ಮಂಗಳೂರು : ಲಾರಿಯಲ್ಲಿದ್ದ ಗ್ರಾನೈಟ್ ಮೈಮೇಲೆ ಬಿದ್ದು ಯುವಕ ಸಾವು

ಮಂಗಳೂರು: ಲಾರಿಯಲ್ಲಿದ್ದ ಗ್ರಾನೈಟ್ ಆಕಸ್ಮಿಕವಾಗಿ ಮೈಮೇಲೆ ಬಿದ್ದು, ಕಟ್ಟಡ ನಿರ್ಮಾಣದ ರೈಟರ್ ಆಗಿದ್ದ ಜೆಪ್ಪುವಿನ ಯುವಕನೋರ್ವ ಮೃತಪಟ್ಟ ಘಟನೆ ಅತ್ತಾವರದಲ್ಲಿ ಶನಿವಾರ ರಾತ್ರಿ ನಡೆದಿದೆ.

ಮಂಗಳೂರಿನ ಜೆಪ್ಪು ನಿವಾಸಿ ಹಮೀದ್ ಎಂಬವರ ಪುತ್ರ ಅಬ್ದುರಹ್ಮಾನ್ ರಿಲ್ವಾನ್(30) ಎಂಬವರೇ ಮೃತಪಟ್ಟ ದುರ್ದೈವಿ ಯುವಕ.

ಶನಿವಾರ ಅತ್ತಾವರದಲ್ಲಿ ಕಟ್ಟಡವೊಂದು ನಿರ್ಮಾಣ ಹಂತದಲ್ಲಿದ್ದು,ಈ ಕಟ್ಟಡಕ್ಕೆ ಗ್ರಾನೈಟ್ ಅಳವಡಿಸಲೆಂದು ರಾಜಸ್ಥಾನದಿಂದ ಲಾರಿಯಲ್ಲಿ ಗ್ರಾನೈಟ್ ತರಲಾಗಿತ್ತು.

ಈ ವೇಳೆ ಕಟ್ಟಡದ ರೈಟರ್ ಆಗಿದ್ದ ರಿಲ್ವಾನ್ ರಲ್ಲಿ ಗ್ರಾನೈಟ್‌ನ ಫೋಟೊ ತೆಗೆಯಲು ಕಟ್ಟಡದ ಸೂಪರ್ ವೈಸರ್ ಸೂಚಿಸಿದ್ದಾರೆನ್ನಲಾಗಿದೆ.

ಅದರಂತೆ ಫೋಟೊ ತೆಗೆಯಲು ಅವರು ಲಾರಿಯ ಹಿಂಬದಿಗೆ ತೆರಳಿದ್ದರೆನ್ನಲಾಗಿದೆ. ಈ ವೇಳೆ ಲಾರಿಯಲ್ಲಿದ್ದ ಗ್ರಾನೈಟ್ ಏಕಾಏಕಿ ರಿಲ್ವಾನ್ ಅವರ ಮೈಮೇಲೆ ಬಿದ್ದು, ಗಂಭೀರ ಗಾಯಗೊಂಡರು.

ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.