ಕಡಬ : ಕುಸಿಯುವ ಸ್ಥಿತಿಯಲ್ಲಿ ಕಳಾರ ಅಂಗನವಾಡಿ ಕಟ್ಟಡ, ಪುಟಾಣಿಗಳ ಸ್ಥಳಾಂತರ
ಪೂರ್ಣಗೊಳ್ಳದ ಹೊಸ ಕಟ್ಟಡ, ತ್ರಿಶಂಕು ಸ್ಥಿತಿಯಲ್ಲಿ ಅಂಗನವಾಡಿ ಕೇಂದ್ರ

15 ದಿನದೊಳಗೆ ಹೊಸ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಪ್ರತಿಭಟನೆ-ಎಚ್ಚರಿಕೆ

ಕಡಬ: ಸುಮಾರು 30ವರ್ಷ ಹಳೆಯದಾದ ಕಟ್ಟಡ ಇದೀಗ ಕೆಲವು ವರ್ಷಗಳಿಂದ ಶಿಥಿಲಗೊಂಡು ಈಗವೋ ಮತ್ತೆಯೋ ಬೀಳುವ ಸ್ಥಿತಿಯಲ್ಲಿದೆ. ಅಂಗನವಾಡಿ ಪುಟಾಣಿಗಳನ್ನು ಸುರಕ್ಷತೆಯ ದೃಷ್ಟಿಯಿಂದ ಕಿ.ಪ್ರಾ.ಶಾಲೆಯ ಕೊಠಡಿಯೊಂದಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ಸ್ಥಳಾಂತರಗೊಂಡ ಕಟ್ಟಡದ ಛಾವಣಿಯೂ ಅಪಾಯದ ಸ್ಥಿತಿಯಲ್ಲಿದೆ. ಇತ್ತ ಹೊಸ ಕಟ್ಟಡ ನಿರ್ಮಾಣವಾಗಿದೆಯಾದರೂ ಕಾಮಗಾರಿ ವಿಳಂಬದಿಂದ ಅದು ಪೂರ್ಣಗೊಂಡಿಲ್ಲ, ಈ ಹಿನ್ನಲೆಯಲ್ಲಿ ಪುಟಾಣಿಗಳಿಗೆ ಹಳೆಯ ಕಟ್ಟಡವೂ ಇಲ್ಲದೆ, ಹೊಸಕಟ್ಟಡವೂ ಪೂರ್ಣಗೊಳ್ಳದೆ ಕಿ.ಪ್ರಾ.ಶಾಲೆಯ ಛಾವಣಿ ಶಿಥಿಲಗೊಂಡ ಕೊಠಡಿಯಲ್ಲಿ ಇರುವಂತಾಗಿದೆ. ಒಂದು ವೇಳೆ ೧೫ ದಿನದೊಳಗೆ ಕಾಮಗಾರಿ ಪೂರ್ಣಗೊಂಡು ಅಂಗನವಾಡಿ ಕೇಂದ್ರ ಹೊಸ ಕಟ್ಟಡದಲ್ಲಿ ಪ್ರಾರಂಭವಾಗದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ಕಡಬ ಗ್ರಾ.ಪಂ. ಮಾಜಿ ಅಧ್ಯಕ್ಷ ಹನೀಫ್ ಕೆ.ಎಂ. ಎಚ್ಚರಿಸಿದ್ದಾರೆ.

ಕಳಾರ ಅಂಗನವಾಡಿ ಕಟ್ಟಡ ಶಿಥಿಲಗೊಂಡಿರುವ ಬಗ್ಗೆ ದೂರುಗಳು ಇಂದು ನಿನ್ನೆಯದಲ್ಲ, ಕಳೆದ ಹಲವಾರು ವರ್ಷಗಳಿಂದ ಹೊಸ ಕಟ್ಟಡದ ಬೇಡಿಕೆ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಕಡಬ ಗ್ರಾ.ಪಂ. ಅವಧಿಯಲ್ಲಿ ಉದ್ಯೋಗ ಖಾತರಿ ಯೋಜನೆಯಿಂದ ೫ ಲಕ್ಷ ಮತ್ತು ಎಂ.ಆರ್.ಪಿ.ಎಲ್.ಯವರಿAದ ೫ ಲಕ್ಷ ಅನುದಾನದಿಂದ ಕಾಮಗಾರಿಯನ್ನು ಪ್ರಾರಂಭಿಸಲಾಗಿ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇನ್ನುಳಿದಂತೆ ಟೈಲ್ಸ್ ಅಳವಡಿಕೆ, ಕಿಟಕಿ ಸೇರಿದಂತೆ ಸಣ್ಣ ಸಣ್ಣ ಕೆಲಸಗಳು ಬಾಕಿ ಉಳಿದು ಹಲವಾರು ಸಮಯವೇ ಕಳೆದಿದೆ. ಈ ಕಾಮಗಾರಿ ಪೂರ್ಣಗೊಳಿಸದಿರುವುದರಿಂದ ಇದರಲ್ಲಿ ಅಂಗನವಾಡಿ ಪ್ರಾರಂಬಿಸಲು ಸಾಧ್ಯವಾಗುತ್ತಿಲ್ಲ.

