ದೆಹಲಿ ಪ್ರವಾಸ ಕುರಿತು ಮಾಹಿತಿ ನೀಡಿದ ಸಿಎಂ |ಪ್ರಧಾನಿ ಮೋದಿ ಭೇಟಿಗೆ ನಾಳೆ ಸಮಯ ಸಿಗುವ ನಿರೀಕ್ಷೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ದೆಹಲಿ ಪ್ರವಾಸ ಕೈಗೊಂಡಿದ್ದು,ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಮೂಲಕ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ.

ತಮ್ಮ ಪ್ರವಾಸದ ಬಗ್ಗೆ ಇಂದು ಬೆಳಗ್ಗೆ ನಿವಾಸದ ಹೊರಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವರನ್ನು ಭೇಟಿಯಾಗುವ ಕಾರ್ಯಕ್ರಮವಿದೆ. ಪ್ರಧಾನ ಮಂತ್ರಿಗಳ ಭೇಟಿಗೆ ಸಮಯ ಕೇಳಿದ್ದು, ನಾಳೆ ಸಿಗುವ ನಿರೀಕ್ಷೆಯಿದೆ. ಇತರ ಕೇಂದ್ರ ಸಚಿವರುಗಳಿಗೆ ರಾಜ್ಯದ ಯೋಜನೆಗಳು ಮತ್ತು ವಿಶೇಷವಾಗಿ ಅಂತರ್ ರಾಜ್ಯ ಜಲ ವಿವಾದದ ಬಗ್ಗೆ ವಕೀಲರ ಜೊತೆಗೆ ಕೂಡ ಚರ್ಚೆ ಮಾಡುತ್ತೇನೆ ಎಂದರು.

ಕೃಷ್ಣ-ಕಾವೇರಿ ಜಲ ವಿವಾದದ ಕೇಸುಗಳ ಪ್ರಗತಿಯ ಬಗ್ಗೆ ಪರಿಶೀಲನೆ ಮಾಡಿ ಚರ್ಚೆ ಮಾಡುವ ಕಾರ್ಯಕ್ರಮ
ನನ್ನ ಭೇಟಿಯಲ್ಲಿ ನಿಗದಿಯಾಗಿದೆ. ನಂತರ ಸಾಯಂಕಾಲ ಖಾಸಗಿ ಚಾನೆಲ್ ನ ಅಖಿಲ ಭಾರತ ಸಮ್ಮೇಳನದಲ್ಲಿ ಭಾಗಿಯಾಗಲಿದ್ದೇನೆ ಎಂದರು.

ಸಂಪುಟ ವಿಸ್ತರಣೆ ಬಗ್ಗೆ ನನ್ನ ಇಂದಿನ ಭೇಟಿಯಲ್ಲಿ ನಾನು ವಿಚಾರವಿಟ್ಟುಕೊಂಡಿಲ್ಲ. ದೆಹಲಿ ಭೇಟಿಯಲ್ಲಿ ವರಿಷ್ಠರ ಭೇಟಿಯ ಸಂದರ್ಭದಲ್ಲಿ ಈ ಬಗ್ಗೆ ಚರ್ಚೆಯಾಗುತ್ತದೆಯೋ ಗೊತ್ತಿಲ್ಲ ಎಂದಷ್ಟೇ
ಸಿಎಂ ಬೊಮ್ಮಾಯಿ ಹೇಳಿದರು.ನಾಳೆ ಪ್ರಧಾನಿಯವರನ್ನು ಭೇಟಿಯಾದರೆ ಅವರ ಜೊತೆ ಚರ್ಚೆ ನಡೆಸಿ ಸಾಯಂಕಾಲ ಬೆಂಗಳೂರಿಗೆ ವಾಪಸ್ಸಾಗುತ್ತೇನೆ ಎಂದರು.

Leave A Reply

Your email address will not be published.