ಟಿ-20 ವಿಶ್ವಕಪ್ ನ ಸೆಮಿಫೈನಲ್ ಪಂದ್ಯದಲ್ಲಿ ಪ್ರಮುಖ ಕ್ಯಾಚ್ ಕೈ ಚೆಲ್ಲಿದ ಪಾಕಿಸ್ತಾನದ ಬೌಲರ್ ಗೆ ಜೀವ ಬೆದರಿಕೆ | ರಕ್ಷಣೆ ಕೇಳಿ ಪ್ರಧಾನಿ ಮೋದಿಗೆ ಪತ್ರ ಬರೆದ ಕ್ರಿಕೆಟರ್ ಪತ್ನಿ !!

ಟಿ-ಟ್ವೆಂಟಿ ವಿಶ್ವಕಪ್ ಫೈನಲ್ ಪಂದ್ಯವು ನಿನ್ನೆ ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದಿದ್ದು, ಆಸ್ಟ್ರೇಲಿಯಾ ಚೊಚ್ಚಲ ಟಿ-20 ವಿಶ್ವಕಪ್ಬಿಟ್ಟಿದ್ದ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡಿದೆ. ಸೆಮಿಫೈನಲ್ ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ ಇದೀಗ ಗೆಲುವಿನ ನಗೆ ಬೀರಿದೆ.

ಆದರೆ ಎಲ್ಲಾ ಪಂದ್ಯಗಳಲ್ಲಿ ಗೆದ್ದು ಸೆಮಿಫೈನಲಿಗೆ ದಾಪುಗಾಲಿರಿಸಿದ್ದ ಪಾಕಿಸ್ತಾನವು ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾದ ಎದುರು ಮುಗ್ಗರಿಸಿತ್ತು. ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದಿರುವ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳಿಂದ ತಮಗೆ ಹಾಗೂ ಮಗುವಿಗೆ ಜೀವ ಭಯ ಇರುವುದಾಗಿ ಪಾಕಿಸ್ತಾನದ ವೇಗಿ ಹಸನ್ ಅಲಿ ಪತ್ನಿ ಶಾಮಿಯಾ ಆರ್ಜೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಸೆಮಿಫೈನಲ್ ಪಂದ್ಯದಲ್ಲಿ ತಮ್ಮ ಪತಿ ಹಸನ್ ಪ್ರಮುಖ ಕ್ಯಾಚ್ ಬಿಟ್ಟಿದ್ದರು. ಇದೇ ಕಾರಣಕ್ಕೆ ಪಾಕಿಸ್ತಾನ ಸೋತಿದೆ ಎಂದು ಎಲ್ಲರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕುಟುಂಬದವರಿಗೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ. ನನಗೆ ಇಲ್ಲಿ ರಕ್ಷಣೆ ಇಲ್ಲದಾಗಿದೆ. ದಯವಿಟ್ಟು ಹೇಗಾದರೂ ಮಾಡಿ ರಕ್ಷಣೆ ಕೊಡಿ ಎಂದು ಶಾಮಿಯಾ ಪತ್ರದಲ್ಲಿ ತಿಳಿಸಿದ್ದಾರೆ.

ಅಷ್ಟಕ್ಕೂ ಇವರು ಭಾರತದ ಪ್ರಧಾನಿಗೆ ರಕ್ಷಣೆ ಕೇಳಲು ಕಾರಣವೇನೆಂದರೆ ಶಾಮಿಯಾ ಹರಿಯಾಣದವರಂತೆ. ಅದಕ್ಕೆ ‘ನಾನು ಭಾರತೀಯಳು, ನಾನು ಭಾರತದವಳು ಎನ್ನಲು ತುಂಬಾ ಹೆಮ್ಮೆ ಪಡುತ್ತೇನೆ. ನಾನು ಪಾಕಿಸ್ತಾನದವನನ್ನು ಮದುವೆ ಆಗಿದ್ದೇನೆ ಎಂದ ಮಾತ್ರಕ್ಕೆ ಭಾರತವನ್ನು ಇಷ್ಟಪಡದಿರಲು ಸಾಧ್ಯವಿಲ್ಲ. ಈ ಮೊದಲು ನನ್ನ ಕುಟುಂಬ ಪೂರ್ತಿ ಹರಿಯಾಣದಲ್ಲಿ ನೆಲೆಸಿತ್ತು. ನಾನು ದುಬೈನ ಏರ್‌ಲೈನ್ಸ್ ಒಂದರಲ್ಲಿ ಇಂಜಿನಿಯರ್ ಆಗಿದ್ದೆ. ಆ ಸಂದರ್ಭದಲ್ಲಿ ಹಸನ್ ಅವರ ಪರಿಚಯವಾಗಿ ಮದುವೆಯಾಗಿದ್ದೇನೆ. ನಾನು ಭಾರತೀಯಳು, ನನಗೆ ಸಹಾಯ ಮಾಡಿ’ ಎಂದು ಅವರು ಕೋರಿದ್ದಾರೆ. ಜೊತೆಗೆ, ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರ ಬಳಿ ಟ್ವಿಟ್ಟರ್ ಮೂಲಕವೂ ಇವರು ಮನವಿ ಮಾಡಿಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ 176 ರನ್ ಗಳಿಸಿತ್ತು. ಜಯಗಳಿಸಲು ಆಸ್ಟ್ರೇಲಿಯಾಕ್ಕೆ 177 ರ ಟಾರ್ಗೆಟ್ ನೀಡಿತ್ತು. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ವೇಡ್ ಅವರು ಮೂರು ಬಾರಿ ಸಿಕ್ಸರ್ ಬಾರಿಸಿದ್ದರು. ಮೊದಲ ಬಾಲ್ ಗೆ ಹಸನ್ ಒಂದು ಕ್ಯಾಚ್ ಬಿಟ್ಟರು. ಇದೇ ಕಾರಣಕ್ಕೆ ಅವರಿಗೆ ಸಿಕ್ಸ್ ಬಾರಿಸಲು ಸಾಧ್ಯವಾಗಿ ಆಸ್ಟ್ರೇಲಿಯಾ ಗೆದ್ದಿದೆ ಎನ್ನುವುದು ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳ ಆರೋಪ. ಆದ್ದರಿಂದ ಕುಟುಂಬಸ್ಥರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ.

ಪಾಕಿಸ್ತಾನದ ಪ್ರಧಾನಿ ಎಲ್ಲಿ ಹೋಗಿದ್ದಾನೆ?? ಅವನಲ್ಲಿ ರಕ್ಷಣೆ ಕೇಳಬೇಕಲ್ಲವೇ?? ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ರಕ್ಷಣೆ ಎಂದಾಗ ನಿಮಗೆಲ್ಲಾ ಭಾರತ ನೆನಪಾಗುತ್ತದೆಯೇ?? ಪಾಕಿಸ್ತಾನಿಯನ್ನು ಮದುವೆಯಾಗಿ ಇದೀಗ ಭಾರತದ ಬಳಿ ರಕ್ಷಣೆ ಕೇಳುತ್ತಿರುವುದಕ್ಕೆ ನಾಚಿಕೆಯಾಗುವುದಿಲ್ಲವೇ?? ಎಂದು ಚಾಟಿ ಬೀಸಿದ್ದಾರೆ.

Leave A Reply

Your email address will not be published.