ಮಂಗಳೂರು: ಯುವತಿಯನ್ನು ರೇಗಿಸಿದರೆಂಬ ಕಾರಣಕ್ಕೆ ಎರಡು ತಂಡಗಳ ನಡುವೆ ಹೊಡೆದಾಟ

ಯುವತಿಗೆ ತಮಾಷೆ ಮಾಡಿದರೆಂಬ ಆರೋಪದಲ್ಲಿ ಯುವಕರ ತಂಡ ಪರಸ್ಪರ ಹೊಡೆದಾಡಿಕೊಂಡ ಘಟನೆ ಮಂಗಳೂರು ನಗರದ ಕದ್ರಿ ಬಟ್ಟಗುಡ್ಡೆ ಬಳಿ ಬುಧವಾರ ಸಂಜೆ ನಡೆದಿದೆ.

ಯುವತಿ ಮತ್ತು ಯುವಕ ರೆಸ್ಟೋರೆಂಟ್‌ವೊಂದಕ್ಕೆ ಬಂದಿದ್ದರು. ಈ ಸಂದರ್ಭ ಅಲ್ಲಿದ್ದ ಯುವಕರ ತಂಡ ರೇಗಿಸಿದರೆಂಬ ನೆಪದಲ್ಲಿ ಯುವತಿ ಜೊತೆಗಿದ್ದಾತ ತಗಾದೆ ತೆಗೆದಿದ್ದಾನೆ. ಈ ಸಂದರ್ಭ ಮಾತಿಗೆ ಮಾತು ಬೆಳೆದಿದೆ. ಕೂಡಲೇ ಯುವತಿ ಜೊತೆಗಿದ್ದ ಯುವಕ ಮತ್ತಷ್ಟು ಗೆಳೆಯರನ್ನು ಕರೆದಿದ್ದು, ಇದರಿಂದ ಯುವಕರು ಸೇರಿಕೊಂಡು ಹೊಡೆದಾಡಿಕೊಂಡಿದ್ದಾರೆ. ಯುವಕನೊಬ್ಬನ ಹಣೆಗೆ ಕಲ್ಲಿನಿಂದ ಹಲ್ಲೆ ನಡೆಸಿದ ಕಾರಣ ಗಾಯವಾಗಿದೆ.

ವಿಷಯ ತಿಳಿದ ಕೂಡಲೇ ಕದ್ರಿ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಪೊಲೀಸರನ್ನು ನೋಡಿ ಯುವಕರ ಒಂದು ತಂಡ ಸ್ಥಳದಿಂದ ಪರಾರಿಯಾಗಿದೆ. ಬಳಿಕ ಪೊಲೀಸರು ಯುವತಿಯನ್ನು ವಿಚಾರಿಸಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.