ಎಂ.ಎನ್‌.ಆರ್ ವಿಧಾನ ಪರಿಷತ್ ಪಕ್ಷೇತರ ಅಭ್ಯರ್ಥಿ : ಗೆಲುವಿಗಾಗಿ ಸವಣೂರಿನಲ್ಲಿ ವಿಶೇಷ ಪೂಜೆ

ಸವಣೂರು: ಡಿ. 10ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿರುವ ಸಹಕಾರ ಕ್ಷೇತ್ರದ ದಿಗ್ಗಜ ಹಾಗೂ ದ.ಕ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್‌ ಅವರ ಗೆಲುವಿಗಾಗಿ ದ.ಕ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಹಾಗೂ ಹಿರಿಯ ಸಹಕಾರಿ ಸವಣೂರು ಕೆ.ಸೀತಾರಾಮ ರೈ ಅವರ ನೇತೃತ್ವದಲ್ಲಿ ಸವಣೂರು ಜಿನ ಬಸದಿಯಲ್ಲಿ ಮಾತೆ ಪದ್ಮಾವತಿ ದೇವಿಗೆ ವಿಶೇಷ ಪ್ರಾರ್ಥನೆ ಮತ್ತು ಪೂಜೆಯನ್ನು ಸಲ್ಲಿಸಲಾಯಿತು.

ಜಿನ ಬಸದಿಯ ಅರ್ಚಕ ಶ್ರೇಯಾಂಸ್ ಕುಮಾರ್ ಇಂದ್ರ ಅವರು ಪೂಜೆಯನ್ನು ನೇರವೇರಿಸಿದರು. ಬಳಿಕ ಮಾತನಾಡಿದ ಸವಣೂರು ಸೀತಾರಾಮ ರೈ ಅವರು ನಾವು ಸಹಕಾರಿಗಳು, ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ಬರಬೇಕು ಎಂಬ ನೆಲೆಯಲ್ಲಿ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಡಾ.ಎಂ.ಎನ್.ರಾಜೇಂದ್ರಕುಮಾರ್‌ ಸ್ಪರ್ಧೆ ಮಾಡುತ್ತಿದ್ದಾರೆ. ಅವರ ಗೆಲುವಿಗಾಗಿ ನಾವು ಸಹಕಾರಿಗಳ ನೆಲೆಯಲ್ಲಿ ಮಾತೆ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದ್ದೇವೆ ಎಂದರು.

ಸವಣೂರು ಜಿನ ಬಸದಿಯ ಆಡಳಿತ ಸಮಿತಿಯ ಅಧ್ಯಕ್ಷ ಶತ್ರುಂಜಯ ಅರಿಗ ಬೆಳಂದೂರುಗುತ್ತು ,ಸವಣೂರಿನ ಹಿರಿಯ ಉದ್ಯಮಿ ಸವಣೂರು ಎನ್.ಸುಂದರ ರೈ, ಬೆನಸ ರಬ್ಬರ್ ಸೊಸೈಟಿ ಅಧ್ಯಕ್ಷ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ದ.ಕ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸವಣೂರು ಶಾಖಾ ಮ್ಯಾನೇಜರ್ ವಿಶ್ವನಾಥ್, ಆಸಿಸ್ಟೆಂಟ್ ಮ್ಯಾನೇಜರ್ ಸತೀಶ್ ಎನ್.ಆರ್, ಕಸ್ತೂರಿಕಲಾ ಎಸ್ ರೈ ಸವಣೂರು ಮತ್ತಿತರರು ಉಪಸ್ಥಿತರಿದ್ದರು.

Leave A Reply

Your email address will not be published.