ಬೆಳ್ತಂಗಡಿ : ಅಕ್ರಮ ಗೋ ಸಾಗಾಟದ ವೇಳೆ ದಾಳಿ ನಡೆಸಿದ ಬಜರಂಗದಳದ ಕಾರ್ಯಕರ್ತರು | ಎರಡು ವಾಹನ ಸಹಿತ ಆರೋಪಿ ಪೊಲೀಸ್ ವಶಕ್ಕೆ

ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ವೇಳೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿ ಆರೋಪಿಯನ್ನು ವಾಹನ ಸಹಿತ ಪೋಲಿಸರಿಗೊಪ್ಪಿಸಿದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕುರುಡ್ಯದಿಂದ ಕಸಾಯಿಖಾನೆಗಳಿಗೆ ನಿನ್ನೆ ಮಧ್ಯರಾತ್ರಿ ಪಿಕ್ ಅಪ್ ಒಂದರಲ್ಲಿ ಅಕ್ರಮ ಗೋಸಾಗಾಟ ಮಾಡುತ್ತಿದ್ದ ವೇಳೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿ, ಗೋ ಸಾಗಾಟ ವಾಹನವನ್ನು ತಡೆದಿದ್ದಾರೆ.

ನಂತರ ಸ್ಥಳೀಯ ಪೊಲೀಸರ ಸಹಕಾರದಿಂದ ಒಬ್ಬಾತನನ್ನು ಬಂಧಿಸಿದ್ದು, ಸಾಗಾಟ ಮಾಡುತ್ತಿದ್ದ ಪಿಕ್ ಅಪ್ ಮತ್ತು ಮಾರುತಿ 800 ಕಾರನ್ನು ಗೋವು ಸಹಿತವಾಗಿ ಪೋಲಿಸರ ವಶಕ್ಕೆ ನೀಡಲಾಗಿದೆ. ದಾಳಿ ವೇಳೆ ಇಬ್ಬರು ಆರೋಪಿಗಳು ಕತ್ತಲಲ್ಲೇ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

ಆರೋಪಿಗಳು ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಅಕ್ರಮ ದನ ಸಾಗಾಟದಲ್ಲಿ ತೊಡಗಿದ್ದರು ಎನ್ನಲಾಗಿದೆ. ಆದರೆ ಇಂದು ರೆಡ್ ಹ್ಯಾಂಡ್ ಆಗಿ ಬಜರಂಗದಳದ ಕಾರ್ಯಕರ್ತರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.

ಸದ್ಯ ಒಬ್ಬ ಆರೋಪಿಯನ್ನು ಬೆಳ್ತಂಗಡಿ ಪೋಲೀಸರು ಬಂಧಿಸಿದ್ದು, ಪರಾರಿಯಾದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Leave A Reply

Your email address will not be published.