ಮೂರು ದಿನದ ಬಾಣಂತಿ ಆಸ್ಪತ್ರೆಯಲ್ಲಿ ಸಾವು | ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ದೂರಿದ ಕುಟುಂಬಸ್ಥರು

ದಾವಣಗೆರೆ: ಕಮದೋಡು ಗ್ರಾಮದ ಮೂರು ದಿನದ ಬಾಣಂತಿಯೋರ್ವರು ಸಾವಿಗೀಡಾದ ಘಟನೆ ನಡೆದಿದ್ದು,ಮೃತರ ಚಿಕಿತ್ಸೆಗೆ ವೈದ್ಯರು ತಕ್ಷಣ ಪ್ರತಿಕ್ರಿಯಿಸದೆ ಇದ್ದ, ಅವರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಅನುಷಾ ಸಂಜೀವ್ (23) ಮೃತಪಟ್ಟ ಬಾಣಂತಿ ಎಂದು ತಿಳಿದು ಬಂದಿದೆ.

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕಮದೋಡು ಗ್ರಾಮದ ನಿವಾಸಿ ಅನುಷಾ-ಸಂಜೀವ ಮದುವೆಯಾಗಿ ಒಂದೂವರೆ ವರ್ಷವಾಗಿತ್ತು. ಚೊಚ್ಚಲ ಹೆರಿಗೆಗೆಂದು ಶನಿವಾರ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.ಸಿಜೇರಿಯನ್ ಮಾಡಿದ ಬೆನ್ನಲ್ಲೇ ಗಂಡು ಮಗು ಜನಿಸಿತ್ತು. ಆದರೆ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸುಸ್ತಾಗುತ್ತಿದೆ ಎಂದ ಅನುಷಾ ಸ್ವಲ್ಪ ಸಮಯದಲ್ಲೇ ಸಾವಿಗೀಡಾಗಿದ್ದಾಳೆ ಎನ್ನಲಾಗಿದೆ.

ತಕ್ಷಣಕ್ಕೆ ವೈದ್ಯರ ಸಹಾಯ ಕೋರಿದರೂ ಅವರು ಸ್ಪಂದಿಸಲಿಲ್ಲ ಎಂದು ಮೃತಳ ಸಂಬಂಧಿಕರ ಆರೋಪವಾಗಿದ್ದು, ಆಕೆಯ ಸಾವಿಗೆ ವೈದ್ಯರೇ ಕಾರಣ ಎಂದು ಹೇಳಿ ಬೇಸರ ವ್ಯಕ್ತ ಪಡಿಸಿದ್ದಾರೆ.

Leave A Reply

Your email address will not be published.