ಹಾಸನಾಂಬೆಗೆ ದುಡ್ಡಿನ ಆಫರ್‌ ಕೊಟ್ಟ ಕಮರ್ಷಿಯಲ್ ಮನದ ಭಕ್ತ..! | ಎಚ್‌ಡಿ ರೇವಣ್ಣನನ್ನು ಸೋಲಿಸು, ಪ್ರೀತಿಯ ಕೊಳ್ಳೇಗಾಲದ ಹುಡುಗನನ್ನೇ ನನಗೆ ಕೊಡು…. ದೇವಿಯ ಹುಂಡಿಯಲ್ಲಿ ದೊರೆತ ಭಕ್ತರ ತರಹೇವಾರಿ ಪತ್ರಗಳು !

ಹಾಸನ: ಹಾಸನಕ್ಕೆ ಮಾತೋಶ್ರೀ ಹಾಸನಾಂಬೆ ಒಬ್ಬಳೇ. ಆಕೆ ವರ್ಷವಿಡಿ ಅಗೋಚರಳು. ದೀಪಾವಳಿಯ ಆಸುಪಾಸಿನ ಕೇವಲ ಎಂಟರಿಂದ ಹತ್ತು ದಿನಗಳು ಮಾತ್ರ ಆಕೆಯ ದರ್ಶನ ಭಾಗ್ಯ. ಈ ಸಲ ಕೇವಲ ಎಂಟು ದಿನಗಳ ಕಾಲ ಮಾತ್ರ ತೆರೆದಿದ್ದ ಹಾಸನಾಂಬೆಯ ಸಮಕ್ಷಮಕ್ಕೆ ಭಕ್ತರ ವಿಚಿತ್ರ ಮತ್ತು ತರಹೇವಾರಿ ಅಹವಾಲುಗಳು ಸಲ್ಲಿಕೆ ಆಗಿವೆ.

ಅಮ್ಮ ತಾಯಿ ನಾನು ಬೇಡಿದ ವರ ನೀಡಿದರೆ ನಿನ್ನ ಹುಂಡಿಗೆ 5000 ಕೊಡ್ತೀನಿ, ಅಷ್ಟೇ ಅಲ್ಲ ನಾವು ಹೊಳೆನರಸೀಪುರದ ರಾಜಕೀಯದಿಂದ ನೊಂದು ಬೆಂದು ಹೋಗಿದ್ದೇವೆ ಎಲ್ಲವನ್ನು ಪರಿಹರಿಸುವಂತೆ ರಾಜಕೀಯ ಸಂಬಂಧಿ ಅರ್ಜಿಹಾಕಿ ಭಕ್ತರೊಬ್ಬರು ಕೂತಿದ್ದಾರೆ.

ಈ ಸಾರಿ ಹುಂಡಿಯಲ್ಲಿ ಭರ್ಜರಿ ಹಣದ ಜೊತೆಗೆ ಅನೇಕ ಬೇಡಿಕೆ ಪತ್ರಗಳು ದೊರಕಿದ್ದು, ಸಾಕಷ್ಟು ಭಕ್ತರು ತಮ್ಮ ಮನದ ಬಯಕೆಗಳನ್ನು ದೇವಿಯ ಮುಂದೆ ಇಟ್ಟಿದ್ದಾರೆ. ಶಾಸಕರನ್ನು ಬದಲಾಯಿಸಲು, ಬೇಡಿದ ವರ ನೀಡಿದ್ರೆ 5 ಸಾವಿರ ರೂ. ದುಡ್ಡು ಕೊಡ್ತೀನಿ, ಇಷ್ಟದ ಹುಡುಗ ಸಿಗಲಿ, ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸು, ಭ್ರಷ್ಟಾಚಾರಿಗಳಿಗೆ ಶಿಕ್ಷೆಯನ್ನು ನೀಡು ಎಂದು ತರಹೇವಾರಿಯಾಗಿ ಭಕ್ತರು ಹಾಸನಾಂಬೆ ಮುಂದೆ ಬೇಡಿಕೆ ಇಟ್ಟಿದ್ದಾರೆ.

ಹಾಸನಾಂಬೆಗೆ ದುಡ್ಡಿನ ಆಫರ್‌ ಕೊಟ್ಟ ಕಮರ್ಷಿಯಲ್ ಮನದ ಭಕ್ತ..!!

