ಕಾರಿಂಜ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆ | ನಾಲ್ವರ ಬಂಧನ

ಬಂಟ್ವಾಳ : ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಒಳಗೆ ಚಪ್ಪಲಿ ಧರಿಸಿ ಪ್ರವೇಶಿಸಿದ ಆರೋಪಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಬಶೀರ್ ರಹ್ಮಾನ್ (20), ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಇಸ್ಮಾಯೀಲ್, ಉಳ್ಳಾಲ ಹಳೆಕೋಟೆ ನಿವಾಸಿ ಮುಹಮ್ಮದ್ ತಾನಿಶ್ (19) ಹಾಗೂ ಬಬ್ಬುಕಟ್ಟೆ ಪೆರ್ಮನ್ನೂರು ನಿವಾಸಿ ಮುಹಮ್ಮದ್ ರಶಾದ್(19) ಬಂಧಿತ ಆರೋಪಿಗಳು.

ಆರೋಪಿಗಳು ದೇವಳದ ಒಳಗೆ ಚಪ್ಪಲಿ ಹಾಕಿ ಪ್ರವೇಶ ಮಾಡಿದ್ದಲ್ಲದೆ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆನ್ನಲಾಗಿದೆ.

ಈ ಬಗ್ಗೆ ದೇವಾಲಯದ ಆಡಳಿತ ಮಂಡಳಿ ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಇಬ್ಬರು ಆರೋಪಿಗಳು ಇದ್ದ ಬಗ್ಗೆ ವೀಡಿಯೊದಲ್ಲಿ ಕಂಡುಬರುತ್ತಿದ್ದು, ಅವರ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.