ಉಗ್ರರಿಗೆ ಹಣಕಾಸಿನ ನೆರವು ನೀಡಿದ ಮಂಗಳೂರಿನ ದಂಪತಿಗೆ ಹತ್ತು ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ ನ್ಯಾಯಾಲಯ

ಛತ್ತೀಸ್‌ಗಢದ ರಾಯಪುರದಲ್ಲಿರುವ ನ್ಯಾಯಾಲಯವು ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ವರ್ಗಾವಣೆ ಮಾಡಿರುವ ಆರೋಪದಡಿ ಮಂಗಳೂರಿನ ದಂಪತಿ ಸೇರಿ ನಾಲ್ವರಿಗೆ ಬುಧವಾರ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

ಉಗ್ರನಿಗ್ರಹ ಕಾಯ್ದೆಯಾಗಿರುವ ಆಕ್ರಮ ಚಟುವಟಿಕೆ(ತಡೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಭಯೋತ್ಪಾದಕ ಚಟುವಟಿಕೆಗೆ ಹಣ ವರ್ಗವಣೆ ಮಾಡಿದ ಆರೋಪದ ಮೇಲೆ ಈ ನಾಲ್ವರಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಅಜಯ್ ಸಿಂಗ್ ರಜಪೂತ್ ಅವರು ಮಂಗಳೂರು ಮೂಲದ ಜುಬೈರ್ ಹುಸೇನ್ (42) ಮತ್ತು ಆತನ ಪತ್ನಿ ಆಯೇಷಾ ಬಾನೋ (39) ಹಾಗೂ ಧೀರಜ್ ಸಾವೊ (21), ಪಪ್ಪು ಮಂಡಲ್ ಸೇರಿ ನಾಲ್ವರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ್ದಾರೆ.

ಏನಿದು ಪ್ರಕರಣ?

ಡಿಸೆಂಬರ್ 2013 ರಲ್ಲಿ, ರಾಯ್‌ಪುರದ ಖಮರಾಯ್ ಪೊಲೀಸ್ ಠಾಣಾ ವ್ಯಾಪ್ತಿಯ ನಗರವೊಂದರಲ್ಲಿ ರಸ್ತೆಬದಿಯ ಉಪಾಹಾರ ಗೃಹವನ್ನು ನಡೆಸುತ್ತಿದ್ದ ಬಿಹಾರದ ಜಮುಯಿ ನಿವಾಸಿ ಸಾವೊ ಎಂಬಾತನನ್ನು ಬಂಧಿಸಲಾಗಿತ್ತು. ಈತನ ಮೇಲೆ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಬಂಧ ಹೊಂದಿದ ಆರೋಪವಿತ್ತು, ಮುಜಾಹಿದೀನ್, ಸಿಮಿ ಸಂಘಟನೆ ಜೊತೆ ಸಂಬಂಧ ಹೊಂದಿದವರಿಗೆ ಪಾಕಿಸ್ತಾನದ ಖಾಲಿದ್ ಎಂಬವನಿಂದ ಹಣ ಪಡೆದು ಉಗ್ರರ ಖಾತೆಗೆ ರವಾನಿಸುತ್ತಿದ್ದನು. ಅದರಂತೆಯೇ ಅಂಗಳೂರಿನ ಜುಬೇರ್ ಹುಸೇನ್ ಮತ್ತು ಆಯೇಷಾ ಬಾನೋ ದಂಪತಿಗಳಿಗೂ ಈತ ಹಣವನ್ನು ಜಮೆ ಮಾಡುತ್ತಿದ್ದನು.

ನಿಷೇಧಿತ ಸಿಮಿ ಹಾಗೂ ಇಂಡಿಯನ್ ಮುಜಾಹಿದೀನ್ ಉಗ್ರರ ಜೊತೆ ನಂಟನ್ನು ಹೊಂದಿದ್ದ ದಂಪತಿ, ಉಗ್ರ ಸಂಘಟನೆಗಳ ಜೊತೆ ನಂಟು ಹೊಂದಿದ್ದ ಆಯೇಷಾ ಬಿಹಾರದ 50 ಬ್ಯಾಂಕ್ ಖಾತೆಗಳನ್ನು ನೆಟ್ ಬ್ಯಾಂಕಿಂಗ್‌ ಮೂಲಕ ನಿರ್ವಹಿಸುತ್ತಿದ್ದರು.

2013ರಲ್ಲಿ ಸಂಭವಿಸಿದ್ದ ಪಟನಾ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಇಂಡಿಯನ್ ಮುಜಾಹಿದೀನ್ ಸಂಘಟನೆಯ ತೆಹಸೀನ್ ಅಬ್ಬರ್‌ಗೆ ಹಣಕಾಸು ಪೂರೈಕೆ ಮಾಡುತ್ತಿದ್ದದ್ದು ಈಕೆಯೇ. ಆಯೇಷಾ ಗೆ ಪಾಕಿಸ್ತಾನದ ವ್ಯಕ್ತಿಯೊಬ್ಬನಿಂದ ಸೂಚನೆ ಬರುತ್ತಿತ್ತು. ವಿದೇಶಗಳಿಂದ ಅಮಾಯಕ ಜನರ ಖಾತೆಗೆ ಹಣ ವರ್ಗಾಯಿಸಿ ಅದನ್ನು ಆಯೇಷಾ ನಿರ್ವಹಿಸುತ್ತಿದ್ದಳು. ಸುಮಾರು 1 ಕೋಟಿ ರೂ. ಹಣವನ್ನು ವರ್ಗಾವಣೆ ಮಾಡಿದ್ದಳು.

ಅದಲ್ಲದೆ, ಆದಾಯ ತೆರಿಗೆ ಇಲಾಖೆ ಕಣ್ಣಪ್ಪಿಸಲು 49 ಸಾವಿರ ಅಥವಾ ಅದಕ್ಕಿಂತಲೂ ಕಡಿಮೆ ಮೊತ್ತದಲ್ಲಿ ಒಂದು ಬಾರಿಗೆ ಹಣ ಕಳುಹಿಸುತ್ತಿದ್ದಳು. ಭಯೋತ್ಪಾದನೆ ಪ್ರಕರಣದಲ್ಲಿ ನಾಲ್ವರು ಬಿಹಾರದಲ್ಲಿ ಬಂಧನವಾಗುವುದರೊಂದಿಗೆ ಆಯೇಷಾಳ ವೃತ್ತಾಂತ ಬಯಲಾಗಿತ್ತು. 2013ರಲ್ಲಿ ಈಕೆಯನ್ನು ಬಿಹಾರ ಪೊಲೀಸರು ಮಂಗಳೂರಿಗೆ ಬಂದು ಬಂಧಿಸಿದ್ದರು. ಇದೀಗ ಆಕೆ ಸೇರಿದಂತೆ ಉಳಿದ ಮೂವರಿಗೆ ಹತ್ತು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯಾಗಿದೆ.

Leave A Reply

Your email address will not be published.