‘ಅಮ್ಮ ತಾಯಿ ಬೇಗ ಪ್ರಮೋಷನ್ ಕೊಡಮ್ಮ, ಒಂದು ವರ್ಷದೊಳಗೆ ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಮಾಡಿಸು. ನಂಗೆ ಗಂಡು ಮಗು ಕರುಣಿಸು, ನಾನು ಬೇಡಿದ ವರವ ಕೊಟ್ಟರೆ ನಿಂಗೆ ಐದು ಸಾವಿರ ಕೊಡ್ತೇನೆ ‘ ಎಂದು ಭಕ್ತರೊಬ್ಬರು ದೇವರಿಗೆ ಐದು ಸಾವಿರ ಆಫರ್ ಕೊಟ್ಟು ಪತ್ರ ಬರೆದಿದ್ದಾರೆ. ಆ ಪತ್ರ ಕುತೂಹಲ ಮೂಡಿಸಿ ಕೂತಿದೆ. ಕೆಲ ಭಕ್ತರು ತಮ್ಮ ನೋವು ದುಗುಡಗಳನ್ನು ಮತ್ತು ಸಮಸ್ಯೆಗಳನ್ನು ಬಗೆಹರಿಸು ತಾಯಿ ಎಂದು ಬರೆದು ಚೀಟಿಗಳನ್ನು ಹಾಕಿದ್ದಾರೆ. ಹಾಸನ ಹಾಗೂ ಹೊಳೆನರಸೀಪುರ ಶಾಸಕರು ಬದಲಾಗುವಂತೆ ಮಾಡು ತಾಯಿ ಎಂದು ಕಾಗದದಲ್ಲಿ ಬರೆದು ಹಾಕಲಾಗಿದೆ.
ಅಲ್ಲೊಬ್ಬರು ರಾಜಕೀಯ ಆಸಕ್ತರು ಎಚ್‌ಡಿ ರೇವಣ್ಣ ಈ ಬಾರಿ ಸೋಲಬೇಕು..!! ನಿನ್ನ ಕೃಪೆಯಿಂದ ‌ಹೊಳೆನರಸೀಪುದ ಎಂಎಲ್ಎ. ಬದಲಾಗಬೇಕು. ಜನರನ್ನು ಕಷ್ಟದಿಂದ ಪಾರುಮಾಡು. ಎಚ್‌ಡಿ ರೇವಣ್ಣ ಕುಟುಂಬ ಸದಸ್ಯರು ಜನರ ಪ್ರಾಣ ಹಿಂಡುತ್ತಿದ್ದಾರೆ. ಅವರ ಕುಟುಂಬದವರನ್ನೆಲ್ಲಾ ಸೋಲಿಸಿ ಬಿಡು ತಾಯಿ. ಅವರು ಯಾರನ್ನು ಕೂಡಾ ಮುಂದೆ ಬರಲು ಬಿಡುತ್ತಿಲ್ಲ. ಹೊಳೆನರಸೀಪುರ ಜನತೆಗೆ ಒಳ್ಳೆಯದು ಮಾಡು ತಾಯಿ ಎಂದು ಬರೆಯಲಾಗಿದ್ದು, ಈ ಪತ್ರದ ಫೋಟೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇನ್ನು, ಗಂಡನ ಕುಡಿತದ ಚಟ ಹೋಗಲಿ ಎಂಬ ಫ್ಯಾಮಿಲಿ ಪ್ರಾಬ್ಲಂ, ನನ್ನ ಮಗ ಶೇಕಡ 90ಕ್ಕೂ ಅಧಿಕ ಅಂಕಗಳನ್ನು ಪಡೆಯಲಿ ಎನ್ನುವ ಚಿಲ್ಡ್ರನ್ ಎಜುಕೇಶನ್ ಕಾಳಜಿ, ನನಗೆ ಕೊಳ್ಳೇಗಾಲದ ಹುಡುಗ ಗಂಡನಾಗಿ ಬರಲಿ ಎಂಬ ಕೊಳ್ಳೇಗಾಲದ ಪ್ರೀತಿಯ ಮಾಂತ್ರಿಕನನ್ನು ನೆನೆಸಿಕೊಂಡು ಬರೆದ ಆಕೆಯ ಲವ್ ಮ್ಯಾಟರ್, ನಮ್ಮ ಮನೆಯ ಮುಂದೆ ರಸ್ತೆ ಗುಂಡಿ ಬಿದ್ದು ಅದು ಬೇಗ ಸರಿಯಾಗಲಿ ಎಂಬ ಲೋಕಲ್ ಸಮಸ್ಯೆ ವರ್ಷದೊಳಗೆ ನನ್ನ ಮಗಳ ಮದುವೆಯಾದರೆ ನಿನಗೆ ಕಾಣಿಕೆ ಅರ್ಪಿಸುತ್ತೇನೆ ಹೀಗೆ ಜನರು ನೂರಾರು. ಸಮಸ್ಯೆ ಸಾವಿರದ ಇನ್ನೂರು. ಇದರ ಜೊತೆಗೆ ನಾನು ಇಷ್ಟ ಪಟ್ಟಿರುವ ಹುಡುಗನ ಜೊತೆ ಮದುವೆ ಮಾಡು ಎಂದು ಯುವತಿ ಒಬ್ಬಳು ತನ್ನ ಗೆಳೆಯನನ್ನು ನೆನೆದು, ಕಣ್ಣೀರು ಹನಿದು ರಕ್ತದಲ್ಲಿ ಪತ್ರ ಬರೆದಿದ್ದಾಳೆ. ಆ ಮೂಲಕ ತಮ್ಮ ಪರ್ಸನಲ್ ಸಮಸ್ಯೆಗಳನ್ನು ದೇವಿಯ ಮುಂದೆ ಪರಿಹರಿಸುವಂತೆ ಅಲವತ್ತುಕೊಂಡಿದ್ದಾರೆ.

