ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯ ಅಪಹರಣ ಪ್ರಕರಣ | ಪ್ರಮುಖ ಆರೋಪಿಯ ಬಂಧನ,ಯುವತಿಯ ರಕ್ಷಣೆ | ಪೊಲೀಸರ ಸಕಾಲಿಕ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ

ಕಾರವಾರ : ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿಯ ಅಪಹರಣ ಪ್ರಕರಣವನ್ನು ಭೇದಿಸಿ ಪ್ರಮುಖ ಆರೋಪಿಯನ್ನು ಬಂಧಿಸಿ, ವಿದ್ಯಾರ್ಥಿನಿಯನ್ನು ರಕ್ಷಿಸಿದ ಪೊಲೀಸರ ಕಾರ್ಯಕ್ಕೆ ಉತ್ತರಕನ್ನಡ ಎಸ್ಪಿ ಸುಮನ್ ಪೆನ್ನೇಕರ್ ಸೇರಿದಂತೆ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ.

ನ.15ರಂದು ಶಿರಸಿಯ ರಾಯಪ್ಪ ಹುಲೇಕಲ್ ಕಾಲೇಜ್ ಕ್ರಾಸ್ ಹತ್ತಿರದ ಶಿರಸಿ – ಬನವಾಸಿ ರಸ್ತೆಯಲ್ಲಿ  ಕಾಲೇಜಿಗೆ ಹೋಗುತ್ತಿದ್ದ ತನ್ನ ಮಗಳನ್ನು ಯಾರೋ ಅಪರಿಚಿತರು ಒಂದು ಕಾರಿನಲ್ಲಿ ಅಪಹರಿಸಿದ್ದಾರೆ ಎಂದು ವಿದ್ಯಾರ್ಥಿನಿಯ ತಾಯಿ ಠಾಣೆಗೆ ನೀಡಿದ ದೂರಿನಂತೆ ಕಾರ್ಯಾಚರಣೆ ನಡೆಸಿದ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರ ತಂಡ ಪ್ರಕರಣದ ಪ್ರಮುಖ ಆರೋಪಿ ಕಾಳಂಗಿ ಸಮೀಪದ ದ್ಯಾಮನಕೊಪ್ಪ ನಿವಾಸಿ ಹೊನ್ನಪ್ಪ ಪುಟ್ಟಪ್ಪ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯು ಯುವತಿಯನ್ನು ಅಪಹರಿಸಿ ಬೆಂಗಳೂರಿನಲ್ಲಿ ಅಕ್ರಮವಾಗಿ ಕೂಡಿಟ್ಟು ಪರಾರಿಯಾಗುವ ಯತ್ನದಲ್ಲಿದ್ದಾಗ ಬೆಂಗಳೂರಿನಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡು, ಅಪಹರಣಕ್ಕೀಡಾದ ಯುವತಿಯನ್ನು ರಕ್ಷಿಸಿದ್ದಾರೆ.

ಪ್ರಕರಣದ ಇತರ ಆರೋಪಿಗಳಾದ ಕಾಳಂಗಿಯ ಬಸವರಾಜ್ ಮತ್ತು ಹುಲ್ಲಪ್ಪ ತಲೆಮರೆಸಿಕೊಂಡಿದ್ದಾರೆ.

ವಿದ್ಯಾರ್ಥಿನಿಯನ್ನು ಮದುವೆಯಾಗುವ ದುರುದ್ದೇಶದಿಂದ ಆರೋಪಿ ಹೊನ್ನಪ್ಪ ಅಪಹರಿಸಿರಿವುದು ತನಿಖೆ ವೇಳೆ ದೃಢಪಟ್ಟಿದೆ.

ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ|ಸುಮನ್ ಡಿ. ಪೆನ್ನೇಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ, ಬದ್ರಿನಾಥ ನಿರ್ದೇಶನದಂತೆ, ಶಿರಸಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ರವಿ ಡಿ  ನಾಯ್ಕ ಹಾಗೂ ಪೊಲೀಸ್ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ಮಾರ್ಗದರ್ಶನದಲ್ಲಿ ಶಿರಸಿ ಗ್ರಾಮೀಣ ಠಾಣೆ ಪಿಎಸ್ಐ ಈರಯ್ಯ ಡಿ.ಎನ್ ಹಾಗೂ ಸಿಬ್ಬಂದಿಗಳಾದ ಮಹಾದೇವ ನಾಯ್ಕ, ಪ್ರದೀಪ ರೇವಣಕರ, ಬಸವರಾಜ ಮ್ಯಾಗೇರಿ, ಸಂಗಪ್ಪ ಹರಿಜನ,  ಗಣಪತಿ ನಾಯ್ಕ, ಸುನೀಲ ಹಡಲಗಿ, ಜಿಮ್ಮು ಸಿಂಧೆ, ಮಹಿಳಾ ಸಿಬ್ಬಂದಿಯವರ ವಿಶೇಷ ತಂಡ  ಈ ಪ್ರಕರಣವನ್ನು ಶೀಘ್ರವಾಗಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕಾರ್ಯಚರಣೆ ಕುರಿತು ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

Leave A Reply

Your email address will not be published.