ಬೇಡ ಅಂದರೆ ಓದಬೇಡಿ, ಅಷ್ಟು ಸೂಕ್ಷ್ಮವಾದರೆ ನಾವೇನು ಮಾಡೋಕಾಗುತ್ತೆ? | ಖುರ್ಷಿದ್ ಪುಸ್ತಕ ನಿಷೇಧಕ್ಕೆ ಕೋರಿದ್ದ ಅರ್ಜಿ ವಜಾಗೊಳಿಸಿದ ಕೋರ್ಟ್ !

ದೆಹಲಿ: ಜನರು ಈ ಮಟ್ಟದಲ್ಲಿ ಸೂಕ್ಷ್ಮವಾದರೆ ತಾನೇನು ಮಾಡುವುದಕ್ಕೆ ಸಾಧ್ಯ? ಎಂದು ದೆಹಲಿ ಹೈಕೋರ್ಟ್ ಕೈ ಚೆಲ್ಲಿ ಕುಳಿತಿದೆ. ಅದು ಹೀಗಂದು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅಯೋಧ್ಯೆಗೆ ಸಂಬಂಧಿಸಿದಂತೆ ಬರೆದಿದ್ದ ಪುಸ್ತಕದ ಮುದ್ರಣ, ಮಾರಾಟಕ್ಕೆ ತಡೆ ನೀಡಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

Sunrise Over Ayodhya: Nationhood In Our Times ಎಂಬ ಪುಸ್ತಕದಲ್ಲಿ ಸಲ್ಮಾನ್ ಖುರ್ಷಿದ್ ಹಿಂದುತ್ವವನ್ನು ಬೊಕೊ ಹರಾಮ್, ಇಸ್ಲಾಮಿಕ್ ಸ್ಟೇಟ್ ಗೆ ಹೋಲಿಕೆ ಮಾಡಿದ್ದರು. ಆ ಕಾರಣದಿಂದ ಪುಸ್ತಕ ಮಾರಾಟ, ಮುದ್ರಣಕ್ಕೆ ತಡೆ ಕೋರಿ ವಕೀಲ ವಿನೀತ್ ಜಿಂದಾಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸುತ್ತಿತ್ತು. ಮಾಜಿ ಕೇಂದ್ರ ಸಚಿವ ಖುರ್ಷಿದ್ ಅವರ ಪುಸ್ತಕದಲ್ಲಿ ಬೇರೆಯವರ ನಂಬಿಕೆಯನ್ನು ಮತ್ತೊಬ್ಬರ ಮೇಲೆ ಹೇರಲಾಗಿದೆ ಎಂದು ಆರೋಪಿಸಿದ್ದರು.

“ಈ ವಾದವನ್ನು ಆಲಿಸಿದ ಕೋರ್ಟ್, ಜನರಿಗೆ ಆ ಪುಸ್ತಕ ಖರೀದಿಸದಂತೆ ಹೇಳಿ, ಈ ಪುಸ್ತಕದಲ್ಲಿ ಕೆಟ್ಟದಾಗಿ ಬರೆಯಲಾಗಿದೆ ಎಂದು ಹೇಳಿ, ಉತ್ತಮವಾದುದ್ದನ್ನು ಓದಲು ಸಲಹೆ ನೀಡಿ” ಎಂದು ನ್ಯಾ. ಯಶ್ವಂತ್ ವರ್ಮಾ ಹೇಳಿದ್ದಾರೆ. ಈ ಪುಸ್ತಕ ಸಾರ್ವಜನಿಕ ಶಾಂತಿಯನ್ನು ಕದಡಬಹುದು ಎಂಬ ಆತಂಕವನ್ನು ಅರ್ಜಿದಾರರು ವ್ಯಕ್ತಪಡಿಸಿದ್ದು, ಶಾಂತಿ ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದೂ ಅರ್ಜಿದಾರರು ಹೇಳಿದ್ದಾರೆ. ಜನರು ಅಷ್ಟೊಂದು ಸೂಕ್ಷ್ಮವಾದರೆ ನಾವೇನು ಮಾಡೋದಕ್ಕೆ ಸಾಧ್ಯ? ಎಂದು ಹೇಳಿರುವ ನ್ಯಾಯಮೂರ್ತಿಗಳು ಅರ್ಜಿಯನ್ನು ವಜಾಗೊಳಿಸಿದ್ದಾರೆ.

Leave A Reply

Your email address will not be published.