲಿನ ಮೈಕ್ ಕಿತ್ತು ಬಿಸಾಕುತ್ತೇವೆ. ಅನೇಕ‌ ಮುಸ್ಲಿಂ ದೇಶಗಳಲ್ಲಿಯೇ ಮಸೀದಿಗಳ ಮೈಕ್ ತೆಗೆಯಲಾಗಿದೆ. ಆದರೆ, ಇಲ್ಲಿ ಮಾತ್ರ ಕಾನೂನು ಪಾಲನೆಯಾಗುತ್ತಿಲ್ಲ ಎಂದು ಕಿಡಿಕಾರಿದರು.

ಅದಲ್ಲದೆ, ಸಂಸದ ಪ್ರತಾಪ್ ಸಿಂಹ ಅವರನ್ನು ಚಡ್ಡಿ ಕಳೆದು ಹೊಡೆಯುತ್ತೇವೆ ಎಂಬ ಸುಲಫುಲ ಶ್ರೀಗಳ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪ್ರಮೋದ್ ಮುತಾಲಿಕ್, ಪ್ರಿಯಾಂಕ್‌ ಖರ್ಗೆಗೆ ಸಂಬಂಧಿಸಿದಂತೆ ಪ್ರತಾಪ್ ಸಿಂಹ ಮಾತಾಡಿದ್ದಾರೆ. ಅದು ಅವರ ರಾಜಕೀಯ ವಿಚಾರ. ಪ್ರಿಯಾಂಕ್ ಖರ್ಗೆಯವರ ಎಜೆಂಟ್ ಆಗಿ ನಿವ್ಯಾಕೇ ಮಾತಾಡಿದ್ದೀರಿ?‌?ನೀವು ಧಾರ್ಮಿಕ ಮುಖಂಡರಾಗಿ ಧಾರ್ಮಿಕ ವಿಚಾರಗಳ ಬಗ್ಗೆ ಮಾತನಾಡಿ. ಅದನ್ನು ಬಿಟ್ಟು ರಾಜಕೀಯ ಮಾಡುವುದು ಸರಿಯಲ್ಲ‌ ಎಂದರು.

ಈ ರೀತಿ ಮಾತನಾಡಲು ಪ್ರಿಯಾಂಕ್‌ ಖರ್ಗೆ ಬಳಿ ಎಷ್ಟು ಹಣ ಪಡೆದಿದ್ದೀರಿ. ಈ ರೀತಿ ಮಾತನಾಡಿ ಮಠದ ಮರ್ಯಾದೆ ಕಡಿಮೆ ಮಾಡಬೇಡಿ. ಲಿಂಗಾಯತ ಸಮುದಾಯದವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ. ಅದರ ಬಗ್ಗೆ ಮಾತನಾಡಿ. ಮಠಾಧಿಪತಿಗಳು ಮಠ, ಧರ್ಮ, ದೇಶ ಉಳಿಸಲು ಕಾರ್ಯ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಿ

ಇನ್ನು, ರಾಜ್ಯದಲ್ಲಿ ಮತಾಂತರ ಪ್ರಕ್ರಿಯೆ ಹೆಚ್ಚಾಗಿದೆ ಎಂದು ಆರೋಪಿಸಿದ ಪ್ರಮೋದ್‌ ಮುತಾಲಿಕ್‌, 50 ಕ್ಕೂ ಅಧಿಕ ಮಠಾಧೀಶರ ನೇತೃತ್ವದಲ್ಲಿ ಸಿಎಂ ಭೇಟಿಯಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಆಗ್ರಹಿಸಿದ್ದೇವೆ. ಕಾನೂನು ಜಾರಿಗೆ ತರದಿದ್ದರೆ ಜನವರಿ ತಿಂಗಳಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಎಲ್ಲಾ ಕಡೆ ಕ್ರಿಶ್ಚಿಯನ್ ಸಮುದಾಯದವರು ತಮ್ಮ ತಂತ್ರಗಳನ್ನು ಉಪಯೋಗಿಸಿ ಮತಾಂತರ ಮಾಡುತ್ತಿದ್ದಾರೆ. ನಿಮ್ಮ ಪಾಡಿಗೆ ನೀವು ಚರ್ಚ್‌ನಲ್ಲಿ ಪ್ರಾರ್ಥನೆ ಮಾಡಿ‌, ಇಲ್ಲ ಅಂದ್ರೆ ಒದ್ದು ಓಡಿಸುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಹಲಾಲ್ ವಿಚಾರವಾಗಿ ಕಿಡಿಕಾರಿದರು.

Leave A Reply

Your email address will not be published.