ಅಪಾಯದ ಸ್ಥಿತಿಯಲ್ಲಿ ಹಳೆಯ ಅಂಗನವಾಡಿ ಕಟ್ಟಡ:
1991ರಲ್ಲಿ ಅಂದಿನ ಮಂಡಲ ಪಂಚಾಯತ್ ಅವಧಿಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಿದ್ದು ಸುಮಾರು 30ವರ್ಷಗಳೇ ಕಳೆದಿದೆ. ಇದೀಗ ಕೆಲವು ವರ್ಷಗಳಿಂದ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ.

ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಬರಲಾಗಿದೆ. ಈ ಹಳೆ ಕಟ್ಟಡದಿಂದ ಪುಟಾಣಿಗಳನ್ನು ಸಮೀಪವೇ ಇರುವ ಕಿ.ಪ್ರಾ.ಶಾಲೆಯ ಕೊಠಡಿಗೆ ಸ್ಥಳಾಂತಾರಿಸಲಾಗಿದೆ. ಈಗ ಹಳೆ ಅಂಗನವಾಡಿಯ ಕಟ್ಟಡ ಖಾಲಿಯಾಗಿದ್ದು, ಕುಸಿದು ಬೀಳುವ ಸ್ಥಿತಿಯಲ್ಲಿದೆ, ಅದು ಕುಸಿದು ಬಿಳುವ ಮುನ್ನ ಎಚ್ಚರ ವಹಿಸಿ ಅದನ್ನು ನೆಲಸಮ ಮಾಡುವುದು ಒಲಿತು.

ಬಾಣಲೆಯಿಂದ ಬೆಂಕಿಗೆ:
ಕುಸಿಯುವ ಹಂತದಲ್ಲಿರುವ ಕಟ್ಟಡದಿಂದ ಪುಟಾಣಿಗಳನ್ನು ಸಮೀಪವೇ ಇರುವ ಕಿ.ಪ್ರಾ.ಶಾಲೆಯ ಕೊಠಡಿಯೊಂದಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ, ಆದರೆ ಆ ಶಾಲಾ ಕೊಠಡಿಯ ಛಾವಣಿಯೂ ಶಿಥಿಲಗೊಂಡಿದ್ದು, ಮಾಡಿನ ರೀಪುಗಳು ತುಂಡಾಗಿ ಹಂಚು ಈಗಲೂ ಮತ್ತೆಯೂ ಬೀಳುವ ಸ್ಥಿತಿಯಲ್ಲಿದೆ, ಇಲ್ಲಿ ಪುಟಾಣಿಗಳು ಎಷ್ಟು ಸುರಕ್ಷಿತ ಎನ್ನುವುದೇ ಪ್ರಶ್ನೆಯಾಗಿದೆ. ಹಳೆ ಕಟ್ಟಡದಿಂದ ತಾತ್ಕಾಲಿಕವಾಗಿ ಕಿ.ಪ್ರಾ.ಶಾಲೆಯ ಕೊಠಡಿಗೆ ಸ್ಥಳಾಂತರಿಸಲಾಗಿದ್ದರೂ ಇಲ್ಲಿ ಸುರಕ್ಷತೆಯ ದೃಷ್ಟಿಯಿಂದ ಅಂಗನವಾಡಿ ಕೇಂದ್ರ “ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ” ಎಂಬ ಗಾದೆ ಮಾತಿನಂತಾಗಿದೆ.

ಇನ್ನೂ ಪೂರ್ಣಗೊಳ್ಳದ ಹೊಸ ಕಟ್ಟಡ ಕಾಮಗಾರಿ:
ಸುಮಾರು 10 ಲಕ್ಷ ರೂ. ಅನುದಾನದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿದ್ದು, ಟೈಲ್ಸ್, ಕಿಟಕಿ ಸೇರಿದಂತೆ ಹಲವಾರು ಸಣ್ಣ ಸಣ್ಣ ಕೆಲಸಗಳು ಪೂರ್ಣಗೊಳ್ಳದಿರುವುದರಿಂದ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲು ಸಾಧ್ಯವಾಗಿಲ್ಲ, ಈ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದಿರಲು ಗುತ್ತಿಗೆದಾರರ ವಿಳಂಬವೇ ಕಾರಣವೆನ್ನಲಾಗಿದೆ. ಕಟ್ಟಡದ ಹೆಚ್ಚಿನ ಕೆಲಸವನ್ನು ಪೂರ್ಣಗೊಳಿಸಿದ ಗುತ್ತಿಗೆದಾರರು ಬಾಕಿ ಉಳಿದ ಕೆಲಸವನ್ನು ಮುಗಿಸಿದರೆ ಈ ಅಂಗನವಾಡಿಯ ಸಮಸ್ಯೆ ನಿವಾರಣೆಯಾಗುತ್ತದೆ. ಈ ಬಗ್ಗೆ ಮಾಹಿತಿಯನ್ನು ಪಡೆಯಲು ಪಟ್ಟಣ ಪಂಚಾಯತ್ ಇಂಜಿನಿಯರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ.

ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ- ಶ್ರೀಲತಾ, ಸಿಡಿಪಿಒ ಪುತ್ತೂರು
ಈ ಬಗ್ಗೆ ಪುತ್ತೂರು ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ರೀಲತಾ ಅವರು ಪ್ರತಿಕ್ರಿಯೆ ನೀಡಿ, ಕಳಾರ ಅಂಗನವಾಡಿಯ ಹೊಸ ಕಟ್ಟಡದ ಕಾಮಗಾರಿ ವಿಳಂಬದಿಂದ ಸಮಸ್ಯೆ ಆಗಿದೆ, ಆದರೂ ಸಂಬಂಧಪಟ್ಟವರಲ್ಲಿ ಮಾತನಾಡಲಾಗಿದ್ದು, ವಾರದೊಳಗೆ ಕಾಮಗಾರಿ ಮುಗಿಸಿಕೊಡುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ. ನಾವು ಕೂಡ ಶಿಥಿಲಗೊಂಡ ಹಳೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ಸಾಕಷ್ಟು ಪ್ರಯತ್ನ ಮಾಡುತ್ತಲೆ ಬಂದಿದ್ದೇವೆ, ಈ ಬಗ್ಗೆ ನಮ್ಮ ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದೆ, ಸಂಬಂಧಪಟ್ಟ ಇಂಜಿನಿಯವರಲ್ಲಿ ಮಾತನಾಡಲಾಗಿದೆ, ವಾರದೊಳಗೆ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ಇದೆ ಎಂದು ಹೇಳಿದ್ದಾರೆ.

ಹೊಸ ಅಂಗನವಾಡಿಯ ಕಾಮಗಾರಿ 15ದಿನದೊಳಗೆ ಪೂರ್ಣಗೊಳಿಸದಿದ್ದರೆ
ಪ್ರತಿಭಟನೆ-ಹಾಜಿ ಹನೀಫ್ ಕೆ.ಎಂ. ಎಚ್ಚರಿಕೆ

ಹೊಸ ಅಂಗನವಾಡಿ ಕಟ್ಟಡದ ಕಾಮಗಾರಿಯನ್ನು 15 ದಿನದೊಳಗೆ ಪೂರ್ಣಗೊಳಿಸಿ, ಅಲ್ಲಿ ಅಂಗನವಾಡಿ ಕೇಂದ್ರ ಪ್ರಾರಂಬಿಸದಿದ್ದರೆ, ಪುಟಾಣಿಗಳ ಪೋಷಕರು, ಸ್ಥಳೀಯರು ಸೇರಿಕೊಂಡು ಪ್ರತಿಭಟನೆಯನ್ನು ನಡೆಸಲಾಗುವುದು, ಅಧಿಕಾರಿಗಳು ಈ ಕಾಮಗಾರಿ ಆದಷ್ಟು ಬೇಗ ಮಾಡಿಸುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕಡಬ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಜಿ ಹನೀಫ್ ಕೆ.ಎಂ. ಅವರು ಎಚ್ಚರಿಸಿದ್ದಾರೆ, ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಿ, ಕಳಾರ ಅಂಗನವಾಡಿಯಲ್ಲಿ ಸುಮಾರು ೪೦ರಷ್ಟು ಪುಟಾಣಿಗಳು ಇದ್ದಾರೆ. ಅಂಗನವಾಡಿ ಕಟ್ಟಡವು ಕಳೆದ ವರ್ಷ ಗೋಡೆ ಬಿರುಕು ಬಿಟ್ಟಿದ್ದು ಈ ಬಗ್ಗೆ ನಾನು ಹಲವಾರು ಬಾರಿ ಸಂಬಂಧ ಪಟ್ಟ ಇಲಾಖಾಧಿಕಾರಿಗಳಿಗೆ ಮೌಖಿಕವಾಗಿ ಮನವಿ ಮಾಡಿದ್ದೆನೆ. ಅಂಗನವಾಡಿ ಶಾಲೆ ಆರಂಭಗೊಂಡಿದ್ದು. ಮಕ್ಕಳ ಹಿತ ದೃಷಿಯಿಂದ ಹೊಸ ಕಟ್ಟಡದ ಕಾಮಾಗಾರಿಯನ್ನು ಗುತ್ತಿಗೆದಾರರು ವಿಳಂಬ ಮಾಡದೆ ಕೆಲಸ ಮುಗಿಸಿಕೊಡಬೇಕು, ಸಂಬಂಧ ಪಟ್ಟ ಇಲಾಖೆಗಳು ಮೌನ ವಹಿಸುದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಿದೆ 15 ದಿನದೊಳಗೆ ಅಂಗನವಾಡಿ ಹೊಸ ಕಟ್ಟಡದಲ್ಲಿ ಪ್ರಾರಂಭವಾಗದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ಅವರು ತಿಳಿಸಿದ್ದಾರೆ.

Leave A Reply

Your email address will not be published.