ಆದರೆ ಅಲ್ಲೊಬ್ಬರು ಸಮಾಜ ಮುಖಿ ಮನುಷ್ಯರು ಮಾತ್ರ, ‘ರಾಜ್ಯದಲ್ಲಿ ಮೊದಲು ಲೋಕಾಯುಕ್ತ ಇಲಾಖೆ ಭ್ರಷ್ಟಾಚಾರದಲ್ಲಿ ಮಲಗಿತ್ತು ಅದನ್ನ ಎಸಿಬಿ ಮಾಡಿ ಅಲ್ಲಿಯೂ ಕೂಡ ನುಂಗಣ್ಣರು ಹೆಚ್ಚಾಗಿದ್ದಾರೆ. ಭ್ರಷ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಮಟ್ಟಹಾಕಿ ಬಲಿಷ್ಠ ಕಾನೂನು ಜಾರಿಯಾಗುವಂತೆ ಮಾಡು ಇದರ ಜೊತೆಗೆ ಭೂವ್ಯಾಜ್ಯಗಳಿಗಾಗಿ ಗ್ರಾಮೀಣ ಭಾಗದ ರೈತರು ನ್ಯಾಯಾಲಯಕ್ಕೆ ಅಲೆದಾಡುತ್ತಿರುವ ಸಂಕಷ್ಟ ನೋಡಲಾಗುತ್ತಿಲ್ಲ. ಅದನ್ನು ಬೇಗ ಪೂರೈಸು ದೇವಿ’ ಎಂದು ತೀರಾ ಯಾರೂ ಊಹಿಸಿಕೊಳ್ಳಲಾರದಂತೆ ಮತ್ತು ವಿಭಿನ್ನವಾಗಿಯೂ ಕೂಡ ದೇವರಿಗೆ ಸೋಶಿಯಲ್ ರಿಕ್ವೆಸ್ಟ್ ಮಾಡಿದ್ದಾರೆ.
ರಾಜ್ಯದಲ್ಲಿ ರಮ್ಮಿ ಸರ್ಕಲ್ ಎಂಬ ಜೂಜಾಟ ಪ್ರಾರಂಭವಾಗಿದ್ದು, ಇದರ ಬಗ್ಗೆ ಯುವಕರು ಮತ್ತು ಅದಕ್ಕೆ ಮಾರುಹೋಗಿ ಸಾಕಷ್ಟು ಹಣವನ್ನು ಕಳೆದುಕೊಳ್ಳುತ್ತಾರೆ ದಯಮಾಡಿ ಕೋವಿಡ್ 19 ರ ಸಂದರ್ಭದಲ್ಲಿ ನಮ್ಮ ದೇಶದ ಸುಮಾರು 30 ಕೋಟಿ ಎಷ್ಟು ಹಣ ಇತರರ ಪಾಲಾಗಿದೆ. ಇದರಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಶಿಕ್ಷಿಸುವಂತೆ ಹಾಸನಂಬ ದೇವಿಯಲ್ಲಿ ಭಕ್ತನೊಬ್ಬ ನೋವಿನ ಮೂಲಕ ಪತ್ರದಲ್ಲಿ ಬರೆದು ಹರಕೆ ಹೊತ್ತಿದ್ದಾನೆ. ವಿಭಿನ್ನ ಸಮಸ್ಯೆ ಎತ್ತಿಕೊಂಡು ಬರೆದ ಪತ್ರಗಳು ದೇವಿಯ ಹುಂಡಿ ಸೇರಿ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಬರ್ತಿವೆ. ದೇವರು ಪರಿಹಾರ ಮಾಡದೆ ಇರಲಾರ ಎಂಬ ನಂಬಿಕೆ ಜನರಲ್ಲಿ ಉಳಿದಿದೆ.

Leave A Reply

Your email address will not be published.