ಅಕಾಲಿಕ ಮರಣ ಹೊಂದಿದ ಪೋಷಕರ ವಿವಾಹಿತ ಹೆಣ್ಣುಮಕ್ಕಳು ಕೂಡಾ ಇನ್ನು ಮುಂದೆ ಸರ್ಕಾರಿ ನೌಕರಿ ಪಡೆಯಲು ಅರ್ಹರು!! | “ಅವಲಂಬಿತ ಹೆಣ್ಣುಮಕ್ಕಳು” ವ್ಯಾಖ್ಯಾನವನ್ನು ವಿಸ್ತರಿಸಿದ ‌ಸರ್ಕಾರ

ಉತ್ತರಪ್ರದೇಶದಲ್ಲಿ ಮುಂದಿನ ವರ್ಷ ನಡೆಯುವ ಚುನಾವಣೆ ಮುಂದಿಟ್ಟುಕೊಂಡು ಯೋಗಿ ಸರ್ಕಾರ ಇದೀಗ ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಪೋಷಕರ ಅವಲಂಬಿತರ ಕೋಟಾದಡಿ ಅವರ ವಿವಾಹಿತ ಹೆಣ್ಣುಮಕ್ಕಳಿಗೂ ಸರ್ಕಾರಿ ನೌಕರಿ ನೀಡುವ ಮಹತ್ವದ ನಿರ್ಧಾರವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಕೈಗೊಂಡಿದೆ.

ಸರ್ಕಾರಿ ಸೇವೆಯಲ್ಲಿ ಅವಧಿ ಇನ್ನೂ ಇದ್ದು ಸರ್ಕಾರಿ ನೌಕರಿಯಲ್ಲಿರುವ ಪೋಷಕರು ಸಾವಿಗೀಡಾದಾದರೆ, ಅವರ ವಿವಾಹಿತ ಹೆಣ್ಣುಮಕ್ಕಳು ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ಪಡೆಯಲು ಅರ್ಹರಾಗಿರುತ್ತಾರೆ ಎಂಬ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ವಿಧಾನಸಭಾ ಚುನಾವಣೆಗೂ ಮುನ್ನ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮಹಿಳಾ ಪರವಾಗಿ ಪ್ರಚಾರ ನಡೆಸುತ್ತಿದೆ. ಇದೇ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮಹಿಳೆಯರ ಪರವಾಗಿ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.

ಈವರೆಗೆ, ಮೃತ ಸರ್ಕಾರಿ ನೌಕರರ ಅವಲಂಬಿತ ಪತ್ನಿ, ವಿವಾಹಿತ/ಅವಿವಾಹಿತ ಪುತ್ರ ಮತ್ತು ಅವಿವಾಹಿತ ಪುತ್ರಿಗೆ ಮಾತ್ರ ಅನುಕಂಪದ ಆಧಾರದಲ್ಲಿ ಸರ್ಕಾರಿ ಕೆಲಸ ನೀಡಲಾಗುತ್ತಿತ್ತು. ಆ ಸಾಲಿಗೆ ವಿವಾಹಿತೆಯರನ್ನು ಸೇರಿಸುವ ಮೂಲಕ “ಅವಲಂಬಿತ ಹೆಣ್ಣುಮಕ್ಕಳು” ವ್ಯಾಖ್ಯಾನವನ್ನು ಸಂಪುಟ ವಿಸ್ತರಿಸಿದೆ.

ಸರ್ಕಾರಿ ನೌಕರಿಯಲ್ಲಿರುವ ಪೋಷಕರು ಮೃತಪಟ್ಟರೆ ಅವರ ಮನೆಯಲ್ಲಿ ಬೇರೆಯವರು ನೌಕರಿಯನ್ನು ನಿರಾಕರಿಸಿದರೆ, ಅದೇ ಕುಟುಂಬದ ವಿವಾಹಿತೆ ನೌಕರಿ ಪಡೆಯಲು ಅರ್ಹರಾಗಿರುತ್ತಾಳೆ ಎಂದು ಸರ್ಕಾರದ ವಕ್ತಾರ ತಿಳಿಸಿದ್ದಾರೆ. ಮರಣ ಹೊಂದಿದ ಸರ್ಕಾರಿ ನೌಕರರ ನಿಯಮ 2021ರಲ್ಲಿ 12ನೇ ತಿದ್ದುಪಡಿಯಾಗಿ ಪ್ರಸ್ತಾವನೆಯನ್ನು ಮಂಡಿಸಲಾಗಿದೆ.

ವಿವಾಹಿತ ಹೆಣ್ಣುಮಕ್ಕಳನ್ನು ಅನುಕಂಪದ ಆಧಾರದ ಮೇಲೆ ಪೋಷಕರ ಹುದ್ದೆಗೆ ನೇಮಕ ಮಾಡುವ ನಿಯಮಗಳಲ್ಲಿ “ಕುಟುಂಬ” ಎಂಬ ವ್ಯಾಖ್ಯಾನದಿಂದ ಹೊರಗಿಟ್ಟಿರುವುದು ಅಸಂವಿಧಾನಿಕ. ಅಲ್ಲದೇ ಸಂವಿಧಾನದ 14 ಮತ್ತು 15ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಈ ವರ್ಷದ ಆರಂಭದಲ್ಲಿ ಅಭಿಪ್ರಾಯಪಟ್ಟಿತ್ತು.

Leave A Reply

Your email address will not be published.