50,000 ರೂ.ಗೆ ತನ್ನ ಸ್ವಂತ ಮಕ್ಕಳನ್ನು ರಸ್ತೆ ಬದಿಯಲ್ಲಿ ನಿಂತು ಮಾರಾಟ ಮಾಡಿದ ಪೊಲೀಸ್ !! | ಕರುಳು ಹಿಂಡುವ ಈ ವಿಡಿಯೋ ಫುಲ್ ವೈರಲ್

ಇಡೀ ಸಂಸಾರ ಅಂದರೆ ಮಡದಿ, ಮಕ್ಕಳು, ತಂದೆ-ತಾಯಿ , ಸಹೋದರ ಸಹೋದರಿ ಮತ್ತಿತರರ ಬೇಕು ಬೇಡಗಳನ್ನು ನಿಭಾಯಿಸುವವನು ತಂದೆ. ಎಲ್ಲಿಯವರೆಗೆ ಅಂದರೆ ಕೊನೆಯವರೆಗೆ…. ಎಲ್ಲರ ಜವಾಬ್ದಾರಿಯನ್ನು ಹೊತ್ತು ನಿಲ್ಲುವುದು ಆತನ ಹೆಮ್ಮೆಯೂ ಹೌದು, ತಪ್ಪಿಸಿಕೊಳ್ಳಲಾಗದ ಜವಾಬ್ದಾರಿಯೂ ಹೌದು. ಹೀಗಿರುವಾಗ ಇಲ್ಲೊಬ್ಬ ತಂದೆ ತನ್ನ ಮಕ್ಕಳನ್ನು ಮಾರಾಟ ಮಾಡುವ ದೃಶ್ಯ ವೈರಲ್ ಆಗಿದ್ದು, ಇದೀಗ ಎಲ್ಲರ ಅಸಮಾಧಾನಕ್ಕೆ ಕಾರಣವಾಗಿದೆ.

ಪೊಲೀಸ್ ಒಬ್ಬರು ತನ್ನ ಸ್ವಂತ ಮಕ್ಕಳನ್ನು 50,000 ರೂ. ಗೆ ಮಾರಾಟ ಮಾಡಿದ ಕರುಳು ಹಿಂಡುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯಲ್ಲಿ ನಡೆದಿದೆ. ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.

ಘೋಟ್ಕಿ ಜಿಲ್ಲೆಯಲ್ಲಿ ಪೊಲೀಸ್ ತಂದೆಯೊಬ್ಬರು ತಮ್ಮ ಸ್ವಂತ ಮಕ್ಕಳನ್ನು 50,000 ರೂ.ಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಈ ಕರುಳು ಹಿಂಡುವ ವೀಡಿಯೋ ನೋಡಿ ಜನರು ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ವೀಡಿಯೋದಲ್ಲಿ, ಕಾರಾಗೃಹ ಇಲಾಖೆಯ ಪೊಲೀಸ್ ನಿಸಾರ್ ಲಶಾರಿ ಅವರು ರಸ್ತೆಯ ಮಧ್ಯದಲ್ಲಿ ತನ್ನ ಇಬ್ಬರು ಮಕ್ಕಳನ್ನು ನಿಲ್ಲಿಸಿಕೊಂಡು ಕೂಗುತ್ತಿರುತ್ತಾರೆ. ನಂತರ ಕಿರಿಯ ಮಗನನ್ನು ತನ್ನ ಮಡಿಲಲ್ಲಿ ಎತ್ತಿಕೊಂಡು ತನ್ನ ಮಕ್ಕಳನ್ನು 50,000 ರೂ.ಗೆ ಮಾರುತ್ತಿರುವುದಾಗಿ ಕೂಗಿ ಜನರನ್ನು ಕರೆದಿದ್ದಾರೆ.

ಈ ನಿರ್ಧಾರಕ್ಕೆ ಕಾರಣವೇನು?

