ಪತ್ರಕರ್ತ ಸುಖಪಾಲ್ ಪೊಳಲಿ ಕೊಲೆಯತ್ನ ಪ್ರಕರಣ: ಮಂಗಳೂರು ಪೊಲೀಸ್ ಕಮೀಷನರ್ ಗೆ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿ ಮನವಿ , ಪತ್ರಕರ್ತರಿಗೆ ನ್ಯಾಯ ದೊರಕದೇ ಇದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ

ಪುತ್ತೂರು: ಮಂಗಳೂರಿನಲ್ಲಿ ಪತ್ರಕರ್ತ ಸುಖಪಾಲ್ ಪೊಳಲಿಯವರನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆಯ ಕುರಿತು ಕೂಲಂಕುಷ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿ ವತಿಯಿಂದ ಮಂಗಳೂರು ಪೊಲೀಸ್ ಕಮೀಷನರ್ ಎನ್.‌ಶಶಿಕುಮಾರ್ ಅವರಿಗೆ ನ.24ರಂದು ಮನವಿ ಸಲ್ಲಿಸಲಾಯಿತು.‌
ಮಂಗಳೂರು ಪೊಲೀಸ್ ಕಮೀಷನರ್ ಕಛೇರಿಯಲ್ಲಿ ಮನವಿ ನೀಡಲಾಗಿದ್ದು ಪತ್ರಕರ್ತರಿಗೆ ನ್ಯಾಯ ದೊರಕದೇ ಇದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಲಾಯಿತು.
‘ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರೂ, ಪಬ್ಲಿಕ್ ಟಿ.ವಿ.ಯ ದ.ಕ. ಜಿಲ್ಲಾ ವರದಿಗಾರರೂ ಆಗಿರುವ ಸುಖಪಾಲ್ ಪೊಳಲಿಯವರನ್ನು ಕೊಲೆಗೈಯ್ಯಲು ಯತ್ನಿಸಿರುವ ಘಟನೆ ಇಡೀ ಪತ್ರಕರ್ತ ಸಮೂಹದಲ್ಲಿ ಆತಂಕ ಸೃಷ್ಠಿಸಿದೆ. ಪತ್ರಿಕಾ ಮಾಧ್ಯಮದವರ ಮೇಲೆ ಪದೇ ಪದೇ ಹಲ್ಲೆ, ಕೊಲೆಯತ್ನದಂತಹ ಘಟನೆಗಳು ನಡೆಯುತ್ತಿರುವುದರಿಂದ ಪತ್ರಿಕೆ ಮತ್ತು ದೃಶ್ಯ ಮಾಧ್ಯಮದವರು ಕರ್ತವ್ಯ ನಿರ್ವಹಿಸಲು ಭಯಪಡುವಂತಾಗಿದೆ. ಮಂಗಳೂರು ನಗರದಲ್ಲಿ ನಡೆದಿರುವ ಈ ಘಟನೆಯ ಬಗ್ಗೆ ತಾವು ಈಗಾಗಲೇ ತನಿಖೆ ಕೈಗೆತ್ತಿಕೊಂಡು ಆರೋಪಿಯನ್ನು ಬಂಧಿಸಿರುವುದು ಸ್ವಾಗತಾರ್ಹವಾಗಿದೆ. ಆದರೂ ಇದರ ಹಿಂದಿರುವ ಸಂಚನ್ನು ಬಯಲಿಗೆಳೆಯಬೇಕಿದೆ. ಹಾಗಾಗಿ ಈ ಘಟನೆಯ ಕುರಿತು ಇನ್ನಷ್ಟು ಸಮಗ್ರ ತನಿಖೆ ನಡೆಸಿ ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆಳೆದು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಪತ್ರಕರ್ತರಿಗೆ ನ್ಯಾಯ ದೊರಕದೇ ಇದ್ದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ಘಟಕ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಿದೆ’ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ ಶಾಂತಿನಗರ,
ಉಪಾಧ್ಯಕ್ಷ ರಾಮದಾಸ್ ಶೆಟ್ಟಿ ವಿಟ್ಲ ಮತ್ತು ಪ್ರಧಾನ‌ ಕಾರ್ಯದರ್ಶಿ‌ ಕೆ.ಗಣೇಶ್ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಪೊಲೀಸ್ ಕಮೀಷನರ್ ಅವರು ಪತ್ರಕರ್ತರ ಮನವಿಗೆ ಸ್ಪಂದಿಸಲಾಗುವುದು ಎಂದು ತಿಳಿಸಿದರು.

ಆಸ್ಪತ್ರೆಗೆ ಭೇಟಿ: ಸುಖಪಾಲ್ ಪೊಳಲಿಗೆ ಸಾಂತ್ವನ

ಮಂಗಳೂರಿನ‌ ಎ.ಜೆ. ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಸುಖಪಾಲ್ ಪೊಳಲಿಯವರನ್ನು ಭೇಟಿ ಮಾಡಿದ ಯೂನಿಯನ್ ಅಧ್ಯಕ್ಷ ಸಂತೋಷ್ ಕುಮಾರ್ ಶಾಂತಿನಗರ, ಉಪಾಧ್ಯಕ್ಷ ರಾಮದಾಸ್ ಶೆಟ್ಟಿ ವಿಟ್ಲ ಮತ್ತು ಪ್ರಧಾನ‌ ಕಾರ್ಯದರ್ಶಿ ಕೆ.ಗಣೇಶ್ ಅವರು ಸಾಂತ್ವನ ಹೇಳಿದರಲ್ಲದೆ ನ್ಯಾಯ ದೊರಕದೇ ಇದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.‌

Leave A Reply

Your email address will not be published.