ಕಾಂಗ್ರೆಸ್ ಬಿಜೆಪಿ ವಾಟ್ಸಪ್ ಗ್ರೂಪುಗಳಲ್ಲಿ ಒಂದೇ ಸುದ್ದಿ |
ಪಕ್ಷ ಬೇರೆಯಾದ್ರೂ ಗುಣಕ್ಕೆ ಮತ್ಸರವಿಲ್ಲ ಎನ್ನುತ್ತಲೇ ಮೋದಿಯನ್ನು ಹೊಗಳಿದ ಪ್ರಮೋದ್ ಮಧ್ವರಾಜ್ ಹೇಳಿಕೆ ಇಂದಿನ ಚರ್ಚಾವಸ್ತು !!

ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ನಾಯಕ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಹಿರಂಗವಾಗಿ ಗುಣಗಾನ ಮಾಡಿದ್ದಾರೆ. ಈ ವಿಚಾರ ಬಿಜೆಪಿ ಕಾಂಗ್ರೆಸ್ ವಾಟ್ಸಾಪ್ ಗ್ರೂಪಲ್ಲಿ ಪರ ವಿರೋಧ ಚರ್ಚೆ ಶುರುವಾಗಿದೆ. ಕರಾವಳಿ ಕಾಂಗ್ರೆಸ್ಸಿನಲ್ಲಿ ಚರ್ಚೆ ಕಾವೇರಿದ್ದು ಹೊಗೆ ಆಡಲು ಕಾರಣವಾಗಿದೆ.

ಕಳೆದ ವರ್ಷದ ವೃಂದಾವನಸ್ಥರಾದ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉಡುಪಿಗೆ ಆಗಮಿಸಿದ್ದಾರೆ. ಗುರುವಾರ ಸಂಜೆ ಪ್ರಶಸ್ತಿ ಮತ್ತು ಶ್ರೀಗಳ ಸ್ವಾಗತ ಸಮಾರಂಭದಲ್ಲಿ ಅಷ್ಟಮಠಾಧೀಶರು, ಜನಪ್ರತಿನಿಧಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.

ಈ ಸಂದರ್ಭ ನಡೆದ ಸಭೆಯಲ್ಲಿ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಭಾಗಿಯಾಗಿ ಭಾಷಣ ಮಾಡಿದರು. ಪದ್ಮವಿಭೂಷಣ ಇವತ್ತು ಸ್ವಾಮೀಜಿಯವರನ್ನು ಹುಡುಕಿಕೊಂಡು ಬಂದಿದೆ. ಹಿಂದೆ ಎಲ್ಲಾ ಅರ್ಜಿ ಹಾಕಿದವರಿಗೆ ಪ್ರಶಸ್ತಿ ಕೊಡುವ ಕ್ರಮ ಇತ್ತು. ಇವತ್ತು ನರೇಂದ್ರ ಮೋದಿಯವರ ಸರ್ಕಾರ ಬಂದ ಮೇಲೆ ಪ್ರಶಸ್ತಿ ಅರ್ಹರನ್ನು ಹುಡುಕಿಕೊಂಡು ಹೋಗುವಂತಹ ಸಂದರ್ಭ. ಪಕ್ಷ ಬೇರೆಯಾದರೂ ಗುಣಕ್ಕೆ ಮತ್ಸರ ಇಲ್ಲ ಎಂದು ಹೇಳಿದರು.

ನಾನು ವಿರೋಧ ಪಕ್ಷದಲ್ಲಿ ಇರುವವನು. ಆದರೂ ಅವರ ಒಳ್ಳೆಯ ಕೆಲಸಗಳನ್ನು ಶ್ಲಾಘಿಸಲೇಬೇಕು ಎಂದರು. ಈ ಮಾತಿನ ತುಣುಕು ಕರಾವಳಿಯಲ್ಲಿ ಚರ್ಚೆಗೀಡಾಗಿದೆ. ಉಡುಪಿಯ ಕಾಂಗ್ರೆಸ್ ಬಿಜೆಪಿ ವಾಟ್ಸಪ್ ಗ್ರೂಪ್ ಗಳಲ್ಲಿ ವೀಡಿಯೋ ಓಡಾಡುತ್ತಿದೆ. ಸಭೆಯಲ್ಲಿ ಪರ್ಯಾಯ ಅದಮಾರು ಶ್ರೀ, ಪಲಿಮಾರು ಹಿರಿಯ ಕಿರಿಯ ಸ್ವಾಮೀಜಿ, ಸೋದೆ ಸ್ವಾಮೀಜಿ, ಉಡುಪಿ ಶಾಸಕ ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಶ್ಯಾಮಲಾ ಕುಂದರ್ ವೇದಿಕೆಯಲ್ಲಿ ಇದ್ದರು.

Leave A Reply

Your email address will not be published.