ಲಶಾರಿಗೆ ತನ್ನ ಮಗನ ವೈದ್ಯಕೀಯ ಚಿಕಿತ್ಸೆಗಾಗಿ ರಜೆಯ ಅಗತ್ಯವಿತ್ತು. ಅವರ ಬಾಸ್ ಬಳಿ ರಜೆ ಕೇಳಿದರೆ, ಅವರು ಅದರ ಬದಲಾಗಿ ಲಂಚವನ್ನು ಕೇಳಿದರು. ಮೇಲಧಿಕಾರಿಗೆ ಲಂಚ ಕೊಡಲು ಸಾಧ್ಯವಾಗದಿದ್ದಾಗ ಅವರ ರಜೆಯನ್ನು ರದ್ದುಪಡಿಸಿ ನಗರದಿಂದ 120 ಕಿ.ಮೀ ದೂರದಲ್ಲಿರುವ ಲರ್ಕಾನಾಗೆ ವರ್ಗಾವಣೆ ಮಾಡಲಾಗಿತ್ತು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಲಂಚ ಕೊಡದಿದ್ದಕ್ಕೆ ಅವರು ನನಗೆ ಈ ಶಿಕ್ಷೆಯನ್ನೇಕೆ ನೀಡಿದರು? ನಾನು ತುಂಬಾ ಬಡವನಾಗಿದ್ದು, ಕಾರಾಗೃಹಗಳ ಇನ್ಸ್ಪೆಕ್ಟರ್ ಜನರಲ್‍ಗೆ ದೂರು ನೀಡಲು ಕರಾಚಿಗೆ ಹೋಗಲೂ ಸಾಧ್ಯವಾಗಲಿಲ್ಲ. ಇಲ್ಲಿನ ಜನರು ತುಂಬಾ ಶಕ್ತಿಶಾಲಿಗಳು ಮತ್ತು ಸಾಮಾನ್ಯವಾಗಿ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ’ ಎಂದು ತಿಳಿಸಿದರು.

ನಾನು ಲಂಚವನ್ನು ಪಾವತಿಸಬೇಕೇ ಅಥವಾ ನನ್ನ ಮಗುವಿನ ಆರೋಗ್ಯಕ್ಕೆ ಹಣ ಪಾವತಿಸಬೇಕೇ? ನಾನು ಲರ್ಕಾನಾದಲ್ಲಿ ಕೆಲಸ ಮಾಡಬೇಕಿತ್ತೇ ಅಥವಾ ನನ್ನ ಮಗುವನ್ನು ಚಿಕಿತ್ಸೆಗಾಗಿ ಕರೆದುಕೊಂಡು ಹೋಗಬೇಕಿತ್ತೇ? ಎಂದು ಬಹಳ ನೋವಿನಿಂದ ಪ್ರಶ್ನಿಸಿದ್ದಾರೆ.

ಈ ಕರುಳು ವೀಡಿಯೋ ವೈರಲ್ ಆಗಿದ್ದು, ತಂದೆಯ ಅಸಹಾಯಕತೆಯನ್ನು ಕಂಡು ನೆಟ್ಟಿಗರು ಎದೆಗುಂದಿದ್ದಾರೆ. ಒಬ್ಬ ವೀಕ್ಷಕರು, ಈ ವೀಡಿಯೋ ನೋಡಿ ತುಂಬಾ ದುಃಖವಾಗಿದೆ. ಅವರು ಅಸಹಾಯಕತೆಯಲ್ಲಿ ಇದೇನು ಮಾಡುತ್ತಿದ್ದಾರೆ? ಎಂದು ಕಮೆಂಟ್ ಮಾಡಿದ್ದಾರೆ.

ವೀಡಿಯೋ ವೈರಲ್ ಆಗುತ್ತಿದ್ದಂತೆ, ಲಶಾರಿಯ ಸ್ಥಿತಿ ಬಗ್ಗೆ ಸಿಂಧ್‍ನ ಸಿಎಂ ಮುರಾದ್ ಅಲಿ ಶಾ ಅವರ ಗಮನಕ್ಕೆ ಬಂದಿದೆ. ನಂತರ ಅವರು ಈ ಸಮಸ್ಯೆಯಲ್ಲಿ ಮಧ್ಯಸ್ಥಿಕೆ ವಹಿಸಿ, ಲಶಾರಿಗೆ ಘೋಟ್ಕಿಯ ಜೈಲಿನಲ್ಲಿ ತನ್ನ ಕೆಲಸದಲ್ಲಿ ಉಳಿಯುವಂತೆ ಮಾಡಿದರು. ಅದು ಅಲ್ಲದೇ ಅವರಿಗೆ 14 ದಿನಗಳ ರಜೆಯನ್ನು ನೀಡುವಂತೆ ಮಾಡಿದರು. ಆದ್ದರಿಂದ ಅವರು ತಮ್ಮ ಮಗುವಿನೊಂದಿಗೆ ಚಿಕಿತ್ಸೆಗಾಗಿ ಇರಲು ಸಾಧ್ಯವಾಗಿದೆ. ಇದರಿಂದ ಖುಷಿಗೊಂಡ ಲಶಾರಿ ಅವರು ಅಲಿ ಶಾ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Leave A Reply

Your email address will not be published.